newsics.com
ಮೈಸೂರು: ನಟಿ ರನ್ಯಾ ರಾವ್ ಪ್ರಕರಣದ ಜತೆಗೆ ಈಗ ಡಿಜಿಪಿ ಕೆ.ರಾಮಚಂದ್ರ ರಾವ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ರಾಮಚಂದ್ರ ರಾವ್ ಅವರ ಹೆಸರು ತಳಕು ಹಾಕಿಕೊಂಡಿರುವ 2014ರ ಇಲವಾಲ ಪೊಲೀಸ್ ದರೋಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.
ಚಿನ್ನ ಕಳ್ಳಸಾಗಣೆಯಲ್ಲಿ ಬಂಧನಕ್ಕೊಳಗಾಗಿರುವ ಮಲಮಗಳು ನಟಿ ರನ್ಯಾ ರಾವ್ರಿಂದ ರಾಮಚಂದ್ರ ರಾವ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಹಳೇ ಪ್ರಕರಣವೊಂದರಲ್ಲಿ ಅಧಿಕಾರಿಗೆ ಮತ್ತೊಂದು ತಲೆನೋವು ಎದುರಾಗಿದೆ.
ಪ್ರಕರಣ ನಡೆದು 11 ವರ್ಷಗಳಾಗಿದ್ದು, ಮತ್ತೆ ಕೇಸ್ ಚರ್ಚೆಗೆ ಬಂದಿದೆ. ಪ್ರಕರಣಕ್ಕೆ ಮರುಜೀವ ಕೊಡಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಸಿಬಿಐಗೆ 9 ಪುಟಗಳ ಪತ್ರ ಬರೆದಿದ್ದಾರೆ.
2.27 ಕೋಟಿ ಹಣ ಹಾಗೂ ಎರಡು ಕೆಜಿ ಚಿನ್ನ ದರೋಡೆ ಮಾಡಿದ್ದ ಬಗ್ಗೆ ಪೊಲೀಸರ ವಿರುದ್ಧವೇ ದೂರು ದಾಖಲಾಗಿತ್ತು. ಈ ಬಗ್ಗೆ ಸಿಐಡಿ ತನಿಖೆ ಕೂಡ ನಡೆದಿತ್ತು. ಐಜಿಪಿ ರಾಮಚಂದ್ರ ರಾವ್ ಗನ್ಮ್ಯಾನ್ ಹಾಗೂ ಸೌತ್ ಪೊಲೀಸ್ ಠಾಣೆ ಸಿಬ್ಬಂದಿ ಸೇರಿ ಡಿವೈಎಸ್ಪಿ ಸ್ಕ್ವಾಡ್ ಮೇಲೆ ದರೋಡೆ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ವಿಚಾರಣೆ ನಡೆದು ಎಲ್ಲರೂ ಆರೋಪ ಮುಕ್ತರಾಗಿದ್ರು. ಆದರೆ, ಈವರೆಗೂ ಗೋಲ್ಡ್ ಸ್ಮಗ್ಲಿಂಗ್ ಹಾಗೂ ಹವಾಲ ಹಣದ ಮೂಲದ ಬಗ್ಗೆ ಸಿಐಡಿ ಪೊಲೀಸರು ಯಾವುದೇ ತನಿಖೆ ಮಾಡಿರಲಿಲ್ಲ. ಸದ್ಯ ಮತ್ತೆ ಪ್ರಕರಣಕ್ಕೆ ಮರುಜೀವ ಕೊಡಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಸಿಬಿಐಗೆ ಪತ್ರ ಬರೆದಿದ್ದಾರೆ.
ಅಂದು ಚಿನ್ನ ಕಳ್ಳಸಾಗಣೆ ಮಾಡಿದ ವ್ಯಕ್ತಿಗಳ ವಿರುದ್ಧ ಹಾಗೂ ಪ್ರಕರಣ ಮುಚ್ಚಿ ಹಾಕಿದ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಅಂದಿನ ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಅಂದಿನ ಸಿಐಡಿ ಐಜಿಪಿ ಪ್ರಣಬ್ ಮೊಹಂತಿ, ಎಸ್ಪಿ ಕೃಷ್ಣ ಭಟ್, ಡಿವೈಎಸ್ಪಿ ರಾಘವೇಂದ್ರ ಹೆಗ್ಡೆ, ಅಂದಿನ ಮೈಸೂರು ಎಸ್ಪಿ ಅಭಿನವ ಖರೆ, ಡಿವೈಎಸ್ಪಿ ವಿಕ್ರಂ ಆಮ್ಟೆ ಹಾಗೂ ಇಲವಾಲ ಪೊಲೀಸ್ ಸಬ್ಇನ್ಸ್ಪೆಕ್ಟರ್ ಗಣೇಶ್ ಸೇರಿ ಹಲವರ ವಿರುದ್ಧ ಸಿಬಿಐಗೆ ದೂರು ನೀಡಿದ್ದಾರೆ
ದೂರಿನ ಜತೆಗೆ ವಿಡಿಯೋ ಸಾಕ್ಷಿಗಳು ಹಾಗೂ ಇತರ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದಾರೆ. ನಟಿ ರನ್ಯಾ ರಾವ್ ಪ್ರಕರಣದ ಜತೆಗೆ ಇದನ್ನು ಸೇರಿಸಿಕೊಂಡು ತನಿಖೆ ಮಾಡಬೇಕು. ಸಾಧ್ಯವಾಗದಿದ್ದರೆ ಪ್ರತ್ಯೇಕ ಪ್ರಕರಣವಾಗಿ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. 2014 ರಿಂದಲೇ ಈ ರೀತಿ ಚಿನ್ನ ಕಳ್ಳಸಾಗಣೆ ನಡೆದುಕೊಂಡು ಬರುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಾಡಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದರೆ ಇಂತಹ ಪ್ರಕರಣ ಮರುಕಳಿಸುವುದನ್ನು ತಡೆಯಬಹುದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆ ಮೇಲೆ ದಾಳಿ: 90ಕ್ಕೂ ಹೆಚ್ಚು ಸೈನಿಕರ ಸಾವು