Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಲಬುರಗಿ: ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದಲ್ಲಿ ನಡೆದ ಘಟನೆಯೊಂದು ಆತಂಕಕ್ಕೆ ಕಾರಣವಾಗಿದೆ.
ಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮ ಹಾಜರಾತಿಗೆ ‘ಬಿಲ್ಡಪ್’ ಕೊಟ್ಟ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ನಡೆದಿದೆ.
ಮಠ ತೊರೆದು ಕಾಣೆಯಾಗಿದ್ದ ಶಾಂತಲಿಂಗ
ಕಳೆದ ಎಂಟು ತಿಂಗಳುಗಳಿಂದ ಮಠವನ್ನು ತೊರೆದು ಕಾಣೆಯಾಗಿದ್ದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಾರದ ಹಿಂದಷ್ಟೇ ಅಚ್ಚರಿಯಾಗಿ ಮಠಕ್ಕೆ ವಾಪಸ್ಸಾಗಿದ್ದರು. ಈ ನಡುವೆ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಕುರಿತು ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಚರ್ಚೆಗಳು ನಡೆಯುತ್ತಿದ್ದು, ಅದಕ್ಕೆ ಸಂಬಂಧಿಸಿದ ಗದ್ದಲದ ನಡುವೆಯೇ ಸ್ವಾಮೀಜಿಯ ವಾಪಸ್ಸು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿಯ ವರ್ತನೆ, ಅವರ ವಿರೋಧಿಗಳಿಗೆ ಸಂದೇಶ ನೀಡುವ ಉದ್ದೇಶದಿಂದ ನಡೆದದ್ದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ತಮ್ಮ ವಿರುದ್ಧ ಮಾತನಾಡುತ್ತಿರುವವರನ್ನು ಹೆದರಿಸಲು ಅಥವಾ ತಮ್ಮ ಪ್ರಭಾವ ತೋರಿಸಲು ಈ ರೀತಿ ನಡೆದುಕೊಂಡರಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಸ್ಥಳೀಯರ ಹೇಳಿಕೆಯ ಪ್ರಕಾರ, ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣದಿಂದ ಕೆಲ ತಿಂಗಳುಗಳ ಹಿಂದೆ ಗ್ರಾಮಸ್ಥರು ಅವರನ್ನು ಮಠದಿಂದ ಹೊರಹಾಕಿದ್ದರು. ಕುಡಿದು ರಂಪಾಟ ಮಾಡುತ್ತಿದ್ದ ಸ್ವಾಮೀಜಿಯ ವರ್ತನೆಯಿಂದ ಮಠದ ಗೌರವಕ್ಕೆ ಧಕ್ಕೆ ಉಂಟಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಇದಾದ ಬಳಿಕ ಸ್ವಾಮೀಜಿ ಮಠವನ್ನು ಬಿಟ್ಟು ತೆರಳಿದ್ದು, ಎಂಟು ತಿಂಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
https://kannada.asianetnews.com/karnataka-districts/kalaburagi-udachana-math-seer-fires-in-air-after-returns-to-math-gow/articleshow-5yyu8ff