newsics.com
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕ ಮೂಡಿಸಿವೆ.
ಮಂಡಳಿಯ ವ್ಯವಸ್ಥಾಪಕರ ವರ್ಗಾವಣೆಗೆ ಕಾರಣಗಳೇನು? ನಂದಿನಿ ದೋಸೆ ಇಡ್ಲಿ ಹಿಟ್ಟು ಯೋಜನೆಯಿಂದ ಹಿಂದೆ ಸರಿದಿದ್ದು ಏಕೆ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ನಂದಿನಿ ಇಡ್ಲಿ ದೋಸೆ ಹಿಟ್ಟು ಪರಿಚಯಿಸುವ ಬೆನ್ನಲ್ಲೇ ಇವರ ವರ್ಗಾವಣೆಯಾಗಿದೆ. ಕಳೆದ ಎರಡು ದಶಕಗಳಿಂದ ದೋಸೆ ಹಿಟ್ಟು ಮಾರಾಟದಲ್ಲಿ ಖಾಸಗಿ ಕಂಪನಿಗಳದ್ದೇ ಪಾರುಪತ್ಯವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಡ್ಲಿ ದೋಸೆ ಹಿಟ್ಟಿಗೆ ಬಹು ದೊಡ್ಡ ಮಾರುಕಟ್ಟೆ ಇದೆ. ಈ ಮಾರುಕಟ್ಟೆ ಪ್ರವೇಶಿಸಲು ಜಗದೀಶ್ ಅಣಿಯಾಗುತ್ತಿರುವಾಗಲೇ ಅವರ ವರ್ಗಾವಣೆಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೇರಳ ಮೂಲದ ಐಡಿ ಫ್ರೆಶ್ ದೋಸೆ ಇಡ್ಲಿ ಹಿಟ್ಟಿನ ಬ್ರ್ಯಾಂಡ್ನ ಮಾಲೀಕ ಮುಸ್ತಫಾ ಅವರ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂದು ಬಿಜೆಪಿ ಆರೋಪ ಮಾಡಿದೆ.
2005ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಐಡಿ ಫ್ರೆಶ್ ಫುಡ್ಸ್ ವಾರ್ಷಿಕ 270 ಮಿಲಿಯನ್ ಡಾಲರ್ ವಹಿವಾಟು ಹೊಂದಿದೆ.
ವಾಸ್ತವದಲ್ಲಿ ದೋಸೆ ಹಿಟ್ಟನ್ನು ನಂದಿನಿ ಉತ್ಪಾದಿಸುತ್ತಿರಲಿಲ್ಲ. ಮೂರನೇ ಸಂಸ್ಥೆಯೊಂದು ಉತ್ಪಾದಿಸಿದ ದೋಸೆ ಹಿಟ್ಟನ್ನು ನಂದಿನಿ ಬ್ರ್ಯಾಂಡ್ನ ಪ್ಯಾಕೆಟ್ಗಳಲ್ಲಿ ತುಂಬಿಸಿ ಮಾರಾಟ ಮಾಡುವ ಪ್ರಸ್ತಾವ ಇದಾಗಿತ್ತು.
ನಂದಿನಿ ಅಡಿಯಲ್ಲಿ ದೋಸೆ ಹಿಟ್ಟು ಮಾರಾಟಕ್ಕೆ ಮುಂದಾದದ್ದೇ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಗೆ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಈ ಪ್ರಸ್ತಾಪವನ್ನು 6 ತಿಂಗಳ ಹಿಂದೆಯೇ ತಡೆಹಿಡಿಯಲಾಗಿದೆ. ದೋಸೆ ಹಿಟ್ಟು ಉತ್ಪಾದಿಸುವ ಸ್ವಂತ ಉತ್ಪಾದನಾ ಘಟಕ ನಿರ್ಮಿಸುವ ಪ್ರಸ್ತಾವ ನಮ್ಮ ಮುಂದಿದೆ ಎಂದು ತಿಳಿಸಿದ್ದಾರೆ.
ಹಸಿರು ಪ್ರಾಡಕ್ಟ್ ಎಂಬ ಕಂಪನಿ ತನ್ನ ಘಟಕದಲ್ಲಿ ಉತ್ಪಾದಿಸುವ ದೋಸೆ ಹಿಟ್ಟನ್ನು ನಂದಿನಿ ಹೆಸರಿನ ಅಡಿಯಲ್ಲಿ ಮಾರಾಟ ಮಾಡುವ ಪ್ರಸ್ತಾವವನ್ನು ಕೆಎಂಎಫ್ ಮುಂದಿಟ್ಟಿತ್ತು. ಈ ಹಿಟ್ಟಿನ ಉತ್ಪಾದನೆ ಮೇಲೆ ಯಾವುದೇ ನಿಯಂತ್ರಣ ಇಲ್ಲದೆ ನಂದಿನಿ ಹೆಸರು ಬಳಕೆಗೆ ಅವಕಾಶ ಕಲ್ಪಿಸಿದರೆ ಸಮಸ್ಯೆ ಎದುರಾಗಬಹುದು. ಒಂದು ವೇಳೆ ದೋಸೆ ಹಿಟ್ಟಿನ ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ನಂದಿನ ಹೆಸರಿಗೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ಆರು ತಿಂಗಳ ಹಿಂದೆಯೇ ಪ್ರಸ್ತಾವವನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ.
