newsics.com | ನ್ಯೂಸಿಕ್ಸ್
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಬಾರಿ ಭೀಕರ ಭೂಕುಸಿತದ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ 16 ಅಪಾಯಕಾರಿ ಸ್ಥಳಗಳನ್ನು ಗುರುತಿಸಿದೆ. ಅತಿ ಹೆಚ್ಚು ಮಳೆಯಾಗುವ ಸಕಲೇಶಪುರ ತಾಲೂಕಿನಲ್ಲಿ 16 ಭೂಕುಸಿತ ಸಂಭವನೀಯ ಪ್ರದೇಶಗಳು ಹಾಗೂ 4 ಪ್ರವಾಹ ಪೀಡಿತ ಜಾಗಗಳನ್ನು ಪತ್ತೆಹಚ್ಚಲಾಗಿದ್ದು, ಅಲ್ಲಿನ ನಿವಾಸಿಗಳಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಬದಲಿ ವ್ಯವಸ್ಥೆ ಮಾಡದ ಹೊರತು ಜಾಗ ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅಪಾಯಕಾರಿ ಎಂದು ಗುರುತಿಸಲಾಗಿರುವ ಈ ಪ್ರದೇಶಗಳಲ್ಲಿ ಕಳೆದ 50 ವರ್ಷಗಳಿಂದ ಹತ್ತಾರು ಕುಟುಂಬಗಳು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿವೆ. ಈಗ ಮಳೆಗಾಲದ ಸುರಕ್ಷತೆಯ ದೃಷ್ಟಿಯಿಂದ ತಾಲೂಕು ಆಡಳಿತವು ದಿಢೀರ್ ನೋಟಿಸ್ ನೀಡಿ ಜಾಗ ಖಾಲಿ ಮಾಡಲು ಹೇಳಿರುವುದು ನಿವಾಸಿಗಳ ನೆಮ್ಮದಿ ಕೆಡಿಸಿದೆ.
“ನಮಗೆ ಸರ್ಕಾರವೇ ಬದಲಿ ಜಾಗ ನೀಡಬೇಕು ಇಲ್ಲವೇ ಬಾಡಿಗೆ ಹಣ ಭರಿಸಬೇಕು. ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಕೇವಲ ಸರ್ಕಾರಿ ಜಾಗ ಎಂಬ ಕಾರಣಕ್ಕೆ ನಮ್ಮನ್ನು ಒಕ್ಕಲೆಬ್ಬಿಸಿದರೆ, ಪ್ರಾಣ ಹೋದರೂ ನಾವು ಮನೆ ಖಾಲಿ ಮಾಡುವುದಿಲ್ಲ” ಎಂದು ನಿವಾಸಿಗಳು ಆಡಳಿತದ ವಿರುದ್ಧ ಪಟ್ಟು ಹಿಡಿದಿದ್ದಾರೆ.
ಶಾಸಕ ಸಿಮೆಂಟ್ ಮಂಜು ಆಕ್ರೋಶ
ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ಸಕಲೇಶಪುರ ತಾಲೂಕಿನಲ್ಲಿ ಗುಡ್ಡ ಕುಸಿತ ಮತ್ತು ಪ್ರವಾಹ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಅವರು ಮಳೆಗಾಲದಲ್ಲಿ ಸಂಭವಿಸಬಹುದಾದ ಸಾವು-ನೋವುಗಳನ್ನು ತಡೆಯಲು ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಮನೆ ಕಳೆದುಕೊಳ್ಳುವ ಬಡ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ಹಾಗೂ ಬದಲಿ ಜಾಗ ನೀಡಿ ಗೌರವಯುತವಾಗಿ ಸ್ಥಳಾಂತರ ಮಾಡಬೇಕೆಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಪ್ರತಿ ಮಳೆಗಾಲದಲ್ಲೂ ಜೀವ ಭಯದಲ್ಲೇ ದಿನದೂಡುವ ಸಕಲೇಶಪುರದ ಬೆಟ್ಟದ ತಪ್ಪಲಿನ ಜನರಿಗೆ, ತಾಲೂಕು ಆಡಳಿತದ ಈ ದಿಢೀರ್ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಇನ್ನಾದರೂ ಸೂಕ್ತ ಕ್ರಮ ಕೈಗೊಂಡು ಇವರಿಗೆ ಪುನರ್ವಸತಿ ಕಲ್ಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
FIFA World Cup Ticket Price ಫಿಫಾ ವಿಶ್ವಕಪ್ ಫೈನಲ್ ಟಿಕೆಟ್ಗೆ ಭಾರಿ ಡಿಮ್ಯಾಂಡ್: ಒಂದೇ ಸೀಟಿಗೆ 22 ಕೋಟಿ ರೂ