https://youtube.com/shorts/AWyQA9JMFI4?si=6teca9JBs0VZQurx
newsics.com
ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವು ಲಿಂಗ ತಾರತಮ್ಯದ ವಿಷಯವಲ್ಲ; ಅದು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ್ದು ಎಂದು ಕೇಂದ್ರ ಸರಕಾರ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ಅನುಮತಿಸಿದ್ದ 2018ರ ತೀರ್ಪಿನ ವಿರುದ್ಧ ಸಲ್ಲಿಸಿದ ದೀರ್ಘಕಾಲದಿಂದ ಬಾಕಿ ಇರುವ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಶಬರಿಮಲೆಯಲ್ಲಿ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಅಯ್ಯಪ್ಪ ಸ್ವಾಮಿಯ ‘ನೈಷ್ಠಿಕ ಬ್ರಹ್ಮಚಾರಿ’(ಜೀವನಪೂರ್ತಿ ಬ್ರಹ್ಮಚರ್ಯಕ್ಕೆ ಕಟ್ಟಿಬದ್ಧನಾದವನು) ಸ್ವಭಾವದಿಂದ ಉಗಮಿಸಿದ್ದು, ಅದು ಅಶುದ್ಧತೆ ಅಥವಾ ಕೀಳರಿಮೆ ಆಧಾರಿತವಲ್ಲ ಎಂದು ಕೇಂದ್ರವು ವಿಚಾರಣೆಗೆ ಮುನ್ನ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ ತಿಳಿಸಿದೆ.
ಮಹಿಳೆಯರನ್ನು ಒಂದು ತಿಂಗಳ ಅವಧಿಯಲ್ಲಿ ನಿರ್ದಿಷ್ಟ ದಿನಗಳ ಕಾಲ ಅಸ್ಪೃಶ್ಯ ಎಂದು ಪರಿಗಣಿಸಿ, ನಂತರ ನಾಲ್ಕನೇ ದಿನದಲ್ಲಿ ಹಠಾತ್ ಆಗಿ ಆ ಸ್ಥಿತಿಯಿಂದ ಮುಕ್ತರಾದಂತೆ ನೋಡುವುದು ತರ್ಕಬದ್ಧವಲ್ಲ ಎಂಬ ಅವರ ಮಾತುಗಳು, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಡೆಯುವ ತಾರತಮ್ಯದ ವಿರುದ್ಧದ ಪ್ರಬಲ ಧ್ವನಿಯಾಗಿ ಕೇಳಿಬಂದಿವೆ.
ವಿಶೇಷವಾಗಿ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಈ ವಿಚಾರಣೆಯಲ್ಲಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಲಿಂಗ ಸಮಾನತೆಯ ನಡುವಿನ ಸಮತೋಲನವನ್ನು ಹುಡುಕುವ ಪ್ರಯತ್ನ ನಡೆಯುತ್ತಿದ್ದು, ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಈ ಪೀಠವು ಕೇವಲ ಶಬರಿಮಲೆ ಮಾತ್ರವಲ್ಲದೆ, ವಿವಿಧ ಧರ್ಮಗಳ ಪೂಜಾ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ಇರುವ ನಿರ್ಬಂಧಗಳ ಸಾಂವಿಧಾನಿಕತೆಯನ್ನು ಪರಿಶೀಲಿಸುತ್ತಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಾದವನ್ನು ಬಲವಾಗಿ ವಿರೋಧಿಸಿದ್ದು, ಭಾರತದ ಸಾಮಾಜಿಕ ವ್ಯವಸ್ಥೆಯು ಪಶ್ಚಿಮ ದೇಶಗಳು ಅರ್ಥೈಸಿಕೊಳ್ಳುವಂತಹ ಪಿತೃಪ್ರಧಾನ ಅಥವಾ ಲಿಂಗ ಸ್ಟೀರಿಯೊಟೈಪ್ ಮಾದರಿಯದ್ದಲ್ಲ ಎಂದು ವಾದಿಸಿದ್ದಾರೆ. ಶಬರಿಮಲೆ ದೇವಸ್ಥಾನದಲ್ಲಿರುವ ನಿರ್ಬಂಧವು ಕೇವಲ ವಯಸ್ಸಿನ ಆಧಾರದ ಮೇಲೆ ಇದೆಯೇ ಹೊರತು, ಅದನ್ನು ಮುಟ್ಟಿನ ಪ್ರಕ್ರಿಯೆಯೊಂದಿಗೆ ಸಮೀಕರಿಸಬಾರದು ಎಂಬುದು ಸರ್ಕಾರದ ನಿಲುವು.
ಪ್ರಪಂಚದಾದ್ಯಂತ ಇರುವ ಇತರ ಅಯ್ಯಪ್ಪ ಸ್ವಾಮಿ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲದಿರುವಾಗ, ಶಬರಿಮಲೆಯ ಆಚರಣೆಯನ್ನು ಒಂದು ವಿಶಿಷ್ಟ ಅಥವಾ ಸುಯಿ ಜೆನೆರಿಸ್ ಪ್ರಕರಣವಾಗಿ ನೋಡಬೇಕು ಎಂದು ಮೆಹ್ತಾ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.