newsics.com | ನ್ಯೂಸಿಕ್ಸ್
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಸಿದ್ಧ ಸ್ಯಾಂಕಿ ಕೆರೆಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ತೇಜು ಎಂದು ಗುರುತಿಸಲಾಗಿದ್ದು, ಇಂದು (ಜುಲೈ 7) ಮುಂಜಾನೆ ಆಕೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸದಾಶಿವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ತೇಜು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಪ್ರಿಯಕರನಿಗೆ ಮೊಬೈಲ್ನಲ್ಲಿ ಸಂದೇಶ (Message) ಕಳುಹಿಸಿದ್ದಳು. ಆ ಬಳಿಕ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಕೆರೆಗೆ ಹಾರಿ ಜೀವ ಬಿಟ್ಟಿರುವುದು ತಿಳಿದುಬಂದಿದೆ.
ಮೃತ ತೇಜು ಅವರ ಪೋಷಕರು ಪರಸ್ಪರ ವಿಚ್ಛೇದನ ಪಡೆದು ದೂರಾಗಿದ್ದರು ಎನ್ನಲಾಗಿದೆ. ತಾಯಿ ನಮ್ಮ ಮೆಟ್ರೋದಲ್ಲಿ ಉದ್ಯೋಗಿಯಾಗಿದ್ದು, ಮಗಳನ್ನು ಓದಿಸುತ್ತಿದ್ದರು. ತೇಜು ಅವರು ಬೆಂಗಳೂರಿನ ಚಿಕ್ಕಬಾಣಾವರ ಸಮೀಪದ ಕಾಲೇಜೊಂದರಲ್ಲಿ ಪದವಿ (Degree) ವ್ಯಾಸಂಗ ಮಾಡುತ್ತಿದ್ದರು. ಆದರೆ ಪ್ರಿಯಕರನಿಗೆ ಮೆಸೇಜ್ ಕಳುಹಿಸಿ ಈ ರೀತಿ ತೀವ್ರ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂಬುದು ಇನ್ನೂ ನಿಗೂಢವಾಗಿದೆ.
ಘಟನಾ ಸ್ಥಳಕ್ಕೆ ವಿಜ್ಞಾನ ವಿಭಾಗದ ಸಾಕ್ಷ್ಯ ಸಂಗ್ರಹಣಾ ತಂಡವಾದ ‘ಸೋಕೋ’ (SOCO) ಅಧಿಕಾರಿಗಳನ್ನು ಕರೆಯಿಸಲಾಗಿದೆ. ಪೊಲೀಸರು ಕೆರೆಯ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಯುವತಿಯ ಸಾವು ಆತ್ಮಹತ್ಯೆಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ಪಿತೂರಿ ಇದೆಯೇ ಎಂಬ ನಿಟ್ಟಿನಲ್ಲಿ ತೇಜು ಕುಟುಂಬಸ್ಥರು ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
High Court ಸಾಕುನಾಯಿ ಕಚ್ಚಿದರೆ ಮಾಲೀಕರಿಗೆ ಬೀಳುತ್ತೆ ದಂಡ, ಹೈಕೋರ್ಟ್ನಿಂದ ಶ್ವಾನ ಪ್ರೇಮಿಗಳಿಗೆ ಖಡಕ್ ವಾರ್ನಿಂಗ್