ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಅನ್ನೋ ಆರೋಪದಡಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಇದರಂತೆ ಎಸ್ಐಟಿ ತೀವ್ರ ತನಿಖೆ ನಡೆಸುತ್ತಿದೆ. ಮುಸುಕುದಾರಿ ದೂರುದಾರನ ಗಂಭೀರ ಆರೋಪದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡ ಹಲೆವೆಡೆ ಉತ್ಖನನ ಮಾಡಿದೆ. ಇದೀಗ ತನಿಖೆ ನಡೆಸುತ್ತಿರುವ ಎಸ್ಐಟಿಗೆ ರಾಜ್ಯ ಸರ್ಕಾರ ಪೊಲೀಸ್ ಠಾಣೆ ಎಂದು ಅಧಿಸೂಚನೆ ಹೊರಡಿಸಿದೆ.
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪದಡಿ ತನಿಖೆಗೆ ರಚನೆಯಾಗಿದ್ದ ಎಸ್ಐಟಿಗೆ ಪೊಲೀಸ್ ಠಾಣೆ ಮಾನ್ಯತೆಯನ್ನ ಸರ್ಕಾರ ನೀಡಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕಲಂ 2 (1)(ಯು) ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಚಲಾಯಿಸಿದ ಸರ್ಕಾರದ ಆದೇಶದಂತೆ 2025 ಜುಲೈ 19 ರಂದು ರಚನೆ ಮಾಡಲಾದ ಎಸ್ಐಟಿಯನ್ನು ಪೊಲೀಸ್ ಠಾಣೆ ಎಂದು ಅನೌನ್ಸ್ ಮಾಡಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಅನ್ನೋ ಆರೋಪದಡಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಇದರಂತೆ ಎಸ್ಐಟಿ ಧರ್ಮಸ್ಥಳದ ಸುತ್ತ ಮುತ್ತಲಿನ ಕಾಡಿನಲ್ಲಿ ತನಿಖೆ ನಡೆಸುತ್ತಿದೆ. ಇದರ ನಡುವೆ ಬರುಡೆಗಾಗಿ ಉತ್ಖನನ ಕಾರ್ಯಾಚರಣೆ ವೇಳೆ ಬಂಗ್ಲಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಮುಸುಕುದಾರಿ ದೂರುದಾರ ಗುರುತಿಸದೇ ಇದ್ದ ಸ್ಥಳದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿತ್ತು. ಶವಗಳ ಪ್ರಕರಣ ಸಂಬಂಧ ಮತ್ತೊಬ್ಬರ ದೂರುದಾರ ಜಯನ್ ಬಾಲಕಿ ಮೃತದೇಹ ಹೂತುಹಾಕಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಮೇಲಿಂದ ಮೇಲೆ ಧರ್ಮಸ್ಥಳ ಪ್ರಕರಣದಲ್ಲಿ ಆರೋಪಗಳು, ದೂರುಗಳು ದಾಖಲಾಗುತ್ತಿರುವ ಸಂಬಂಧ ಇದೀಗ ರಾಜ್ಯ ಸರ್ಕಾರ ಎಸ್ಐಟಿಗೆ ವಿಶೇಷ ಅಧಿಕಾರ ನೀಡಿದೆ. ಎಸ್ಐಟಿಗೆ ಸ್ವತಂತ್ರವಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಅಧಿಕಾರ ನೀಡಿದೆ.
ಎಸ್ಐಟಿಗೆ ನೇಮಕ ಮಾಡಲಾದ ಪೊಲೀಸ್ ನಿರೀಕ್ಷಕರ ದರ್ಜೆಯ/ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ಬಿಎನ್ಎಸ್ಎಸ್ ಅಡಿ ಠಾಣಾ ಅಧಿಕಾರಿ ಎಂದು ಘೋಷಣೆ ಮಾಡಲಾಗಿದೆ. ಎಸ್ಐಟಿ ಬಿಎನ್ಎಸ್ಎಸ್ ಅಡಿ ತನಿಖಾ ಕ್ರಮಗಳನ್ನು ಅನುಸರಿಸಿ ರಚಿಸಿರುವ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡುವಂತಹ ಅಧಿಕಾರವನ್ನು ಸರ್ಕಾರ ನೀಡಿದೆ.