newsics.com/ನ್ಯೂಸಿಕ್ಸ್
ವಿಜಯಪುರ: ತೀವ್ರ ತಾಪಮಾನಕ್ಕೆ 15 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಶ್ರೀಶೈಲ ಬಿರಾದಾರ (15) ಎಂದು ಗುರುತಿಸಲಾಗಿದೆ. ಶಾಲಾ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಾಲಕ ಶ್ರೀಶೈಲ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಆಟವಾಡಿದ್ದ ಎನ್ನಲಾಗಿದೆ. ಬಿಸಿಲಿನಲ್ಲಿ ದೀರ್ಘಕಾಲ ಆಟವಾಡಿದ್ದರಿಂದ ಬಸವಳಿದಿದ್ದ ಬಾಲಕನ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸ ಕಂಡುಬಂದಿತ್ತು. ಕೂಡಲೇ ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಮಧ್ಯಾಹ್ನದ ಸಮಯದಲ್ಲಿ ಹೊರಬರದಂತೆ ಮತ್ತು ಹಿರಿಯರು ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.