newsics.com | ನ್ಯೂಸಿಕ್ಸ್
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾ ಸಮೀಪದ ಸವಾರ್ನಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ಹಮ್ಮಿಕೊಂಡಿದ್ದ ಸಾರ್ವಜನಿಕ ರ್ಯಾಲಿಯ ವೇಳೆ ಈ ಘಟನೆ ನಡೆದಿದ್ದು, ಕನಿಷ್ಠ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ನಡೆದಿದ್ದ ಐತಿಹಾಸಿಕ ವಿದ್ಯಾರ್ಥಿ ಚಳುವಳಿಯ ಎರಡನೇ ವರ್ಷಾಚರಣೆಯ ನೆನಪಿಗಾಗಿ ಎನ್ಸಿಪಿ ಈ ರಾಜಕೀಯ ಅಭಿಯಾನವನ್ನು ಆಯೋಜಿಸಿತ್ತು. ಸೋಮವಾರ ರಾತ್ರಿ ಸುಮಾರು 9:45 ರ ವೇಳೆಗೆ ಸವಾರ್ ಠಾಣಾ ಸ್ಟ್ಯಾಂಡ್ ಈದ್ಗಾ ಮೈದಾನದಲ್ಲಿ ರ್ಯಾಲಿ ಮುಕ್ತಾಯದ ಹಂತ ತಲುಪಿದ್ದಾಗ ಈ ದುರಂತ ಸಂಭವಿಸಿದೆ.
ವೇದಿಕೆ ಮುಂಭಾಗದಲ್ಲೇ ಬ್ಲಾಸ್ಟ್; ವೈರಲ್ ಆಯ್ತು ವಿಡಿಯೋ
ಪಕ್ಷದ ಪ್ರಮುಖ ಮುಖಂಡರೊಬ್ಬರು ವೇದಿಕೆಯ ಮೇಲಿಂದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಈ ಸ್ಫೋಟ ಸಂಭವಿಸಿದೆ. ನಾಯಕರು ಭಾಷಣ ಮಾಡುತ್ತಿದ್ದಾಗ, ಮುಂಭಾಗದಲ್ಲಿ ನೆರೆದಿದ್ದ ಸಾರ್ವಜನಿಕರ ಮಧ್ಯೆ ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಗೊಂಡಿರುವ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿವೆ. ಅನಿರೀಕ್ಷಿತ ಧಮಾಕಾದಿಂದಾಗಿ ಸ್ಥಳದಲ್ಲಿದ್ದ ಜನರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
“ಸಭೆ ಮುಗಿಯುವ ಹಂತದಲ್ಲಿದ್ದಾಗ ಉಗ್ರರು ಈ ಬಾಂಬ್ ಸ್ಫೋಟಿಸಿದ್ದಾರೆ” ಎಂದು ಎನ್ಸಿಪಿ ಆರೋಪಿಸಿದೆ. ಸದ್ಯ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯ ಬೆನ್ನಲ್ಲೇ ಸ್ಥಳೀಯ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಇದು ಉದ್ದೇಶಪೂರ್ವಕ ಪಿತೂರಿಯೇ ಅಥವಾ ಆಕಸ್ಮಿಕವೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
#WATCH | Dhaka, Bangladesh: A reported bomb explosion occurred in Savar, near Dhaka, during a rally organised by the newly formed National Citizen Party (NCP), injuring at least three people.
The march marks the second anniversary of the student protests against former… pic.twitter.com/XbrsqDErE9
— ANI (@ANI) July 6, 2026
ಕೆಲ ದಿನಗಳ ಹಿಂದಷ್ಟೇ ಲೈಟರ್ ಕಾರ್ಖಾನೆಯಲ್ಲಿ ಅಗ್ನಿ ದುರಂತ: ಐವರ ಸಾವು
ಬಾಂಗ್ಲಾದೇಶದಲ್ಲಿ ಈ ಬಾಂಬ್ ಸ್ಫೋಟದ ಆತಂಕ ಮೂಡುವ ಕೆಲವೇ ದಿನಗಳ ಮುನ್ನ ಢಾಕಾ ಪ್ರಾಂತ್ಯದಲ್ಲಿ ಮತ್ತೊಂದು ಭೀಕರ ದುರಂತ ನಡೆದಿತ್ತು. ಕೆರಾನಿಗಂಜ್ನ ಕದಮ್ತಲಿ ಪ್ರದೇಶದಲ್ಲಿರುವ ಗ್ಯಾಸ್ ಲೈಟರ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಐದು ಜನರು ಜೀವಂತವಾಗಿ ದಹನವಾಗಿದ್ದರು.
ಮಧ್ಯಾಹ್ನದ ವೇಳೆ ಕಾಣಿಸಿಕೊಂಡ ಭೀಕರ ಜ್ವಾಲೆಯನ್ನು ನಂದಿಸಲು ಸುಮಾರು ಏಳು ಅಗ್ನಿಶಾಮಕ ವಾಹನಗಳು ಸತತ ಕಾರ್ಯಾಚರಣೆ ನಡೆಸಿದ್ದವು. ಸಂಜೆಯ ವೇಳೆಗೆ ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದರೂ, ಮೃತರ ಗುರುತು ಪತ್ತೆಯಾಗಿರಲಿಲ್ಲ. ಈ ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಎರಡೂ ಘಟನೆಗಳು ಬಾಂಗ್ಲಾದೇಶದಲ್ಲಿ ತಲ್ಲಣ ಸೃಷ್ಟಿಸಿವೆ.
Rain alert ಮುಂದಿನ 3 ದಿನ ಭಾರಿ ಮಳೆಯ ಮುನ್ಸೂಚನೆ: ಉತ್ತರ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