newsics.com
ವಿಜಯನಗರ: ಜಗತ್ತಿನ ಅಪರೂಪದ ‘ರಾಮ ಸೆಣಬು’ ಗಿಡಗಳು ಹೊಸಪೇಟೆ, ಸಂಡೂರಿನ ಬೆಟ್ಟಗಳಲ್ಲಿ ಮತ್ತೆ ಚಿಗುರೊಡೆದು ಗಮನ ಸೆಳೆಯುತ್ತಿವೆ.
ಸಮುದ್ರ ಮಟ್ಟದಿಂದ 1 ಸಾವಿರ ಮೀಟರ್ ಎತ್ತರದಲ್ಲಿರುವ ಈ ಪರ್ವತ ಶ್ರೇಣಿಯಲ್ಲಿ ಅಪರೂಪದ ಜೀವ ವೈವಿಧ್ಯದ ತಾಣವಾಗಿದ್ದು, ರಾಮ ಸೆಣಬು ಬೆಳೆಯುವ ವಿಶ್ವದ ಏಕೈಕ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಗಣಿಗಾರಿಕೆ ಅಬ್ಬರದಲ್ಲಿ ನಲುಗಿದ್ದ ಅನೇಕ ಸಸಿಗಳು ಮತ್ತೆ ಜೀವತಳೆಯುತ್ತಿವೆ. ಆ ಪೈಕಿ ‘ರಾಮ ಸೆಣಬು’ ಸುಮಾರು ದಶಕದ ಬಳಿಕ ಮತ್ತೆ ನಳನಳಿಸುತ್ತಿದೆ.
ಈ ಗಿಡದ ಎಲೆಗಳ ಸುತ್ತಲಿನ ರೋಮಗಳು ಸೂರ್ಯರಶ್ಮ್ಮಿಯಂತೆ ಹೊಳೆಯುತ್ತವೆ. ಹಳದಿ ಹೂವು, ಬುರುಡೆಯಂತಿರುವ ಕಾಯಿ, ಹುರುಳಿಯಾಕಾರದ ಬೀಜಗಳನ್ನು ಬಿಡುವ ಈ ಸಸ್ಯ ಸೆಣಬಿನ ವರ್ಗಕ್ಕೆ ಸೇರಿದೆ. ಅಪಾರ ಮಕರಂದವುಳ್ಳ ಈ ಗಿಡ ಚಿಟ್ಟೆ, ಜೇನುನೋಣ ಪ್ರಬೇಧದ ಕೀಟಗಳನ್ನು ಸೆಳೆಯುತ್ತದೆ ಎಂಬುದು ವಿಶೇಷ.
1912ರಲ್ಲಿ ಯುರೋಪ್ ಮೂಲದ ಸಸ್ಯಶಾಸಜ್ಞ ಜೆ.ಎಸ್ಗ್ಯಾಂಬೆಲ್ ಅವರು ರಾಮಗಡ ಪರ್ವತದಲ್ಲಿ ಪಸರಿಸಿದ್ದ ಈ ಗಿಡಗಳನ್ನು ಪತ್ತೆ ಮಾಡಿದ್ದರು. ಇತರೆ ಸೆಣಬು ಸಸ್ಯಗಳೊಂದಿಗೆ ಹೋಲಿಸಿದಾಗ ಈ ಪ್ರಬೇಧ ಕೇವಲ ರಾಮಗಡ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ನಿರ್ಧರಿಸಿದ್ದರು. ಹೀಗಾಗಿ ಈ ಗಿಡಕ್ಕೆ ‘ಕ್ರೋಟಲೇರಿಯಾ ಸಂಡೂರೆನ್ಸಿಸ್’ ಎಂದು ಕರೆಯಲಾಗಿತ್ತು.
ಇದಕ್ಕೆ ಕನ್ನಡದಲ್ಲಿ ಯಾವುದೇ ಹೆಸರಿಲ್ಲದಿದ್ದರೂ, ‘ರಾಮ ಸೆಣಬು’ ಎಂಬುದು ಇಲ್ಲಿ ಜನಜನಿತ.
