newsics.com/ನ್ಯೂಸಿಕ್ಸ್
ಕಾಕ್ರೋಚ್ ಜನತಾ ಪಾರ್ಟಿ. ಸದ್ಯ ಆನ್ ಲೈನ್ ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಆಗ್ತಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಒಂದು ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಕ್ರೋಚ್ ಪಾರ್ಟಿಗೆ ಆನ್ ಲೈನ್ ನಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಒಂದು ವಿಭಾಗದ ಟೀಕೆಯೂ ಎದುರಾಗುತ್ತಿದೆ.
ಈ ನಡುವೆ ಕರ್ನಾಟಕದಲ್ಲೂ ಕಾಕ್ರೋಚ್ ಪಕ್ಷದ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದೆ. ರಾಜ್ಯ ಸರ್ಕಾರದ ಮಂತ್ರಿಗಳು ಇದಕ್ಕೆ ಬೆಂಬಲ ಸೂಚಿಸಿದ್ದು, ಇಂತಹ ಚಳವಳಿಯ ಅಗತ್ಯ ಇದೆ ಎಂದಿದ್ದಾರೆ.
ಕಾಕ್ರೋಚ್ ಗೆ ಶರಣು ಪ್ರಕಾಶ್ ಬೆಂಬಲ
ಕಾಕ್ರೋಚ್ ಜನತಾ ಪಾರ್ಟಿ ಜನಪ್ರಿಯತೆ ವಿಚಾರವಾಗಿ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ಮಾತನಾಡಿದ್ದಾರೆ. ‘ಯುವಕರ ಸಮಸ್ಯೆ, ದೇಶದ ಸಮಸ್ಯೆಗಳಿಗೆ ಕೇಂದ್ರ ಸ್ಪಂದಿಸುತ್ತಿಲ್ಲ. ಹೀಗಾಗಿ ಯುವಕರ ಆಕ್ರೋಶ ಎದ್ದುಕಾಣುತ್ತಿದೆ. ನಿರುದ್ಯೋಗ, ನೀಟ್ ಪತ್ರಿಕೆ ಸೋರಿಕೆ ಕಾರಣದಿಂದ ಯುವಕರ ಆಕ್ರೋಶ ಹೆಚ್ಚಾಗಿದೆ. ಕೇಂದ್ರ ಸರಕಾರ ಸಮಸ್ಯೆಯೆ ಇಲ್ಲ ಎನ್ನುತ್ತಿದ್ದಾರೆ. ಇದನ್ನು ಮರೆ ಮಾಚಲು ಕಾಕ್ರೋಚ್ ಪಕ್ಷದ ಎಕ್ಸ್ ಖಾತೆ ಬಂದ್ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ದೇಶದ ಯುವಕರು ಸಮಸ್ಯೆಗಳನ್ನು ಗಮನ ಸೆಳೆಯುತ್ತಿದ್ದಾರೆ. ಈ ಡಿಜಿಟಲ್ ಹೋರಾಟಕ್ಕೆ ಇಡೀ ದೇಶದ ಯುವಕರು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತಪ್ಪು ಮಾಡಿದ್ರು ತಪ್ಪುಗಳನ್ನು ಎತ್ತಿತೋರಿಸಲಿ. ನಮ್ಮನ್ನು ಟೀಕಿಸಿದ್ರೆ ನಾವು ಸ್ವಾಗತಿಸುತ್ತೇವೆ. ಆದರೆ ಬಿಜೆಪಿಯವರನ್ನು ಟೀಕೆ ಮಾಡಿದ್ರೆ ದೇಶದ್ರೋಹಿ ಎಂದು ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಬಲ ನೀಡಿದ್ದ ಲಾಡ್
ಕಾಕ್ರೋಚ್ ಜನತಾ ಪಕ್ಷಕ್ಕೆ ಸಚಿವ ಸಂತೋಷ್ ಲಾಡ್ ಕೂಡಾ ಬೆಂಬಲ ಸೂಚಿಸಿದ್ದರು. ಗುರುವಾರ ಈ ವಿಚಾರವಾಗಿ ಮಾತನಾಡಿದ್ದ ಅವರು, ಯುವಕರ ಈ ಡಿಜಿಟಲ್ ಹೋರಾಟ ಖುಷಿ ನೀಡಿದೆ. ಇಂತಗ ಚಳವಳಿಯ ಅಗತ್ಯವಿದೆ. ನಮ್ಮ ಬೆಂಬಲವೂ ಇದೆ’ ಎಂದಿದ್ದರು.
