newsics.com
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸ್ಯಾಂಡಲ್ವುಡ್ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರವಿಚಂದ್ರನ್ ಅವರ ಮನೆಗೆ ತೆರಳಿದ ಡಿಸಿಎಂ, ಸುದೀರ್ಘ ಕಾಲ ಕ್ರೇಜಿಸ್ಟಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಇಬ್ಬರು ದಿಗ್ಗಜರ ಭೇಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಭೇಟಿಯಾದಾಗ ಅಲ್ಲಿ ಹತ್ತಾರು ಊಹಾಪೋಹಗಳು ಏಳುವುದು ಸಹಜ. ಡಿ.ಕೆ. ಶಿವಕುಮಾರ್ ಅವರು ರವಿಚಂದ್ರನ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಭೇಟಿಯಲ್ಲಿ ಸಿನಿಮಾ ರಂಗದ ಇಂದಿನ ಸ್ಥಿತಿಗತಿ, ಕಲಾವಿದರ ಸಮಸ್ಯೆಗಳು ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇನ್ನು ಇಬ್ಬರೂ ಬಾಲ್ಯದ ಸ್ನೇಹಿತರಾಗಿದ್ದು,
ರವಿಚಂದ್ರನ್ ಅವರ ಹೊಸಕೆರೆಹಳ್ಳಿಯ ನಿವಾಸದಲ್ಲಿ ನಡೆದ ಈ ಭೇಟಿಯ ಫೋಟೋಗಳು ಈಗ ವೈರಲ್ ಆಗುತ್ತಿವೆ. ಡಿ.ಕೆ. ಶಿವಕುಮಾರ್ ಅವರನ್ನು ರವಿಚಂದ್ರನ್ ಆತ್ಮೀಯವಾಗಿ ಬರಮಾಡಿಕೊಂಡರು. ಹಿರಿಯ ನಟನ ಆರೋಗ್ಯ ಮತ್ತು ಅವರ ಮುಂದಿನ ಚಿತ್ರಗಳ ಬಗ್ಗೆ ಡಿಸಿಎಂ ವಿಚಾರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದಲೂ ಚಿತ್ರರಂಗದ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ರವಿಚಂದ್ರನ್ ಮತ್ತು ಡಿ.ಕೆ. ಶಿವಕುಮಾರ್ ಒಂದೇ ಸ್ಕೂಲಿನಲ್ಲಿ ಓದಿದ್ದಾರೆ. ಇಬ್ಬರ ಒಡನಾಟವೂ ಆತ್ಮೀಯವಾಗಿದ್ದು, ಎಲ್ಲಿಯೇ ಸಿಕ್ಕಿದರೂ ಆತ್ಮೀಯತೆಯಿಂದಲೇ ಮಾತನಾಡುತ್ತಾರೆ. ಇದೀಗ ರವಿಚಂದ್ರನ್ ಮನೆಗೆ ಹೋಗಿರುವುದಕ್ಕೆ ಕಾರಣ ಏನು ಎಂಬುದನ್ನು ಸುಲಭವಾಗಿ ಊಹಿಸಲಾಗುವುದಿಲ್ಲ.
ಸದ್ಯ ಕನ್ನಡ ಚಿತ್ರರಂಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಚಿತ್ರಮಂದಿರಗಳ ಸಮಸ್ಯೆ, ಪೈರಸಿ ಮತ್ತು ಕಲಾವಿದರ ಸಂಘದ ಕೆಲವು ವಿಚಾರಗಳ ಬಗ್ಗೆ ರವಿಚಂದ್ರನ್ ಅವರು ಡಿಸಿಎಂ ಗಮನಕ್ಕೆ ತಂದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಸರ್ಕಾರದ ಮಟ್ಟದಲ್ಲಿ ಚಿತ್ರರಂಗಕ್ಕೆ ಸಿಗಬೇಕಾದ ಪ್ರೋತ್ಸಾಹ ಮತ್ತು ಸೌಲಭ್ಯಗಳ ಬಗ್ಗೆ ಕ್ರೇಜಿಸ್ಟಾರ್ ಸಲಹೆ ನೀಡಿರುವ ಸಾಧ್ಯತೆ ಇದೆ.
ಡಿ.ಕೆ. ಶಿವಕುಮಾರ್ ಅವರು ಕೇವಲ ರಾಜಕಾರಣಿಯಾಗಿ ಮಾತ್ರವಲ್ಲದೆ, ಕಲಾ ಪೋಷಕರಾಗಿಯೂ ಗುರುತಿಸಿಕೊಂಡವರು. ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ, ಇದು ಕೇವಲ ಸೌಜನ್ಯದ ಭೇಟಿ ಎಂದು ಡಿಕೆಶಿ ಆಪ್ತ ಮೂಲಗಳು ತಿಳಿಸಿವೆ.