https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ಕರ್ನಾಟಕ ರಾಜ್ಯದಲ್ಲಿ ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಪ್ರಕಾರ, ಟೈಫಾಯ್ಡ್ ಹಾಗೂ ಅತಿಸಾರ ಪ್ರಕರಣಗಳಲ್ಲಿ ಕರ್ನಾಟಕ ಉನ್ನತ ಸ್ಥಾನದಲ್ಲಿದೆ. ಹಳ್ಳಿಗಳಿಗಿಂತಲೂ ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಗಮನಾರ್ಹವಾಗಿದೆ.
2022ರಿಂದ 2025ರವರೆಗೆ ಅತಿಸಾರ ಮತ್ತು ಟೈಫಾಯ್ಡ್ ಪ್ರಕರಣಗಳು ಲಕ್ಷಾಂತರದಲ್ಲಿ ದಾಖಲಾಗಿವೆ. 2025ರಲ್ಲಿ ಮಾತ್ರ ಅತಿಸಾರ ಸುಮಾರು 1.8 ಲಕ್ಷ ಪ್ರಕರಣಗಳು ಹಾಗೂ ಟೈಫಾಯ್ಡ್ 39 ಸಾವಿರಕ್ಕೂ ಹೆಚ್ಚು ವರದಿಯಾಗಿವೆ. ಹಿಂದಿನ ವರ್ಷಗಳಲ್ಲೂ ಇದೇ ರೀತಿಯ ಪ್ರಮಾಣ ಕಂಡುಬಂದಿದೆ.
ನಗರ ಪ್ರದೇಶಗಳಲ್ಲಿ ಟ್ಯಾಂಕರ್ ನೀರು, ಪೈಪ್ಲೈನ್ಗಳಲ್ಲಿ ಉಂಟಾಗುವ ಸೋರಿಕೆ, ಒಳಚರಂಡಿ ಮಿಶ್ರಿತ ನೀರು ಮತ್ತು ಗುಣಮಟ್ಟವಿಲ್ಲದ ಪ್ಯಾಕೇಜ್ ವಾಟರ್ ಸಮಸ್ಯೆಗೆ ಮೂಲ ಕಾರಣವೆಂದು ಹೇಳಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾದಂತೆ, ಕಲುಷಿತ ನೀರಿನ ಬಳಕೆ ಹೆಚ್ಚಾಗಿ ಸೋಂಕು ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ.
ಅಕ್ಯುಟ್ ಡಯಾರಿಯಲ್ ಡಿಸೀಸ್ ಲಕ್ಷಣಗಳು ಏನು?
ಭೇದಿ
ವಾಕರಿಕೆ ಜೊತೆಗೆ ವಾಂತಿ
ಕಿಬ್ಬೊಟ್ಟೆಯ ಸೆಳೆತ
ಹೊಟ್ಟೆನೋವು
ಜ್ವರ ಮತ್ತಿತರೆ ಲಕ್ಷಣ
ಈ ನಡುವೆ ಬೇಸಿಗೆಯಲ್ಲಿ ಪ್ರಕರಣಗಳು ಮತ್ತಷ್ಟು ಹೆಚ್ಚಳ ಆಗುವ ಆತಂಕ ಕೂಡ ಇದ್ದು, ಪ್ರತಿ ದಿನ ಕನಿಷ್ಠ 10 ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಟ್ಯಾಂಕರ್ ವಾಟರ್, ಡ್ರೈನೇಜ್ ಮಿಶ್ರಿತ ನೀರು, ಪ್ಯಾಕೇಡ್ಜ್ ವಾಟರ್, ಪೈಪ್ ಲೈನ್ಗಳ ಕಲುಷಿತ ನೀರಿನಿಂದ ಅತಿಸಾರ ಪ್ರಕರಣಗಳು ದ್ವಿಗುಣಗೊಂಡಿವೆ. ಇದರಿಂದ ವಾಂತಿ, ಭೇದಿಯಂತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಜನ ಸಂಖ್ಯೆ ಹೆಚ್ಚಳವಾಗಿದೆ. ಮಕ್ಕಳು ಮತ್ತು ಹಿರಿಯರಲ್ಲೇ ಈ ಸಮಸ್ಯೆ ಅಧಿಕವಾಗಿದೆ ಎನ್ನಲಾಗಿದೆ.