https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ಭದ್ರತೆಯ ನೆಪವೊಡ್ಡಿ ಮಾಧ್ಯಮಗಳ ಸಂಚಾರ ಮತ್ತು ವರದಿಗಾರಿಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊಸ ‘ಲಕ್ಷ್ಮಣ ರೇಖೆ’ ಎಳೆದಿದೆ. ಈ ಮೂಲಕ
ಕರ್ನಾಟಕ ಸರ್ಕಾರ ತಮಿಳುನಾಡು ಮಾದರಿಯನ್ನು ಅನುಸರಿಸಲು ಹೊರಟಿದೆ.
ಇನ್ಮುಂದೆ ವಿಧಾನಸೌಧದ ಒಳಗೆ ಅಥವಾ ಜನಪ್ರತಿನಿಧಿಗಳ ಹಿಂದೆ ಹೋಗಿ ಬೈಟ್ (ಹೇಳಿಕೆ) ಪಡೆಯುವಂತಿಲ್ಲ. ಕೇವಲ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಮಾಧ್ಯಮಗಳು ಹೇಳಿಕೆ ಪಡೆಯಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ವಾರ್ತಾ ಇಲಾಖೆಗೆ ಪತ್ರ ಬರೆದಿರುವ DPAR, ಗಣ್ಯರ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದೆ.
ಸರ್ಕಾರದ ಈ ನಡೆ ಕೇವಲ ಮಾಧ್ಯಮಗಳ ಮೇಲಿನ ನಿರ್ಬಂಧವಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿಯನ್ನು ಜನರಿಗೆ ತಲುಪದಂತೆ ಮಾಡುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳು ನೀಡಿರುವ ಸೂಚನೆಯ ಪ್ರಕಾರ, ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಥವಾ ಸಚಿವರುಗಳು ವಿಧಾನಸೌಧ ಪ್ರವೇಶಿಸುವಾಗ ಅವರ ಹಿಂದೆ ಹೋಗಬಾರದು. ವಾರ್ತಾ ಇಲಾಖೆಯಿಂದ ಗುರುತಿನ ಚೀಟಿ ಪಡೆದ ಪತ್ರಕರ್ತರು ಕೇವಲ ನಿಗದಿಪಡಿಸಿದ ಜಾಗದಲ್ಲೇ ಇರಬೇಕು. ಒಂದು ವೇಳೆ ಈ ಸೂಚನೆ ಮೀರಿದರೆ ಅದನ್ನು ಭದ್ರತಾ ಲೋಪವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಆದರೆ, ಪದೇ ಪದೇ ವಿಧಾನಸೌಧದಲ್ಲಿ ನಡೆಯುತ್ತಿರುವ ನೈಜ ಭದ್ರತಾ ಲೋಪಗಳನ್ನು ಸರಿಪಡಿಸುವ ಬದಲು ಮಾಧ್ಯಮಗಳನ್ನೇ ಗುರಿ ಮಾಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಈ ಸವಾರಿ ಮಾಡುತ್ತಿರುವುದರ ಹಿಂದೆ ದೊಡ್ಡ ಹುನ್ನಾರವಿದೆ ಎಂಬ ಚರ್ಚೆ ಶುರುವಾಗಿದೆ. ಕಳೆದ ವಾರವಷ್ಟೇ ಇದೇ ಡಿಪಿಎಆರ್ ಇಲಾಖೆಯ ಸಿಬ್ಬಂದಿಯಿಂದ 300 ಗ್ರಾಂ ಚಿನ್ನದ ಕಳ್ಳತನ ನಡೆದಿರುವುದು ಜಗಜ್ಜಾಹೀರಾಗಿತ್ತು. ಅಲ್ಲದೆ, ಇತ್ತೀಚೆಗೆ ಸಿಎಂ ಸಹಿ ಮಾಡಿದ್ದ ಶಿಫಾರಸ್ಸು ಪತ್ರ ವೈರಲ್ ಆಗಿದ್ದು ಮತ್ತು ಸ್ವಯಂ ನಿವೃತ್ತಿ ಪಡೆದ ಸ್ವಾಮೀಜಿಯೊಬ್ಬರಿಗೆ ಬಡ್ತಿ ನೀಡಿದ ವಿವಾದಗಳು ಸರ್ಕಾರಕ್ಕೆ ಮುಜುಗರ ತಂದಿದ್ದವು. ಈ ಎಲ್ಲಾ ಆಡಳಿತಾತ್ಮಕ ವೈಫಲ್ಯಗಳು ಮಾಧ್ಯಮಗಳಲ್ಲಿ ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.