https://youtube.com/shorts/JFDfzeRUAUw?si=UPiQjhCFAIkLXEhb
newsics.com
ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದ ರೈತನಿಗೆ ನೀಡಬೇಕಿದ್ದ ಕೇವಲ 66 ಪೈಸೆಯನ್ನು ಕೊನೆಗೂ ಕೆನರಾ ಬ್ಯಾಂಕ್ ಪಾವತಿಸಿದ ಘಟನೆ ಬೆಳಕಿಗೆ ಬಂದಿದೆ. ಸಣ್ಣ ಮೊತ್ತವಾದರೂ ಹಣದ ಲೆಕ್ಕದಲ್ಲಿ ನಿರ್ಲಕ್ಷ್ಯ ಬೇಡ ಎಂಬ ಸಂದೇಶ ನೀಡಿದ ಘಟನೆ ಇದು.
ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ ಅವರು ಕೆಲವು ವರ್ಷಗಳ ಹಿಂದೆ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಿಂದ ₹50 ಸಾವಿರ ಸಾಲ ಪಡೆದಿದ್ದರು. ನಂತರ ಅವರು ಸಾಲವನ್ನು ಸಕಾಲಕ್ಕೆ ತೀರಿಸಿದ್ದರೂ, ಬ್ಯಾಂಕ್ನಿಂದ ಇನ್ನೂ 9.34 ರೂ. ಬಾಕಿ ಇದೆ ಎಂದು ನೋಟಿಸ್ ನೀಡಿ ತಕ್ಷಣ ಪಾವತಿಸುವಂತೆ ಸೂಚಿಸಲಾಗಿತ್ತು. ಇದಲ್ಲದೆ ಪದೇಪದೇ ದೂರವಾಣಿ ಕರೆಗಳನ್ನೂ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಇದರಿಂದ ಬೇಸತ್ತ ರೈತ ಚೊಕ್ಕಣ್ಣಗೌಡ ಅವರು ಬ್ಯಾಂಕ್ಗೆ ತೆರಳಿ ₹10 ನೀಡಿ ಸಾಲಕ್ಕೆ ಜಮಾ ಮಾಡಿಕೊಂಡು, ಉಳಿದ 66 ಪೈಸೆಯನ್ನು ವಾಪಸ್ ನೀಡುವಂತೆ ಕ್ಯಾಷಿಯರ್ಗೆ ಮನವಿ ಮಾಡಿದರು. ಆದರೆ ಚಿಲ್ಲರೆ ಇಲ್ಲ ಎಂಬ ಕಾರಣ ನೀಡಿ ಹಣ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ.
“ಪೈಸೆಗೆ ಪೈಸೆ ಲೆಕ್ಕ ಹಾಕಿ ನಮ್ಮಿಂದ ಹಣ ವಸೂಲಿಸುತ್ತೀರಾ; ಹಾಗಾದರೆ ನಮಗೂ ಬಾಕಿ ಇರುವ ಹಣವನ್ನು ನೀಡಿ” ಎಂದು ರೈತ ಪಟ್ಟು ಹಿಡಿದಿದ್ದರು. ಬಳಿಕ ಬ್ಯಾಂಕ್ ವ್ಯವಸ್ಥಾಪಕರು ರೈತನಿಗೆ ಕ್ಷಮೆ ಕೇಳಿ ಪ್ರಕರಣವನ್ನು ಸಮಾಧಾನಪಡಿಸಿದ್ದರು.
ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ, ಬ್ಯಾಂಕ್ ಅಧಿಕಾರಿಗಳು ರೈತನ ಖಾತೆಗೆ 66 ಪೈಸೆ ಜಮಾ ಮಾಡಿ ಎಸ್ಎಂಎಸ್ ಮೂಲಕ ಮಾಹಿತಿ ನೀಡಿರುವುದು ತಿಳಿದುಬಂದಿದೆ.
ಸಣ್ಣ ಮೊತ್ತವಾದರೂ ಗ್ರಾಹಕರ ಹಣಕ್ಕೆ ಗೌರವ ನೀಡಬೇಕೆಂಬ ಸಂದೇಶ ನೀಡಿದ ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ತಿಂಗಳುಗಟ್ಟಲೆ ಬೆದರಿಸುತ್ತಿತ್ತು, ಈಗ ಬೇಡಿಕೊಳ್ಳುತ್ತಿದೆ: ಇರಾನ್ ವ್ಯಂಗ್ಯ