newsics.com | ನ್ಯೂಸಿಕ್ಸ್
ಮಂಗಳೂರು: ನೂರಾರು ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳ ಜನರಿಗೆ ದಾರಿದೀಪವಾಗಿದ್ದ, ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಜನಪ್ರಿಯರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಉಷಾ ಹಾಗೂ ಮೂವರು ಮಕ್ಕಳನ್ನು ಒಳಗೊಂಡ ಅಪಾರ ಬಂಧು-ಬಳಗವನ್ನು ತೊರೆದಿದ್ದಾರೆ.
ಸುಳ್ಯದ ಅರಂಬೂರಿನಿಂದ ದೇಶದ ಮೂಲೆ ಮೂಲೆಗೆ ಹಬ್ಬಿದ ಖ್ಯಾತಿ
1950 ಮೇ 2 ರಂದು ಸುಳ್ಯದಲ್ಲಿ ಜನಿಸಿದ ಗಿರೀಶ್ ಭಾರದ್ವಾಜ್ ಅವರು, 1973 ರಲ್ಲಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಿಂದ ಯಾಂತ್ರಿಕ ಇಂಜಿನಿಯರಿಂಗ್ (ಮೆಕ್ಯಾನಿಕಲ್) ಪದವಿ ಮುಗಿಸಿದ್ದರು. ಗ್ರಾಮೀಣ ಭಾಗದ ನಾಗರಿಕರ ಸಂಕಷ್ಟಗಳಿಗೆ ತಾಂತ್ರಿಕತೆಯ ಮೂಲಕ ಪರಿಹಾರ ಹುಡುಕ ಹೊರಟ ಇವರು, 1989ರಲ್ಲಿ ತಮ್ಮದೇ ಆದ ಸುಳ್ಯದ ಅರಂಬೂರು ಗ್ರಾಮದ ಪಯಸ್ವಿನಿ ನದಿಗೆ ಪ್ರಥಮ ಬಾರಿಗೆ ಅತ್ಯಂತ ಕಡಿಮೆ ವೆಚ್ಚದ ತೂಗು ಸೇತುವೆ ನಿರ್ಮಿಸಿಕೊಟ್ಟರು. ಅಲ್ಲಿಂದ ಆರಂಭವಾದ ಇವರ ಯಶೋಗಾಥೆ ಭಾರತದ ಇತಿಹಾಸದ ಪುಟ ಸೇರಿತು.
ಹಳ್ಳಿಗಳ ಪಾಲಿಗೆ ಸಂಜೀವಿನಿಯಾದ 120 ಸೇತುವೆಗಳು:
ದಟ್ಟ ಅರಣ್ಯಗಳು, ಹರಿಯುವ ನದಿಗಳನ್ನು ದಾಟಲು ಸೂಕ್ತ ವ್ಯವಸ್ಥೆಯಿಲ್ಲದೆ ಕೇವಲ ದೋಣಿಗಳನ್ನೇ ನಂಬಿ ಬದುಕುತ್ತಿದ್ದ ನೂರಾರು ಹಳ್ಳಿಗಳಿಗೆ ಇವರ ತೂಗು ಸೇತುವೆಗಳು ಹೊಸ ಆಶಾಕಿರಣ ಮೂಡಿಸಿದವು. ಕರ್ನಾಟಕ ಮಾತ್ರವಲ್ಲದೆ ಕೇರಳ, ತೆಲಂಗಾಣ ಮತ್ತು ಒಡಿಶಾ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಗ್ರಾಮಾಂತರ ಪ್ರದೇಶಗಳಲ್ಲಿ ಇವರು ಬರೋಬ್ಬರಿ 120 ಕ್ಕೂ ಹೆಚ್ಚು ಪರಿಸರ ಪೂರಕ ತೂಗು ಸೇತುವೆಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದರು.
ರಾಷ್ಟ್ರಮಟ್ಟದ ಮನ್ನಣೆ
ಗ್ರಾಮೀಣ ಭಾರತಕ್ಕೆ ಇವರು ನೀಡಿದ ಈ ಅನನ್ಯ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರವು 2017 ರಲ್ಲಿ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ನೀಡಿ ಸತ್ಕರಿಸಿತ್ತು. ಇದರ ಜೊತೆಗೆ ಟಿವಿ9 ಸಂಸ್ಥೆಯು ‘ನವನಕ್ಷತ್ರ’ ಪ್ರಶಸ್ತಿ ನೀಡಿ ಗೌರವಿಸಿತ್ತು.
ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಾಂತ್ರಿಕ ಲೋಕದ ಗಣ್ಯರು, ಜನಪ್ರತಿನಿಧಿಗಳು ಹಾಗೂ ಅವರು ನಿರ್ಮಿಸಿದ ಸೇತುವೆಗಳ ಫಲಾನುಭವಿಗಳಾದ ಸಹಸ್ರಾರು ಗ್ರಾಮೀಣ ಜನತೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳನ್ನು ನಗರದೊಂದಿಗೆ ಬೆಸೆದಿದ್ದ ಅಪರೂಪದ ತಾಂತ್ರಿಕ ದ್ರಷ್ಟಾರನೊಬ್ಬನನ್ನು ದೇಶ ಇಂದು ಕಳೆದುಕೊಂಡಿದೆ.
Crime ರ್ಯಾಲಿಯಲ್ಲಿ ಭೀಕರ ಬಾಂಬ್ ಸ್ಫೋಟ: ಮೂವರಿಗೆ ಗಂಭೀರ ಗಾಯ- ವೀಡಿಯೊ ನೋಡಿ https://www.newsics.com/2026/07/07/bangladesh-dhaka-rally-bomb-blast-factory-fire/