newsics.com
ಬೆಂಗಳೂರು: ಮಕ್ಕಳ ಸುರಕ್ಷತೆ ಮತ್ತು ಶಾಲಾ ಪ್ರಯಾಣ ಸುಗಮಗೊಳಿಸುವ ಉದ್ದೇಶದಿಂದ ರಾಜ್ಯ ಸರಕಾರ ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಮಕ್ಕಳಿಗೆ ಸುರಕ್ಷತೆ ಹಾಗೂ ವಿಶ್ವಾಸಾರ್ಹ ಸಾರಿಗೆ ಸೌಲಭ್ಯ ಒದಗಿಸಲು ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮಾಡಿತ್ತು.
ಶಿಫಾರಸು ಪರಿಶೀಲಿಸಿ ಕ್ರಮವಹಿಸುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧೀನ ಕಾರ್ಯದರ್ಶಿ(ಸಾರಿಗೆ ಇಲಾಖೆ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ವ್ಯವಸ್ಥಾಪಕರಿಗೆ ನಿರ್ದೇಶಿಸಿದ್ದಾರೆ.
ಆಯೋಗದ ಶಿಫಾರಸು:
ರಾಜ್ಯದಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಹೆಚ್ಚಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಅವಲಂಬಿಸಿದ್ದಾರೆ. ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್ಗಳಿಂದ ಬಿದ್ದು ಗಾಯಗೊಂಡಿರುವ ಪ್ರಕರಣಗಳೂ ಇವೆ. ಇದನ್ನು ತಪ್ಪಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿದ್ಯಾರ್ಥಿ ಸ್ನೇಹಿ ಸಾರಿಗೆಗೆ ಶಿಫಾರಸು ಮಾಡಿತ್ತು.
ಉಚಿತ ಪ್ರಯಾಣಕ್ಕೆ ಶಿಫಾರಸು:
ರಾಜ್ಯದಲ್ಲಿ ಈಗಾಗಲೇ ಹೆಣ್ಣು ಮಕ್ಕಳ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಉಚಿತ ಪ್ರಯಾಣ ಅವಕಾಶವನ್ನು 12 ನೇ ತರಗತಿವರೆಗೆ ಗಂಡು ಮಕ್ಕಳಿಗೂ ವಿಸ್ತರಿಸಬೇಕು. ಪ್ರತಿ, ಶಾಲೆ-ಕಾಲೇಜು ಮಾರ್ಗದಲ್ಲಿ ಓದುತ್ತಿರುವ ಮಕ್ಕಳ ನಿಖರ ದತ್ತಾಂಶ ಸಂಗ್ರಹಿಸಿ ರೂಟ್ ಪ್ಲಾನಿಂಗ್ ಮಾಡಬೇಕು. ಸಾರಿಗೆ ವ್ಯವಸ್ಥೆ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂದು ಆಯೋಗ ಶಿಫಾರಸ್ಸಿನಲ್ಲಿ ತಿಳಿಸಿತ್ತು. ಅಂತೆಯೇ ಹೆಚ್ಚು ವಿದ್ಯಾರ್ಥಿಗಳಿರುವ ಗ್ರಾಮೀಣ ಮಾರ್ಗಗಳಲ್ಲಿ ವಿಶೇಷ ಸ್ಕೂಲ್ ಮತ್ತು ಕಾಲೇಜು ಬಸ್ಗಳನ್ನು ಆರಂಭಿಸುವುದು, ತರಗತಿ ಸಮಯಕ್ಕೆ ತಕ್ಕಂತೆ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಟ್ರಿಪ್ಗಳು ‘ಮಕ್ಕಳ ಸ್ನೇಹಿ ಸಾರಿಗೆ’ ವ್ಯವಸ್ಥೆಯಲ್ಲಿರಲಿದೆ.
ಮಕ್ಕಳ ಸ್ನೇಹಿ ಸಾರಿಗೆ ರೂಪು-ರೇಷೆ
ಶಾಲಾ-ಕಾಲೇಜು ಸಮಯಕ್ಕೆ ಅಗತ್ಯ ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ.
ಎಲ್ಲಾ ಬಸ್ಗಳಲ್ಲಿ ಸಿಸಿಟಿವಿ ಕಡ್ಡಾಯ, ಜಿಪಿಎಸ್ ನಿಗಾ, ತುರ್ತು ಪ್ಯಾನಿಕ್ ಬಟನ್ ಅಳವಡಿಕೆ.
ಮಕ್ಕಳ ಸಹಾಯವಾಣಿ 1098 ಪ್ರದರ್ಶಿಸುವುದು ಕಡ್ಡಾಯ.
ಬಸ್ ಸೇವೆಯಲ್ಲಿ ಮಾರ್ಗ ಮತ್ತು ಸಮಯ ಪಾಲನೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
ಬಸ್ ಚಾಲಕರು, ಸಿಬ್ಬಂದಿಗೆ ಮಕ್ಕಳ ಹಕ್ಕು ತರಬೇತಿ, ಪ್ರತಿವರ್ಷ ರಿಫ್ರೆಶರ್ ಕೋರ್ಸ್ ಕಡ್ಡಾಯ. ಪೋಕ್ಸೊ, ಜೆಜೆ ಆಯಕ್ಟ್ ಬಗ್ಗೆ ತರಬೇತಿ.
ಹೆಚ್ಚಿನ ವಿದ್ಯಾರ್ಥಿನಿಯರು ಇರುವ ರೂಟ್ಗಳಲ್ಲಿ ಮಹಿಳಾ ಕಂಡಕ್ಟರ್ ಕಡ್ಡಾಯ.
ಹಾರ್ಮೋನ್ ಸಮಸ್ಯೆಯಿಂದ ಬರಬಹುದು ಕ್ಯಾನ್ಸರ್! ವೈದ್ಯರಿಂದ ಆಘಾತಕಾರಿ ಅಂಶ ಬಯಲು