ಸೋಷಿಯಲ್ ಮಿಡಿಯಾದಲ್ಲಿ ಹವಾ
ಕಾಕ್ರೋಚ್ ಜನತಾ ಪಕ್ಷ ರಾಜ್ಯದಲ್ಲಿ ಯುವಕರ ನಡುವೆ ಚರ್ಚೆ ಹುಟ್ಟು ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವರು ಬೆಂಬಲ ಸೂಚಿಸಿ ವಿಡಿಯೋ, ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಇದಕ್ಕೆ ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮೀಮ್ ಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
ನಾನೇ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷ
ನಾನು ಕಾಕ್ರೋಚ್ ಜನತಾ ಪಕ್ಷದ ರಾಜ್ಯಾಧ್ಯಕ್ಷ ಎಂದು ಕೆಲವರು ತಮ್ಮ ಫೋಟೋ ಇರುವ ಪೋಸ್ಟ್ ಹಾಕೊಂಡಿದ್ದಾರೆ. ಕೆಲವರು ರಾಷ್ಟ್ರೀಯ ಅಧ್ಯಕ್ಷ ಎಂದು ತಮ್ಮನ್ನು ತಾವೇ ಕರೆದುಕೊಂಡಿದ್ದಾರೆ. ಮತ್ತೆ ಕೆಲವರು ನಾವೇ ಸ್ಥಾಪಕರು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನು ಕಾಕ್ರೋಚ್ ಜನತಾ ಪಕ್ಷಕ್ಕೆ ಎಲ್ಲಿಂದ ಬೆಂಬಲ ವ್ಯಕ್ತವಾಗುತ್ತಿದೆ ಎಂಬ ವಿಚಾರವಾಗಿ ಶಾಸಕ ಸುರೇಶ್ ಕುಮಾರ್ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದರು. ಸುಮಾರು 40% ಪಾಕಿಸ್ತಾನದಿಂದ ಎಂದು ಫೋಸ್ಟ್ ನಲ್ಲಿ ಹಾಕಲಾಗಿತ್ತು. ಆದರೆ ಅದು ನಕಲಿ ಎಂದು ಸ್ಪಷ್ಟಗೊಂಡ ಹಿನ್ನೆಲೆಯಲ್ಲಿ ಅವರು ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಯುವ ಜನರ ಆಕ್ರೋಶದ ಪ್ರತೀಕ
ಕಾಕ್ರೋಚ್ ಜನತಾ ಪಕ್ಷ ಯುವ ಜನರ ಆಕ್ರೋಶದ ಪ್ರತೀಕ ಎಂದು ಕನ್ನಡ ಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಹೇಳಿದ್ದಾರೆ. ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತನಾಡಿದ ಅವರು, “ಇಂತಹದೊಂದು ಚಳವಳಿಗೆ ಕರ್ನಾಟಕದ ಜನ ನಿರೀಕ್ಷೆಯಿಂದ ಕಾಯುತ್ತಿದ್ದರು. ಇದೀಗ ಜನರು ಸ್ವಯಂ ಪ್ರೇರಿತವಾಗಿ ಭಾಗಿಯಾಗುತ್ತಿದ್ದಾರೆ. ನೀಟ್ ಅಕ್ರಮ, ಬಿಜೆಪಿ ಸರ್ಕಾರದ ವಿರುದ್ಧದ ಆಕ್ರೋಶ ಇದಾಗಿದೆ” ಎಂದರು.
