newsics.com
ಚೆನ್ನೈ: ಕುಂಭಕೋಣಂನಲ್ಲಿರುವ ಪ್ರಸಿದ್ಧ ಸೂರ್ಯನಾರ್ ದೇವಸ್ಥಾನದ ಮಠಾಧೀಶ 54 ವರ್ಷದ ಮಹಾಲಿಂಗ ಸ್ವಾಮೀಜಿ ಅವರು ತಮ್ಮ ಭಕ್ತೆ, ಬೆಂಗಳೂರಿನ 47 ವರ್ಷದ ಹೇಮಶ್ರೀ ಅವರನ್ನು ಮದುವೆಯಾಗಿದ್ದಾರೆ.
ಕಳೆದ ತಿಂಗಳೇ ಹೇಮಶ್ರೀ ಅವರನ್ನು ವಿವಾಹವಾಗುವ ಮೂಲಕ ಮಹಾಲಿಂಗ ಸ್ವಾಮೀಜಿ ಬ್ರಹ್ಮಚರ್ಯ ಮುರಿದಿದ್ದಾರೆ.
ಸ್ವಾಮೀಜಿಯವರು ದಾಂಪತ್ಯ ಜೀವನಕ್ಕೆ ದಿಢೀರ್ ಕಾಲಿಟ್ಟಿರುವ ಸಂಗತಿಯನ್ನು ವಾರಗಟ್ಟಲೆ ರಹಸ್ಯವಾಗಿಡಲಾಗಿತ್ತು. ವಿವಾಹ ವಿಚಾರ ಬಹಿರಂಗವಾಗುತ್ತಿದ್ದಂತೆ ದೊಡ್ಡ ವಿವಾದವಾಗಿದ್ದು, ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಮಠದ ‘ಅಧೀನಂ’ (ಮಠದ ಮುಖ್ಯಸ್ಥ) ಸ್ಥಾನ ತೊರೆಯುವಂತೆ ಭಕ್ತರು ಸ್ವಾಮೀಜಿ ಮೇಲೆ ಒತ್ತಡ ಹೇರಿದ್ದಾರೆ.
ಸೂರ್ಯನಾರ್ ದೇವಾಲಯ ನಿರ್ವಹಿಸುವ ಗ್ರಾಮಸ್ಥರು ಮತ್ತು ಮಠದ ಅನುಯಾಯಿಗಳು ಮಂಗಳವಾರ ಮಹಾಲಿಂಗ ಸ್ವಾಮೀಜಿ ಅವರನ್ನು ಮಠದ ಪ್ರಧಾನ ಕಚೇರಿಯಿಂದ ಬಲವಂತವಾಗಿ ಹೊರಹಾಕಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ವಿವಾಹವಾಗಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಶಿಷ್ಯ ಸ್ವಾಮಿನಾಥ ಸ್ವಾಮೀಜಿಯವರನ್ನು ವಜಾಗೊಳಿಸಿದ ಮಹಾಲಿಂಗ ಸ್ವಾಮೀಜಿ, ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಪತ್ರ ಬರೆದು ಮಠದ ಆಡಳಿತವನ್ನು ಸುಪರ್ದಿಗೆ ಪಡೆಯುವಂತೆ ಕೋರಿದ್ದಾರೆ.
ತನ್ನ ಭಕ್ತೆಯೊಂದಿಗೆ ವಿವಾಹವಾಗಿರುವುದನ್ನು ಸಮರ್ಥಿಸಿಕೊಂಡಿರುವ ಮಹಾಲಿಂಗ ಸ್ವಾಮೀಜಿ, ‘ಈ ಹಿಂದೆ ಮಠಾಧೀಶರು ವಿವಾಹವಾದ ಸಾಕಷ್ಟು ಉದಾಹರಣೆಗಳಿವೆ. ನಾನು ಮದುವೆ ನೋಂದಾಯಿಸಿದ್ದು, ಇದು ಖಾಸಗಿ ವಿಚಾರ. ಮಠಾಧೀಶನಾಗಿಯೇ ಮುಂದುವರಿಯುವೆ’ ಎಂದು ಹೇಳಿದ್ದಾರೆ.
ಮಹಾಲಿಂಗ ಸ್ವಾಮೀಜಿ ಅವರು ಮಠದ ಕೇಂದ್ರ ಕಚೇರಿ ತೊರೆಯದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ತಕ್ಷಣವೇ ಮಠವನ್ನು ತೊರೆಯಬೇಕೆಂದು ಪಟ್ಟುಹಿಡಿದಿದ್ದಾರೆ. ಭಕ್ತರ ಒತ್ತಡಕ್ಕೆ ಸೊಪ್ಪು ಹಾಕದ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು, ಮಠದ ಆಡಳಿತವನ್ನು ಅವರ ಸುಪರ್ದಿಗೆ ಒಪ್ಪಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ.
ಕಾನೂನು ತಜ್ಞರ ಜತೆ ಚರ್ಚಿಸಿ ನಮ್ಮ ನಿರ್ಧಾರವನ್ನು ಶೀಘ್ರವೇ ಪ್ರಕಟಿಸುತ್ತೇವೆ. ಮಠಾಧೀಶರ ಒಡೆತನದ ಆಸ್ತಿಗಳ ವಿವರವಾದ ಮೌಲ್ಯಮಾಪನ ಕೂಡ ಮಾಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಕೆ. ಶೇಖರ್ಬಾಬು ಹೇಳಿದ್ದಾರೆ.
ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿರುವ ಸೂರ್ಯನಾರ್ ದೇವಸ್ಥಾನದ ‘ಅಧೀನಂ’ನ 28ನೇ ಮುಖ್ಯಸ್ಥರಾಗಿ 2022ರಲ್ಲಿ ಅಧಿಕಾರ ವಹಿಸಿಕೊಂಡ ಮಹಾಲಿಂಗ ಸ್ವಾಮೀಜಿ, ಕಳೆದ ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಹೇಮಶ್ರೀ ಅವರನ್ನು ವರಿಸಿದ್ದಾರೆ.
ತಮಿಳುನಾಡಿನಲ್ಲಿ ಶತಮಾನಗಳ ಹಿಂದೆ ಸ್ಥಾಪಿಸಲಾದ 18 ಶೈವ ಮಠಗಳಲ್ಲಿ ಸೂರ್ಯನಾರ್ ದೇವಾಲಯದ ಮಠವೂ ಒಂದಾಗಿದೆ.
ರಿಲಯನ್ಸ್ ಸೆಂಟ್ರೋ ಸ್ಟೋರ್ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ: ಇದಕ್ಕೇನು ಕಾರಣ?
ಬಿಯರ್ ಕುಡಿಯುವುದರಿಂದ ಸೌಂದರ್ಯ ಹೆಚ್ಚುತ್ತದೆಯೇ? ಎಷ್ಟರ ಮಟ್ಟಿಗೆ ಸತ್ಯ..?