Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗುರುವಾರ ರಾತ್ರಿ ಉಂಟಾದ ಗುಂಪು ಘರ್ಷಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಬಳ್ಳಾರಿ ನಗರ ಕ್ಷೇತ್ರದ ಸ್ವಪಕ್ಷದ ಶಾಸಕ ನಾರಾ ಭರತ್ ರೆಡ್ಡಿ ಜತೆ ಮಾತನಾಡಲಿಕ್ಕೂ ನಿರಾಕರಿಸಿದರು.
ಈ ಘಟನೆ ನಡೆದ ಬೆನ್ನಲ್ಲೇ ಅಂದರೆ ಶುಕ್ರವಾರ ಬೆಳಗ್ಗೆಯೇ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಗೆ ದೌಡಾಯಿಸಿ ಭೇಟಿಯಾಗಿ ಘಟನೆ ಕುರಿತು ಚರ್ಚೆ ನಡೆಸಿದರು. ಈ ವೇಳೆ ಸಿಎಂ. ಸಚಿವರ ಮೇಲೆಯೇ ಸಿಟ್ಟಾದರು ಎನ್ನಲಾಗಿದೆ.
ಇದನ್ನು ಸ್ವತಃ ಸಚಿವ ಜಮೀರ್ ಅಹಮದ್ ಖಚಿತಪಡಿಸಿದರು. ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನೆ ಬಗ್ಗೆ ಸಿಎಂ ಬಹಳ ಗರಂ ಆಗಿದ್ದಾರೆ. ಸಣ್ಣಪುಟ್ಟ ಘಟನೆ ದೊಡ್ಡದು ಯಾಕೆ ಮಾಡಿದರು ಅಂತ ಬೇಸರ ವ್ಯಕ್ತಪಡಿಸಿದರು. ನನ್ನ ಮೇಲೆಯೇ ರೇಗಿದರು. ತಪ್ಪು ಮಾಡಿದವರ ವಿರುದ್ಧ ಕ್ರಮ ಆಗಲಿದೆ. ಶೀಘ್ರ ಬಳ್ಳಾರಿಗೆ ಭೇಟಿ ನೀಡಲಿದ್ದೇನೆ’ ಎಂದು ಹೇಳಿದರು.