newsics.com/ನ್ಯೂಸಿಕ್ಸ್
ಕೆರಿಯರ್ ಕಟ್ಟಿಕೊಳ್ಳುವ ಹಂತದಲ್ಲಿ ತಿಳಿಯದೆಯೋ ಅಥವಾ ಕಿಡಿಗೇಡಿಗಳ ಸಂಚಿನಿಂದಲೋ ಅಚಾನಕ್ಕಾಗಿ ಒಬ್ಬ ಅಭ್ಯರ್ಥಿಯ ಮೇಲೆ ಎಫ್ಐಆರ್ (FIR) ದಾಖಲಾದರೆ ಅವರ ಭವಿಷ್ಯ ಮುಗಿದೇ ಹೋಯಿತು ಎಂದು ಅನೇಕರು ಭಾವಿಸುತ್ತಾರೆ.
ಆದ್ರೆ, ಕಾನೂನಿನ ಮೂಲಭೂತ ತತ್ವದ ಪ್ರಕಾರ, ನ್ಯಾಯಾಲಯದಲ್ಲಿ ನಿಮ್ಮ ಮೇಲಿನ ಆರೋಪ ಸಾಬೀತಾಗುವವರೆಗೂ ನೀವು ಅಪರಾಧಿಯಲ್ಲ. FIR ಎನ್ನುವುದು ಕೇವಲ ಒಂದು ಆರೋಪದ ಪ್ರಾಥಮಿಕ ದಾಖಲೆ ಮಾತ್ರ. ಕೇವಲ ಈ ದಾಖಲೆ ಇರುವುದೊಂದೇ ಕಾರಣಕ್ಕೆ ಯಾರನ್ನೂ ಉದ್ಯೋಗಕ್ಕೆ ಅಯೋಗ್ಯ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸುತ್ತಾರೆ.
ಸತ್ಯ ಮರೆಮಾಚುವುದು ಮಹಾ ಅಪಾಯ
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪ್ರಾಮಾಣಿಕತ. ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ಮೇಲೆ ಯಾವುದಾದರೂ ಪ್ರಕರಣ ಅಥವಾ FIR ಇದ್ದರೆ ಅದನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
ಒಂದು ವೇಳೆ ಮಾಹಿತಿ ಮರೆಮಾಚಿದರೆ: ಮುಂದೆ ಉದ್ಯೋಗ ಸಿಕ್ಕರೂ ಸಹ, ಈ ಸುಳ್ಳು ಮಾಹಿತಿಯ ಕಾರಣಕ್ಕೆ ನಿಮ್ಮನ್ನು ಕೆಲಸದಿಂದ ವಜಾಗೊಳಿಸುವ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಇರುತ್ತದೆ. FIR ಇರುವುದಕ್ಕಿಂತಲೂ ಸತ್ಯ ಮರೆಮಾಚುವುದು ನಿಮ್ಮ ನೇಮಕಾತಿ ರದ್ದತಿಗೆ ಪ್ರಬಲ ಕಾರಣವಾಗಬಹುದು.
ಪ್ರಕರಣದ ಸ್ವರೂಪ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿ
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಹತ್ವದ ತೀರ್ಪುಗಳನ್ನು ನೀಡಿದೆ.ಸಣ್ಣ ಪ್ರಕರಣಗಳು ಸಣ್ಣಪುಟ್ಟ ಗಲಾಟೆ, ಪ್ರತಿಭಟನೆ ಅಥವಾ ಕೌಟುಂಬಿಕ ವಿವಾದಗಳಿಗೆ ಸಂಬಂಧಿಸಿದ FIRಗಳು ಉದ್ಯೋಗದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.
ಗಂಭೀರ ಅಪರಾಧಗಳು: ನೈತಿಕ ಅಧಃಪತನ (Moral Turpitude), ಭ್ರಷ್ಟಾಚಾರ, ಕೊಲೆ ಅಥವಾ ಅತ್ಯಾಚಾರದಂತಹ ಗಂಭೀರ ಪ್ರಕರಣಗಳಿದ್ದರೆ ನೇಮಕಾತಿ ಸಂಸ್ಥೆ ಉದ್ಯೋಗ ನಿರಾಕರಿಸುವ ಹಕ್ಕನ್ನು ಹೊಂದಿರುತ್ತದೆ.
ಖುಲಾಸೆಗೊಂಡರೆ (Acquittal) ಯಾವುದೇ ಭಯ ಬೇಡ
ಒಂದು ವೇಳೆ ನೀವು ಪ್ರಕರಣದಿಂದ ‘ಗೌರವಯುತವಾಗಿ ಖುಲಾಸೆ’ (Honourable Acquittal) ಗೊಂಡಿದ್ದರೆ, ಉದ್ಯೋಗ ಪಡೆಯಲು ಯಾವುದೇ ಅಡೆತಡೆ ಇರುವುದಿಲ್ಲ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಅಥವಾ ತಾಂತ್ರಿಕ ಕಾರಣಗಳಿಂದ “ಲಾಭದಾಯಕ ಸಂಶಯ” (Benefit of Doubt) ಅಡಿ ಖುಲಾಸೆಯಾಗಿದ್ದರೆ, ನಿಮ್ಮ ನಡವಳಿಕೆಯನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲಾಖೆಗೆ ಇರುತ್ತದೆ.
ದೋಷಾರೋಪಣೆ (Conviction) ಆದರೆ ಕಷ್ಟ
ನ್ಯಾಯಾಲಯದಲ್ಲಿ ನಿಮ್ಮ ಮೇಲಿನ ಆರೋಪ ಸಾಬೀತಾಗಿ ಶಿಕ್ಷೆಯಾಗಿದ್ದರೆ ಮಾತ್ರ ಸರ್ಕಾರಿ ಉದ್ಯೋಗ ಸಿಗುವುದು ಬಹುತೇಕ ಅಸಾಧ್ಯ.