newsics.com
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಗಳ ಕುರಿತು ಮಾನಹಾನಿಕರ ಹೇಳಿಕೆಗಳು ಮತ್ತು ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಕೆಲ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಬೆಂಗಳೂರಿನ ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.
ಧರ್ಮಸ್ಥಳ ಕ್ಷೇತ್ರದ ಪರವಾಗಿ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ಬೆಂಗಳೂರಿನ 11ನೇ ಸಿಸಿಹೆಚ್ ಕೋರ್ಟ್ (CCH Court – City Civil Court), ಆಕ್ಷೇಪಾರ್ಹ ವೀಡಿಯೋಗಳನ್ನು ಕೂಡಲೇ ಡಿಲೀಟ್ ಮಾಡುವಂತೆ ಮತ್ತು ಇನ್ನು ಮುಂದೆ ಧರ್ಮಸ್ಥಳದ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಕಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ.
ಧರ್ಮಸ್ಥಳ ಧಾರ್ಮಿಕ ಸಂಸ್ಥೆಯ ಪರವಾಗಿ ಹರ್ಷೇಂದ್ರ ಕುಮಾರ್ ಅವರು ಈ ಸಂಬಂಧ ಮಾನನಷ್ಟ ಮೊಕದ್ದಮೆಯನ್ನು ಬೆಂಗಳೂರಿನ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಕೆಲ ಯೂಟ್ಯೂಬ್ ಚಾನೆಲ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಸ್ಥಳದ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಪ್ರಸಾರ ಮಾಡುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ 11ನೇ ಸಿಸಿಹೆಚ್ ಕೋರ್ಟ್, ಧರ್ಮಸ್ಥಳದ ವಿರುದ್ಧದ ಹೇಳಿಕೆಗಳು ಮಾನಹಾನಿಕರವಾಗಿವೆ ಎಂದು ಅಭಿಪ್ರಾಯಪಟ್ಟು, ತಕ್ಷಣವೇ ಆಕ್ಷೇಪಾರ್ಹ ವೀಡಿಯೋಗಳನ್ನು ಡಿಲೀಟ್ ಮಾಡುವಂತೆ ಆದೇಶಿಸಿದೆ.
ನ್ಯಾಯಾಲಯದ ಆದೇಶಕ್ಕೆ ಒಳಪಟ್ಟ ಯೂಟ್ಯೂಬ್ ಚಾನೆಲ್ಗಳು ಮತ್ತು ಸಂಬಂಧಿತ ವ್ಯಕ್ತಿಗಳೆಂದರೆ:
1. ದೂತ ಯೂಟ್ಯೂಬ್ ಚಾನೆಲ್ನ ಸಮೀರ್
2. ಗಿರೀಶ್ ಮಟ್ಟೆಣ್ಣವರ್ (ವೈಯಕ್ತಿಕ ಹೇಳಿಕೆಗಳು)
3. ಕುಡ್ಲ ರಾಂಪೇಜ್ (Kudla Rampage) ಚಾನೆಲ್
4. ಅಣ್ಣ ಬಾಂಡ್ ಯೂಟ್ಯೂಬ್ನ ಶ್ರೀನಾಥ್ ಶೆಟ್ಟಿ
ಈ ಎಲ್ಲಾ ಪ್ರತಿವಾದಿಗಳಿಗೆ ಕೋರ್ಟ್ನಿಂದ ಸ್ಪಷ್ಟ ಆದೇಶ ನೀಡಲಾಗಿದ್ದು, ಆದೇಶ ಪ್ರಕಟಗೊಂಡ ಮೂರು ದಿನಗಳ ಒಳಗಾಗಿ ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿಗಳ ವಿರುದ್ಧ ಇರುವ ಮಾನಹಾನಿಕರ ಎಲ್ಲಾ ವೀಡಿಯೋಗಳನ್ನು ತಮ್ಮ ಚಾನೆಲ್ಗಳಿಂದ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ.
ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ:
ಜೊತೆಗೆ, ಪ್ರತಿವಾದಿಗಳು ಇನ್ನು ಮುಂದೆ ಧರ್ಮಸ್ಥಳದ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಹೇಳಿಕೆಗಳನ್ನು ಸಾರ್ವಜನಿಕವಾಗಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನೀಡದಂತೆ ನ್ಯಾಯಾಲಯವು ನಿರ್ಬಂಧಕಾಜ್ಞೆ ನೀಡಿ ಆದೇಶಿಸಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಡಿಸೆಂಬರ್ 8ಕ್ಕೆ ಮುಂದೂಡಿದೆ. ಧರ್ಮಸ್ಥಳದಂತಹ ಪುಣ್ಯಕ್ಷೇತ್ರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವವರಿಗೆ ಈ ಕೋರ್ಟ್ ಆದೇಶವು ಬಲವಾದ ಎಚ್ಚರಿಕೆಯನ್ನು ರವಾನಿಸಿದೆ.
ಗ್ರಾಜುಯೇಷನ್ಡೇ ಇಷ್ಟೊಂದು ಕಾಸ್ಟ್ಲಿನಾ: ಡಿಸ್ಟಿಂಕ್ಷನ್ ಗಳಿಸಿದ್ರೂ ಅತಿಥಿಯಂತೆ ಭಾಗಿಯಾದ ಯುವತಿ