Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವ್ಯಕ್ತಿಯೊಬ್ಬ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಕನಿಷ್ಠ 17 ಮಕ್ಕಳನ್ನು ಮುಂಬೈಯ ಪೂವೈ ಪ್ರದೇಶದಲ್ಲಿ ಗುರುವಾರ (ಅ.30) ರಕ್ಷಿಸಲಾಗಿದ್ದು, ಅಪಹರಣಕಾರನನ್ನು ರೋಹಿತ್ ಆರ್ಯ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ಸಂದರ್ಭ ಆರ್ಯ ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ಆರೋಪಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ರೋಹಿತ್ ಆರ್ಯ ಎಂಬ ವ್ಯಕ್ತಿಯೊಬ್ಬ ಪೂವೈ ಪ್ರದೇಶದಲ್ಲಿ ಸುಮಾರು 17 ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ. ಆತ ವಿಡಿಯೋವನ್ನು ಬಿಡುಗಡೆಗೊಳಿಸಿ, ನಾನು ಕೆಲವು ಜನರೊಡನೆ ಮಾತನಾಡಬೇಕು. ಒಂದು ವೇಳೆ ನನಗೆ ಮಾತನಾಡಲು ಅವಕಾಶ ನೀಡದಿದ್ದರೆ ಬೆಂಕಿ ಹಚ್ಚಿ ನನ್ನನ್ನೂ ಸೇರಿದಂತೆ ಮಕ್ಕಳನ್ನೂ ಸುಟ್ಟು ಬಿಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದ.
“ನನಗೆ ಉತ್ತರ ಬೇಕಾಗಿದೆ, ಅದನ್ನು ಬಿಟ್ಟು ನನಗೆ ಬೇರೇನೂ ಬೇಕಿಲ್ಲ. ನಾನೇನು ಭಯೋತ್ಪಾದಕನಲ್ಲ ಎಂದು ಬಂಧಿತನಾಗುವ ಮೊದಲು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಆರ್ಯ ಈ ಸಂದೇಶ ಕಳುಹಿಸಿದ್ದ.
ಘಟನೆ ಬಗ್ಗೆ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ರೋಹಿತ್ ಆರ್ಯನನ್ನು ವಶಕ್ಕೆ ಪಡೆಯಲು ಮುಂದಾದ ವೇಳೆ ಆತ ಗುಂಡಿನ ದಾಳಿ ನಡೆಸಿದ್ದ ಎನ್ನಲಾಗಿದೆ. ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದಾಗ ಆತ ಗಾಯಗೊಂಡಿದ್ದು, ಆರ್ಯನನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಅಪಹರಣಕಾರ ರೋಹಿತ್ ಜತೆ ಪೊಲೀಸರು ಮಾತುಕತೆ ನಡೆಸಿ, ಯಾಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿರುವುದಾಗಿ ಮುಂಬೈ ಪೊಲೀಸರು ಈ ಮೊದಲು ಮಾಹಿತಿ ನೀಡಿದ್ದರು.
ತಡವಾಗಿ ಬಂದ ವಿವಿ ಮಹಿಳಾ ಸಿಬ್ಬಂದಿಯನ್ನು ಬೆತ್ತಲಾಗಿಸಿ ಮುಟ್ಟು ಪರೀಕ್ಷಿಸಿದ ಮೇಲ್ವಿಚಾರಕ!