ದಶಕಗಳ ಬಳಿಕ ಪತ್ತೆ:
ಹೊಸಪೇಟೆಯ ತುಂಗಭದ್ರಾ ಜಲಾಶಯದ ಪಕ್ಕದಿಂದ ಆರಂಭಗೊಳ್ಳುವ ರಾಮನಮಲೆ ಬೆಟ್ಟ ರಾಯರ ಕೆರೆ ಹಾದಿಯಾಗಿ ಸಂಡೂರಿನ ಸ್ವಾಮಿಹಳ್ಳಿವರೆಗೆ ಸುಮಾರು 48 ಕಿ.ಮೀ. ವ್ಯಾಪಿಸಿದೆ. ಸಂಡೂರು ತಾಲೂಕಿನ ರಾಮಗಡ ರಸ್ತೆಯುದ್ದಕ್ಕೆ, ತಾಯಮ್ಮನಕೊಳ್ಳದಿಂದ ಯಶವಂತನಗರ ಕಣಿವೆ ಪ್ರದೇಶದಲ್ಲಿ ಈಗ ಹೇರಳವಾಗಿ ಕಂಡುಬರುತ್ತಿವೆ.
ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದ ಬಳಿಕ ಸುಮಾರು ಕಳೆದ ಒಂದು ದಶಕದ ಬಳಿಕ ಈ ವರ್ಷ ‘ರಾಮ ಸೆಣಬು’ ಗಿಡಗಳು ಹೆಚ್ಚಾಗಿ ಕಂಡುಬರುತ್ತಿವೆ.
ಚಳಿಗಾಲದ ಆರಂಭದಲ್ಲಿ ಹೂಬಿಟ್ಟು ಚಳಿಗಾಲದ ಅಂತ್ಯದ ವೇಳೆಗೆ ಬುರುಡೆಯಾಕಾರದ ಕಾಯಿಗಳು ಬಿಡುತ್ತವೆ. ನೆಲಕ್ಕೆ ಬಿದ್ದ ಬೀಜಗಳು ಮತ್ತೆ ಮಳೆಗಾಲದಲ್ಲಿ ಮೊಳಕೆಯೊಡೆದು ಬೆಳೆಯುವುದು ಗಿಡದ ವಿಶೇಷತೆ ಎನ್ನುತ್ತಾರೆ ಡಾ.ಸಮ್ಮದ್ ಕೊಟ್ಟೂರು.
ಈ ಪರ್ವತ ಶ್ರೇಣಿಯಲ್ಲಿ ಸಂಗ್ರಹಿಸಿದ್ದ ರಾಮ ಸೆಣಬು ಬೀಜಗಳನ್ನು ದೂರದ ಕೊಪ್ಪಳದ ಕನಕಗಿರಿ ಕಾಡಿನಲ್ಲಿ ಬೆಳೆಸುವ ಪ್ರಯೋಗ ಮಾಡಿದ್ದು ಫಲಿಸಲಿಲ್ಲ. ಅಪರೂಪದ ಈ ಗಿಡದ ಸಂರಕ್ಷಣೆಗಾಗಿ ಈ ಪರ್ವತ ಶ್ರೇಣಿಯನ್ನು ಜೀವವೈವಿಧ್ಯ ಸಂರಕ್ಷಿತ ತಾಣವನ್ನಾಗಿ ಸರ್ಕಾರ ಘೋಷಿಸಿ, ‘ರಾಮ ಸೆಣಬು’ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆಯಬೇಕು ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಆಗ್ರಹಿಸಿದ್ದಾರೆ.
ಪ್ರತಿ ದಿನ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಹಾಗಾದ್ರೆ ಈ ಸಮಸ್ಯೆ ಕಾಡಬಹುದು ಎಚ್ಚರ
ಭಾರತಕ್ಕೆ 5ನೇ ಪದಕ; 10 ಮೀ. ಏರ್ ರೈಫಲ್ನಲ್ಲಿ ಕಂಚು ಗೆದ್ದ ರುಬಿನಾ ಫ್ರಾನ್ಸಿ