ನಂದಿನಿ ಹೆಸರಿನಲ್ಲಿ ದೋಸೆ ಹಿಟ್ಟು ಮಾರಾಟಕ್ಕೆ ಅನುಮತಿ ನೀಡಿದರೆ ಹೆಚ್ಚೆಂದರೆ ವಾರ್ಷಿಕ 10 ಲಕ್ಷ ಮಾತ್ರ ಲಾಭ ಬರುತ್ತಿತ್ತು. ಇಷ್ಟು ಅಲ್ಪ ಮೊತ್ತಕ್ಕೆ ನಂದಿನಿ ಬ್ರಾಂಡ್ ಹೆಸರು ಕೆಡುವ ನಿರ್ಧಾರ ಕೈಗೊಳ್ಳುವುದು ಉತ್ತಮ ನಿರ್ಧಾರವಲ್ಲ. ನಂದಿನಿಯಿಂದಲೇ ದೋಸೆ ಹಿಟ್ಟು ಉತ್ಪಾದಿಸುವ ಸ್ವಂತ ಘಟಕ ಸ್ಥಾಪಿಸಿ ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸಲು ಪ್ರಸ್ತಾವ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಭೀಮಾನಾಯ್ಕ ಹೇಳಿದ್ದಾರೆ.
ಐಡಿ ಫ್ರೆಶ್ ಸಿಇಒ ಮುಸ್ತಫಾ ಯಾರು?
ಕೇರಳ ಮೂಲದ ಐಡಿ ಫ್ರೆಶ್ ಫುಡ್ಸ್ ಸಂಸ್ಥಾಪಕ ಹಾಗೂ ಸಿಇಒ ಪಿ.ಸಿ. ಮುಸ್ತಫಾ ಅವರನ್ನು ಫೋರ್ಬ್ಸ್ ಇಂಡಿಯಾ ‘ಟೈಕೂನ್ಸ್ ಆಫ್ ಟುಮಾರೊ’ ಎಂದು ಹೇಳಿದೆ. ‘ಬ್ಯಾಟರ್ ರಾಜಾ’ ಖ್ಯಾತಿಯ ಮುಸ್ತಫಾ ಈಗ ಸುಮಾರು ಮೂರು ಸಾವಿರ ಕೋಟಿ ರೂ. ಆಸ್ತಿಯ ರೂವಾರಿ.
ಬೆಂಗಳೂರಿನಲ್ಲೇ ಪ್ರಧಾನ ಕಚೇರಿ ಹೊಂದಿರುವ ಐಡಿ ಫ್ರೆಶ್ ಕಂಪನಿಯು ಇಡ್ಲಿ/ದೋಸಾ ಹಿಟ್ಟು, ಪರೋಟಾಗಳು, ಚಪಾತಿಗಳು, ಮೊಸರು ಮತ್ತು ಪನೀರ್ ಸೇರಿದಂತೆ ಹಲವಾರು ತಾಜಾ ಆಹಾರಗಳನ್ನು ತಯಾರಿಸುತ್ತಿದೆ.
KMF MD Transfer ಕೆಎಂಎಫ್ ಎಂಡಿ ಜಗದೀಶ್ ದಿಢೀರ್ ವರ್ಗಾವಣೆ: ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ,ಕೇರಳ ಲಾಬಿ ಶಂಕೆ
Electric shock ರಾಜ್ಯದ ಜನರಿಗೆ ವಿದ್ಯುತ್ ಶಾಕ್ ಸಾಧ್ಯತೆ: ದರ ಹೆಚ್ಚಳಕ್ಕೆ ಎಸ್ಕಾಂಗಳಿಂದ ಪ್ರಸ್ತಾವನೆ
Cyber Crime ಮಾಜಿ ಮಿಸ್ ಇಂಡಿಯಾ ಸುಂದರಿ ಡಿಜಿಟಲ್ ಅರೆಸ್ಟ್: 99 ಸಾವಿರ ರೂ. ಕಳೆದುಕೊಂಡ ಶಿವಂಕಿತಾ ದೀಕ್ಷಿತ್
Toxic movie ಯಶ್ ‘ಟಾಕ್ಸಿಕ್’ ಸಿನಿಮಾಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್