newsics.com
ಬೆಂಗಳೂರು: ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಅಥವಾ ಖಾಸಗಿಯವರಿಗೆ ನೀಡಬಾರದು ಎಂಬ ಹಕ್ಕೊತ್ತಾಯ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ,
ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಬೃಹತ್ ಸಮಾವೇಶದಲ್ಲಿ ಕೇಳಿಬಂತು.
ಅಲ್ಲದೆ, ಮುಜರಾಯಿ ದೇವಸ್ಥಾನಗಳ ಹಣವು 2003 ರ ಕಾಯಿದೆಯನ್ವಯ ಹಾಗೂ ನಿಯಮಾನುಸಾರ ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ ಮಾತ್ರವೇ ಬಳಸಬಹುದಾಗಿರುತ್ತದೆ. ಸರ್ಕಾರಕ್ಕೂ ಈ ಹಣವನ್ನು ವರ್ಗಾಯಿಸಲು ಅಥವಾ ಪಡೆಯಲು ಈ ಕಾಯಿದೆಯಡಿಯಲ್ಲಿ ಅವಕಾಶವಿಲ್ಲ. ಆದರೂ ವಿನಾಕಾರಣ ಅನ್ಯ ಧರ್ಮದ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತದೆ ಎಂದು ಅಪಪ್ರಚಾರ ಮಾಡುವುದು ಒಪ್ಪತಕ್ಕದ್ದಲ್ಲ, ಇದು ಅಕ್ಷರಶಃ ಸುಳ್ಳು ಎಂದು ಅರ್ಚಕರ ಸಮಾವೇಶ ಸ್ಪಷ್ಟಪಡಿಸಿತು.
ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ ನಮ್ಮ ಮುಜರಾಯಿ ಇಲಾಖೆಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿರುವುದು ಒಳ್ಳೆಯ ಶುಭ ಸಂಕೇತ ಎಂದ ಅರ್ಚಕರ ಸಮೂಹ, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳಿತು.
ರಾಮಲಿಂಗಾ ರೆಡ್ಡಿಯವರಿಗೆ ಯಾವುದೇ ಖಾತೆ ನೀಡಲಿ. ಆದರೆ ಮುಜರಾಯಿ ಖಾತೆ ರಾಮಲಿಂಗಾರೆಡ್ಡಿ ಅವರ ಬಳಿಯೇ ಇರಬೇಕು ಎಂಬ ಒಕ್ಕೊರಲ ಒತ್ತಾಯ ಅರ್ಚಕರ ಸಮಾವೇಶದಲ್ಲಿ ಕೇಳಿಬಂತು.
ರಾಜ್ಯದಲ್ಲಿರುವ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ, 34,166 ಸಿ ವರ್ಗದ ದೇವಾಲಯಗಳಿದ್ದು, ರಾಜ್ಯಪಾಲರು ಕಾಯ್ದೆಗೆ ತಕ್ಷಣ ಅನುಮೋದನೆ ನೀಡಬೇಕೆಂದು ಸಮಾವೇಶ ಒತ್ತಾಯಿಸಿತು.
ರಾಜ್ಯಪಾಲರ ಅನುಮೋದನೆಯಿಂದ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ಧಿಗೆ ಹಣ ವಿನಿಯೋಗಿಸಲು ಅನುಕೂಲವಾಗುತ್ತದೆ ಎಂದು ಅರ್ಚಕರ ಸಮಾವೇಶ ಅಭಿಪ್ರಾಯಪಟ್ಟಿತು.
ಬಡ ಅರ್ಚಕರುಗಳ ಬಗ್ಗೆ ಯಾರೊಬ್ಬರೂ ಈವರೆಗೆ ಕಾಳಜಿ ವಹಿಸಿರಲಿಲ್ಲ. ಆದರೆ ಸಚಿವ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಹಾಗೂ ಕಾಳಜಿ ಪರ ನಡೆಯು ಫಲವಾಗಿ ಮಸೂದೆಯು ನಮಗೊಂದು ಭರವಸೆ ಮೂಡಿಸಿದೆ. ಈ ಮಸೂದೆಯನ್ನು ರಾಜ್ಯಪಾಲರು ತಕ್ಷಣ ಸಮ್ಮತಿಸಬೇಕು ಎಂದು ಸಮಾವೇಶ ಆಗ್ರಹಿಸಿತು.
ಈ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ , ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಚಿವ, ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಗೌರವ ಪ್ರಧಾನ ಸಲಹೆಗಾರ ರಾಧಾಕೃಷ್ಣ ಕೆ.ಇ. ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದೂ ಭಾರೀ ಮಳೆ ಸಾಧ್ಯತೆ, ಕಟ್ಟಡ ಕುಸಿತದಲ್ಲಿ ಮೃತರ ಸಂಖ್ಯೆ ಐದಕ್ಕೇರಿಕೆ
ಸಲ್ಮಾನ್ ಬೆನ್ನತ್ತಿರುವ ಲಾರೆನ್ಸ್ ಬಿಷ್ಣೋಯಿ ಕೊಂದರೆ 1,11,11,111 ರೂ. ಬಹುಮಾನ! ಯಾರು ಈ ಘೋಷಣೆ ಮಾಡಿದ್ದು?
ಕಾಮನ್ವೆಲ್ತ್ ಕ್ರೀಡಾಕೂಟ: 9 ಆಟಗಳಿಗೆ ಗೇಟ್ಪಾಸ್, ಭಾರತಕ್ಕೆ ಗ್ರೇಟ್ ಲಾಸ್