newsics.com/ನ್ಯೂಸಿಕ್ಸ್
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ನಿನ್ನೆ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಬಹಳ ಒಳ್ಳೆಯ ಸಂದೇಶವಿದೆ. ಹಲವು ಉತ್ತಮ ವಿಷಯಗಳನ್ನು ಸಿನಿಮಾ ಹೇಳುತ್ತಿದೆ. ಕ್ರೀಡೆಯ ಮಹತ್ವ, ಛಲ ಬಿಡದೆ ಹೋರಾಡುವ ಸ್ಪೂರ್ತಿ, ಗ್ರಾಮೀಣ ವಿಕಾಸ, ಮೂಲ ಸೌಕರ್ಯಗಳ ಅಗತ್ಯತೆ, ಅಂಗವೈಕಲ್ಯ ಶಾಪವಲ್ಲ ಎಂಬಿತ್ಯಾದಿ ಉತ್ತಮ ಸಂದೇಶಗಳನ್ನು ಈ ಸಿನಿಮಾ ಒಳಗೊಂಡಿದೆ. ಇಷ್ಟೆಲ್ಲ ಇದ್ದಾಗಿಯೂ ಸಹ ಸಿನಿಮಾನಲ್ಲಿ ನಾಯಕಿಯನ್ನು ತೋರಿಸುವ ವಿಧಾನದಿಂದಾಗಿ ಸಿನಿಮಾದ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ನಿರ್ದೇಶಕನ ಒಂದು ಕೆಟ್ಟ ನಿರ್ಧಾರದಿಂದ ಈಗ ಸಿನಿಮಾದ ಒಳ್ಳೆಯ ವಿಷಯಗಳು ಬದಿಗೆ ಸರಿದಿದೆ.
ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಎಂಎಲ್ಎ ಕ್ಯಾಂಡಿಡೇಟ್ ಒಬ್ಬಾತನ ಪುತ್ರಿ ಆಕೆ. ಮೊದಲಾರ್ಧದಲ್ಲಿ ಕೆಲವಾರು ಸೀನ್ಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿರ್ದೇಶಕ ಬುಚ್ಚಿಬಾಬು ಸನಾ, ಜಾನ್ಹವಿಯನ್ನು ನಾಯಕಿಯಾಗಿ ಅಲ್ಲ ಬದಲಾಗಿ ಗ್ಲಾಮರ್ ಗೊಂಬೆಯಾಗಿ ಮಾತ್ರವೇ ಬಳಸಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ಜಾನ್ಹವಿ ಸೀನ್ ಬಂದಾಗಲೆಲ್ಲ ಕ್ಯಾಮೆರಾ, ಜಾನ್ಹವಿಯ ಸೊಂಟ, ಎದೆಯ ಕಡೆಗೆ ಜಾರಿದೆ. ಜಾನ್ಹವಿಯ ಮುಖಕ್ಕಿಂತಲೂ ಹೆಚ್ಚಾಗಿ ಆಕೆಯ ಇತರೆ ಅಂಗಾಂಗಗಳನ್ನೇ ನಿರ್ದೇಶಕರು ತೋರಿಸಿದ್ದಾರೆ.
ಜಾನ್ಹವಿಯ ಪಾತ್ರವನ್ನು ಗ್ಲಾಮರ್ ಹೊರತಾಗಿ ಇನ್ಯಾವ ಕಾರಣಕ್ಕೂ ಬಳಸಿಕೊಳ್ಳಲಾಗಿಲ್ಲ ಎಂಬುದು ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ತೆಲುಗು ರಾಜ್ಯಗಳ ಯಾವ ಮೂಲೆಯಲ್ಲೂ ಧರಿಸದ ಗ್ಲಾಮರಸ್ ಉಡುಗೆಯನ್ನು ಧರಿಸಿ ಜಾನ್ಹವಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ನಾಯಕಿಯ ಒಪ್ಪಿಗೆ ಇಲ್ಲದೆ, ಕತ್ತಲಲ್ಲಿ ನಾಯಕ ಮುತ್ತು ಕೊಡುವ ದೃಶ್ಯವೂ ಸಹ ಇದೆ. ನಾಯಕಿಯನ್ನು ಅದೆಷ್ಟು ಸಾಧ್ಯವೋ ಅಷ್ಟು ಆಬ್ಜೆಕ್ಟಿಫೈ ಮಾಡಲಾಗಿದೆ. ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಖುದ್ದು ಜಾನ್ಹವಿ ಅವರೇ ಈ ಕುರಿತಾದ ಇನ್ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ಲೈಕ್ ಒತ್ತುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಕೆಗಳು ಹೆಚ್ಚಾಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಬುಚ್ಚಿಬಾಬು ಸನಾ, ‘ಜಾನ್ಹವಿಯ ದೃಶ್ಯಗಳನ್ನು ಜನ ಇಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಎಣಿಸಿರಲಿಲ್ಲ’ ಎಂದಷ್ಟೆ ಹೇಳಿದ್ದಾರೆ. ಆದರೆ ಈ ವಿಷಯದ ಬಗ್ಗೆ ಬಲು ಗಂಭೀರ ಚರ್ಚೆಗಳಾಗುತ್ತಿದ್ದು, ಕನ್ನಡದ ನಟಿ ರಮ್ಯಾ ಸಹ, ‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿಯನ್ನು ಕೆಟ್ಟದಾಗಿ ತೋರಿಸಿರುವ ರೀತಿಯ ಬಗ್ಗೆ ಹಂಚಿಕೊಳ್ಳಲಾದ ಪೋಸ್ಟ್ ಒಂದನ್ನು ರೀಶೇರ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಜಾನ್ಹವಿ ಕಪೂರ್ ಅವರು ಈ ಹಿಂದೆಯೂ ಸಹ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾನಲ್ಲಿ ತುಸು ಹೆಚ್ಚೇ ಅವರನ್ನು ಆಬ್ಜೆಕ್ಟಿಫೈ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಅವರ ಎದೆ ಭಾಗ ಮತ್ತು ಸೊಂಟಗಳ ಮೇಲೆ ಕೆಟ್ಟದಾಗಿ ಫೋಕಸ್ ಮಾಡಲಾಗಿದೆ. ರಾಮ್ ಚರಣ್ ಅಂಥಹಾ ದೊಡ್ಡ ಸ್ಟಾರ್ ನಟ ಇದ್ದಾಗಿಯೂ ಜನರನ್ನು ಸೆಳೆಯಲು ನಾಯಕಿಯ ನಡು, ಎದೆಭಾಗದ ಮೇಲೆ ನಿರ್ದೇಶಕ ಬುಚ್ಚಿಬಾಬು ಡಿಪೆಂಡ್ ಆಗಿರುವುದು ಅವರ ಕತೆಯ ಬಗ್ಗೆ ಅವರಿಗಿದ್ದಿದ್ದ ನಂಬಿಕೆಯನ್ನು ತೋರಿಸುತ್ತದೆ.