newsics.com
ಮಂಗಳೂರು: ಬೇರೊಬ್ಬರ ಜೀವ ಉಳಿಸಲು ಯತ್ನಿಸಿದ ಕುಂದಾಪುರ ಮೂಲದ ಉಪನ್ಯಾಸಕಿಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಂಗದಾನ ಪ್ರಕ್ರಿಯೆ ವೇಳೆ ನಡೆದ ಎಡವಟ್ಟಿನಿಂದ ಮಂಗಳೂರಿನ ಉಪನ್ಯಾಸಕಿ ಅರ್ಚನಾ ಕಾಮತ್ (33) ಮೃತಪಟ್ಟಿದ್ದಾರೆ.
ಅರ್ಚನಾ ಮಂಗಳೂರು ನಗರದ ಕರಂಗಲ್ಪಾಡಿ ನಿವಾಸಿ. ಮಂಗಳೂರಿನ ಪ್ರಸಿದ್ಧ ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ಪತ್ನಿ ಅರ್ಚನಾ ಕಾಮತ್ ಸಾವಿನಿಂದ ಅವರ ನಾಲ್ಕು ವರ್ಷದ ಮಗು ತಬ್ಬಲಿಯಾಗಿದೆ.
ಯಕೃತ್ತಿಗೆ (ಲಿವರ್) ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರೊಬ್ಬರಿಗೆ ಯಕೃತ್ತಿನ ಕಸಿಗೆ ತಮ್ಮ ಯಕೃತ್ತನ್ನು ದಾನ ಮಾಡಿದ್ದರು. ಈ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ವೇಳೆ ಸೋಂಕಿಗೆ ತುತ್ತಾಗಿದ್ದರು ಎಂದು ಹೇಳಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅರ್ಚನಾ ಮೃತದೇಹವನ್ನು ಕರಂಗಲ್ಪಾಡಿ ನಿವಾಸಕ್ಕೆ ತಂದು ವಿಧಿ ವಿಧಾನ ನೆರವೇರಿಸಿದ ಬಳಿಕ ಕುಂದಾಪುರದ ಕೋಟೇಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.