ಒಂದು ಕಾಲದಲ್ಲಿ ಸ್ಮಶಾನದಲ್ಲಿ ಮಲಗುತ್ತಿದ್ದ ರಘು ಇಂದು ಟೀಂ ಇಂಡಿಯಾ ಆಟಗಾರರ ಜೊತೆ ವಿಶ್ವ ಸುತ್ತಾಡುತ್ತಾರೆ. ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಇಡೀಯ ಭಾರತವೇ ಸಂತಸದಲ್ಲಿ ಕುಣಿಯುತ್ತಿದೆ. ವಿಶ್ವವೇ ಮೆಚ್ಚಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರ ನಡುವೆ ಡ್ರೆಸ್ಸಿಂಗ್ ರೂಮ್ ನಲ್ಲಿ ಹಣೆಗೊಂದು ತಿಲಕವಿಟ್ಟು ಕನ್ನಡಿಗನೊಬ್ಬ ಸಾರ್ಥಕ ನಗೆ ಬೀರುತ್ತಿದ್ದಾನೆ. ಆತನೇ ಭಾರತದ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಯಾನೆ ರಾಘವೇಂದ್ರ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಧ್ಯಮ ವರ್ಗದ ಹುಡುಗ ಈ ರಾಘವೇಂದ್ರ. ಕ್ರಿಕೆಟ್ ಎಂದರೆ ಎಲ್ಲಿಲ್ಲದ ಹುಚ್ಚು. ಒಮ್ಮೆ ಸಂಬಂಧಿಕರ ಮನೆಗೆಂದು ಮುಂಬೈಗೆ ಹೋಗಿದ್ದ ರಘು ಅಲ್ಲಿ ಕ್ರಿಕೆಟ್ ಗುರು ರಮಾಕಾಂತ್ ಆಚ್ರೇಕರ್ ಅವರ ಬಳಿ ಕೆಲ ದಿನಗಳ ಕಾಲ ಪಾಠ ಕಲಿತಿದ್ದ. ತಂದೆ ಶಾಲಾ ಶಿಕ್ಷಕ. ಮಗನ ಕ್ರಿಕೆಟ್ ಹುಚ್ಚು ಅವರಿಗೆ ಹಿಡಿಸಿರಲಿಲ್ಲ. ಕ್ರಿಕೇಟ್ ಮೇಲಿನ ಪ್ರೀತಿಅವರನ್ನು ಕುಮಟಾದಿಂದ ಹುಬ್ಬಳ್ಳಿ ಬಸ್ಸು ಹತ್ತಿಸಿತ್ತು.
ಹುಬ್ಬಳ್ಳಿಯಲ್ಲಿ ಉಳಿದುಕೊಳ್ಳಲು ಯಾವುದೇ ಸಂಬಂಧಿಕರ ಮನೆಯಾಗಲಿ, ಹಾಸ್ಟೆಲ್ ಆಗಲಿ ಇರಲಿಲ್ಲ. ಹೀಗಾಗಿ ಜನಾಶ್ರಯದ ತಾಣಗಳಲ್ಲಿ ತನಗೆ ಉಚಿತ ಆಶ್ರಯ ದೊರೆಯದು ಎಂದು ಅರಿತ ರಘು ಆರಿಸಿಕೊಂಡಿದ್ದು ಸ್ಮಶಾನವನ್ನು. ಕೆಎಸ್ ಸಿಎ ಮೈದಾನದ ಬಳಿಯ ಸ್ಮಶಾನವೇ ರಘುವಿಗೆ ಮನೆ. ಹಗಲು ಮೈದಾನದಲ್ಲಿ ಅಭ್ಯಾಸ ರಾತ್ರಿ ಸ್ಮಶಾನದಲ್ಲಿ ವಾಸ. ಮುಂದಿನ ಹೀಗೆ ನಾಲ್ಕುವರೆ ವರ್ಷ ಸ್ಮಶಾನದ ಚಳಿ- ಮಳೆ- ಬಿಸಿಲು ಯಾವುದೂ ಅಡ್ಡಿಯಾಗಲಿಲ್ಲ ರಘುವಿಗೆ ಅಲ್ಲಿಯೇ ಕಳೆದಿದ್ದ.
ಮುಂದೆ 2011ರಲ್ಲಿ ಟೀಂ ಇಂಡಿಯಾದ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ರಘು ಆಯ್ಕೆಯಾದ. ಆಟಗಾರರಿಗೆ ಥ್ರೋ ಬೌಲಿಂಗ್ ಮಾಡುವುದು ರಘುವಿನ ಪ್ರಮುಖ ಕೆಲಸವಾಯಿತು. ರಘು ಎಸೆಯುವ 150ರಿಂದ 155 ಕಿ.ಮೀ ವೇಗದ ಬೌಲಿಂಗ್ ನಿಂದ ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಾರೆ. ಇಷ್ಟೊಂದು ವೇಗದ ಬೌಲಿಂಗ್ ಅನ್ನು ನೆಟ್ ನಲ್ಲಿ ಎದುರಿಸುವ ಕಾರಣ ಮೈದಾನದಲ್ಲಿ ವೇಗಿಗಳನ್ನು ಸುಲಭವಾಗಿ ಎದುರಿಸಬಹುದು ಎನ್ನುವುದು ಕೊಹ್ಲಿ ಮಾತು. ರಘು ಟೀಂ ಇಂಡಿಯಾದ ವಿದೇಶಿ ಬೌಲರ್ ಎಂದು ಧೋನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.