newsics.com
ಇಂದು (ಏ.19) ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಇದು ಹಿಂದೂ ಮತ್ತು ಜೈನ ಧರ್ಮದ ಒಂದು ಸಾಂಪ್ರದಾಯಿಕ ಹಬ್ಬ. ಈ ದಿನದಂದು ಏನೇ ಖರೀದಿ ಮಾಡಿದರೂ ಅಕ್ಷಯವಾಗುತ್ತದೆ ಅಂದರೆ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ, ಈ ದಿನ ಹೆಚ್ಚು ಮಂದಿ ಚಿನ್ನ-ಬೆಳ್ಳಿ ಖರೀದಿ ಮಾಡಲು ಮುಂದಾಗುತ್ತಾರೆ.
ಆದರೆ, ಈಗಿರುವ ಚಿನ್ನ-ಬೆಳ್ಳಿ ದರ ಕಂಡು ಕೆಲವರು ಈ ಅಮೂಲ್ಯ ವಸ್ತು ಖರೀದಿ ಮಾಡಲಾರದೆ ಕೊರಗುತ್ತಾರೆ. ಅಂತವರಿಗೆ ಖುಷಿ ವಿಚಾರ ಒಂದಿದೆ.
ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಪವಿತ್ರವಾದ ಐದು ವಸ್ತು ಖರೀದಿ, ಮನೆಗೆ ತರುವುದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲೆ ಇರುತ್ತದೆ ಎನ್ನುವ ಪ್ರತೀತಿ ಇದೆ. ಹಾಗಾದ್ರೆ, ನೀವು ಈ ದಿನ ತರಬೇಕಾದ ಆ ಐದು ವಸ್ತು ಯಾವುದು ಎನ್ನುವ ವಿವರ ಇಲ್ಲಿದೆ.
ಉಪ್ಪು ಲಕ್ಷ್ಮೀ ಸ್ವರೂಪ
ಉಪ್ಪು ಲಕ್ಷ್ಮೀ ಸ್ವರೂಪವಾಗಿರುವ ಕಾರಣ ಅಕ್ಷಯ ತೃತೀಯದ ದಿನದಂದು ಚಿನ್ನ ಖರೀದಿ ಮಾಡಲಾಗದೆ ಹೋದರೆ, ಅದಕ್ಕಿಂತ ಶ್ರೇಷ್ಠವಾಗಿರುವ ಉಪ್ಪನ್ನು ಖರೀದಿ ಮಾಡಿ. ಇದರಿಂದ ನಕರಾತ್ರಮ ಶಕ್ತಿ ದೂರವಾಗಿ ಧನಾತ್ಮಕತೆ ನೆಲೆಸುತ್ತದೆ.
ಮಣ್ಣಿನ ಪಾತ್ರೆಯಿಂದ ಕಷ್ಟ ನಿವಾರಣೆ
ಜೇಡಿ ಮಣ್ಣಿನಿಂದ ತಯಾರಾದ ಮಡಿಕೆಯನ್ನು ಮನೆಗೆ ಖರೀದಿಸಿ ತರುವುದು ಇದು ಶುಭದಾಯಕ ಸೂಚನೆ. ಮಡಿಕೆಯನ್ನು ಮನೆಗೆ ತಂದು ತೊಳೆದು, ಅದರಲ್ಲಿ ನೀರು ತುಂಬಿ ಇಡುವುದರಿಂದ ಜೀವನದಲ್ಲಿರುವ ಸಂಕಷ್ಟ, ಅಡೆತಡೆಗಳನ್ನು ನಿವಾರಿಸಿ, ಸುಖ ವೃದ್ಧಿಗೆ ಶ್ರಮಿಸುತ್ತದೆ ಎನ್ನುವ ನಂಬಿಕೆ ಇದೆ.
ತುಳಸಿ ಲಕ್ಷ್ಮಿಯ ವಾಸಸ್ಥಾನ
ರಾತ್ರಿ ಅಡುಗೆಮನೆ ಹಾಗೂ ತುಳಸಿ ಕಟ್ಟೆಯಿಂದ ಲಕ್ಷ್ಮಿ ದೇವರ ಮನೆಯನ್ನು ಪ್ರವೇಶಿಸುತ್ತಾಳೆ ಎನ್ನುವ ನಂಬಿಕೆ ಹಿಂದೆ ಇತ್ತು. ಹೀಗಾಗಿ ಬಾಗಿಲನ್ನು, ಅಡುಗೆ ಮನೆ ಸ್ವಚ್ಛವಾಗಿ ಇಡಬೇಕು. ಇಲ್ಲದಿದ್ದರೆ ಲಕ್ಷ್ಮಿ ಪ್ರವೇಶಿಸುವುದಿಲ್ಲ ಎನ್ನಲಾಗುತ್ತಿತ್ತು. ಹೀಗಾಗಿ, ತುಳಸಿಯನ್ನು ಮನೆಗೆ ತರುವುದು ಶ್ರೇಯಸ್ಸು. ತುಳಸಿ ಮಹಾಲಕ್ಷ್ಮಿಯ ವಾಸಸ್ಥಾನ.
ಅರಿಶಿನ-ಕುಂಕುಮ ಸೌಭಾಗ್ಯದ ಸಂಕೇತ
ಐದರಿಂದ ಐವತ್ತು ರೂಪಾಯಿ ಒಳಗೆ ಸಿಗುವ ಅರಿಶಿನ ಕುಂಕುಮ ಶ್ರೇಯಸ್ಕರ. ಇದು ಸೌಭಾಗ್ಯದ ಸಂಕೇತ ಎಲ್ಲ ಶುಭ ಸಮಾರಂಭದಲ್ಲಿ ಇದನ್ನು ಖರೀದಿ ಮಾಡುವುದರಿಂದ ಯಾವುದೇ ವಿಘ್ನವಿಲ್ಲದೆ ಕಾರ್ಯಕ್ರಮ ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ.
ಪುಸ್ತಕ ಖರೀದಿಯಿಂದ ಲಕ್ಷ್ಮೀ ಕೃಪೆ
ವಿದ್ಯೆಯೇ ಜೀವನದ ಮಹಾಧನ, ಪುಸ್ತಕ ಅಥವಾ ಲೇಖನ ಸಾಮಗ್ರಿ ಖರೀದಿ ಮಾಡುವುದರಿಂದ ಜ್ಞಾನದೇವತೆ, ಸರಸ್ವತಿ, ಐಶ್ವರ್ಯ ದೇವತೆಯ ಕೃಪೆ ಒಟ್ಟೊಟ್ಟಿಗೆ ಸಿಗಲಿದೆ ಎನ್ನುವ ಪ್ರತೀತಿ ಇದೆ.