“ನೀಟ್ ಅಕ್ರಮದಿಂದಾಗಿ ವಿದ್ಯಾರ್ಥಿಗಳು, ಪೋಷಕರು ತೊಂದರೆ ಅನುಭವಿಸಿದ್ದಾರೆ. ನಿರಂತರವಾಗಿ ಅಕ್ರಮ ನಡೆದರೂ ಕೇಂದ್ರ ಶಿಕ್ಷಣ ಸಚಿವರಾದಿಯಾಗಿ ಯಾರೂ ರಾಜೀನಾಮೆ ನೀಡಲು ಸಿದ್ದರಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯುವಕರನ್ನು ಹಿಯಾಳಿಸುತ್ತಾರೆ. ಇದೀಗ ಸಿಜೆ ಸ್ಥಾನವನ್ನು ಗೌರವಿಸುತ್ತಲೇ ಈ ರೀತಿಯ ಆಂದೋಲನದ ಮೂಲಕ ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. ಕರ್ನಾಟಕದ ಯುವ ಸಮೂಹದಿಂದ ಕಾಕ್ರೋಚ್ ಪಕ್ಷಕ್ಕೆ ಉತ್ತಮ ಬೆಂಬಲ ಸಿಗ್ತಿದೆ” ಎಂದರು.
ಸಾಮಾಜಿಕ ಕಾರ್ಯಕರ್ತ ರತನ್ ಸತೀಶ್ ಸೇಠ್ ಮಾತನಾಡುತ್ತಾ, “ಕಾಕ್ರೋಚ್ ಜನತಾ ಪಕ್ಷದ ಬಗ್ಗೆ ಪರ ಹಾಗೂ ವಿರುದ್ಧ ಅಭಿಪ್ರಾಯ ಇದೆ. ಭಾರತದಂತಹ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಯುವಕರಿಗೆ ಅವಕಾಶ ಸಿಗುವುದು ಸುಲಭ ಅಲ್ಲ. ಈ ಡಿಜಿಟಲ್ ಹೋರಾಟವನ್ನು ಪಕ್ಷದ ಆಧಾರದಲ್ಲಿ ನೋಡಲು ಸಾಧವಿಲ್ಲ. ರಾಜಕೀಯಕ್ಕೆ ಕನೆಕ್ಟ್ ಮಾಡಬಾರದು. ಆದರೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಇದೊಂದು ಎಚ್ಚರಿಕೆ ಗಂಟೆ. ಈ ಚಳವಳಿಯನ್ನು ಸಾಮಾಜಿಕ ಹಿತದೃಷ್ಟಿಯಿಂದ ನೋಡಬೇಕಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೀದಿಗಿಳಿಯರಿರೋ ಕಾಕ್ರೋಚ್ ಸದಸ್ಯರು!
ಈ ನಡುವೆ ಮೇ 24 ರಂದು ಕಾಕ್ರೋಚ್ ಜನತಾ ಪಕ್ಷದಿಂದ ಶಾಂತಿಯಿತ ಮಾನವ ಸರಪಳಿ ನಿರ್ಮಾಣದ ಪೋಸ್ಟರ್ ಹರಿದಾಡುತ್ತಿದೆ. ಟೌನ್ ಹಾಲ್ ಮುಂಭಾಗದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಯುವಕರಿಗೆ ಭವಿಷ್ಯ ವಿಲ್ಲ, ಬೆಲೆ ಏರಿಕೆ, ನೀಟ್, ಮತಕಳ್ಳತನ ವಿಚಾರವಾಗಿ ಯುವಕರ ಹೋರಾಟ ಎಂಬ ಹೆಸರಿನಲ್ಲಿ ಪೋಸ್ಟರ್ ಹರಿದಾಡುತ್ತಿದೆ.