newsics.com
ಯಾದಗಿರಿ: ವಿಷ ಜಂತುಗಳನ್ನು ಕಂಡರೆ ಸಾಕು ಮಾರುದ್ದ ಹೊಗುವ ಈ ದಿನಗಳಲ್ಲಿ ಇಲ್ಲೊಂದು ಬೆಟ್ಟದಲ್ಲಿ ಜನತೆ ಚೇಳು ಹಿಡಿದು ಸಂಭ್ರಮಿಸುತ್ತಾರೆ. ದಿನವಿಡೀ ಅವುಗಳ ಜತೆ ಆಟವಾಡಿದರೂ ಅವು ಕಚ್ಚುವುದಿಲ್ಲ.
ಈ ವಿಶಿಷ್ಟ ಜಾತ್ರೆ ನಡೆಯುವುದು ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿನ ಬೆಟ್ಟದಲ್ಲಿ. ಕೊಂಡಮಾಯಿ ಹೆಸರಿನ ಈ ದೇವಸ್ಥಾನ ದೇಶದಲ್ಲೇ ಅಪರೂಪ ಎನಿಸಿದೆ. ಅಪರೂಪದ ಚೇಳಿನ ಮೂರ್ತಿ ಇಲ್ಲಿದೆ. ಈ ದೇವಿಯ ಕೃಪೆಯಿಂದ ನಾಗರ ಪಂಚಮಿ ದಿನ ಇಲ್ಲಿ ಹೇರಳವಾಗಿ ಚೇಳುಗಳು ಕಾಣಿಸುತ್ತವೆ. ಅವುಗಳನ್ನು ಹಿಡಿದು ಜನರು ಸಂಭ್ರಮ ಪಡುತ್ತಾರೆ.
ವಿಶೇಷವೆಂದರೆ ವರ್ಷವಿಡೀ ಬೆಟ್ಡದಲ್ಲಿ ಸಿಗದ ಚೇಳುಗಳು ನಾಗರ ಪಂಚಮಿ ದಿನದಂದು ಮಾತ್ರ ಕಾಣಿಸುತ್ತವೆ. ಮಾತ್ರವಲ್ಲ, ಇಲ್ಲಿನ ಸಣ್ಣಪುಟ್ಟ ಕಲ್ಲು ತೆಗೆದರೂ ಈ ಹುಳು ಸಿಗುತ್ತವೆ. ವೈಜ್ಞಾನಿಕ ಕ್ಷೇತ್ರಕ್ಕೆ ಸವಾಲಾದ ಈ ವಿಸ್ಮಯ ಕಣ್ತುಂಬಿಕೊಳ್ಳಲು ಕರ್ನಾಟಕ ಸೇರಿ, ನೆರೆಯ ತೆಲಂಗಾಣ ರಾಜ್ಯದಿಂದ ಸಾವಿರಾರು ಜನ ಬೆಟ್ಟಕ್ಕೆ ಆಗಮಿಸುತ್ತಾರೆ.
ಈ ಭಾಗದಲ್ಲಿನ ಪ್ರಕೃತಿ ಹಾಗೂ ಚೇಳುಗಳ ವಂಶಾಭಿವೃದ್ಧಿಗೆ ಬೆಟ್ಡದ ತಪ್ಪಲಿನ ಈ ವಾತಾವರಣ ಪೂರಕವಾಗಿದೆ ಎಂಬ ವಿಶ್ಲೇಷಣೆ ಸಹ ಇದೆ. ಅಲ್ಲದೆ, ಗುಲಬರ್ಗಾ ವಿವಿಯ ತಜ್ಞರು ಸಹ ಪ್ರತಿವರ್ಷ ಇಲ್ಲಿಗೆ ಆಗಮಿಸಿ, ಈ ಕೌತುಕದ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ.
ಕೊಂಡಮಾಯಿ ದೇವಿ ಕೃಪೆ: ಚೇಳು ಕಚ್ಚಿದರೂ ವಿಷ ಏರುವುದಿಲ್ಲ. ಒಂದು ವೇಳೆ ವಿಷ ಏರಿದರೆ ಕೊಂಡಮಾಯಿ ದೇವಿಯ ಭಂಡಾರ (ಹಳದಿ ಬಣ್ಣ) ಹಚ್ಚಿಕೊಂಡರೆ ಕ್ಷಣಮಾತ್ರದಲ್ಲಿ ವಾಸಿಯಾಗುತ್ತದೆಯಂತೆ. ಜನರು ಇದು ಕೊಂಡಮಾಯಿ ದೇವಿಯ ಪವಾಡ ಎಂದು ನಂಬಿದ್ದಾರೆ. ಬೇರೆ ಸಮಯದಲ್ಲಿ ಗ್ರಾಮಸ್ಥರಿಗೆ ಕಚ್ಚಬಾರದು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಚೇಳುಗಳನ್ನು ಆರಾಧಿಸಲಾಗುತ್ತದೆ.
ಕಂದಕೂರು ಗ್ರಾಮದಲ್ಲಿ ಚೇಳುಗಳ ಜಾತ್ರೆ ಮಾಡಲಾಗುತ್ತದೆ. ನಾಗರ ಪಂಚಮಿ ಹಬ್ಬದ ದಿನ ಇಲ್ಲಿ ಚೇಳುಗಳನ್ನೆ ದೇವರೆಂದು ತಿಳಿದು ಪೂಜಿಸಿ ಮೈಮೇಲೆ ಹಾಕಿಕೊಂಡು ಸಂಭ್ರಮ ಪಡುತ್ತೇವೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದಂತಹ ಒಂದು ವಿಶೇಷ ಆಚರಣೆ ನಮ್ಮ ಗ್ರಾಮದಲ್ಲಿ ನಡೆಯುವುದು ವಿಶೇಷ ಎನ್ನುತ್ತಾರೆ ಭಕ್ತರು.
ಹಿಂದೆ ಬೆಟ್ಟದಲ್ಲಿ ಯಾವ ಸೌಲಭ್ಯ ಸಹ ಇರಲಿಲ್ಲ. ಆದರೆ, ಹಿಂದಿನ ಶಾಸಕರಾಗಿದ್ದ ದಿ.ನಾಗನಗೌಡ ಅವರು, ಕೊಂಡಮ್ಮಾಯಿ ಬೆಟ್ಟದ ಅಭಿವೃದ್ಧಿಗೆ ಸುಮಾರು ಒಂದು ಕೋಟಿ ರೂ.ಗಳ ವೆಚ್ಛದಲ್ಲಿ ಮೆಟ್ಟಿಲು, ಆಸನ, ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಿದ್ದು ಇಲ್ಲಿ ಸ್ಮರಿಸಬಹುದು.
ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