newsics.com/ನ್ಯೂಸಿಕ್ಸ್
ಕೋಲ್ಕತ್ತ : ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯ ಬಂಗಾಳಿ ತಿನಿಸು ನೀಡಿ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಜಲ್ಮುರಿ ಮಾರಾಟಗಾರನಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬೆದರಿಕೆ ಕರೆಗಳು ಬರುತ್ತಿವೆ.
ಜಲ್ಮುರಿ ಮಾರಾಟಗಾರ ಬಿಕ್ರಮ್ ಸೌಗೆ ಕಳೆದ ಕೆಲವು ದಿನಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಪದೇ ಪದೇ ಫೋನ್ ಮತ್ತು ವೀಡಿಯೊ ಕರೆಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಗ್ರೆಸ್ಸೀವ್ ಆಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದ ವೇಳೆ, ತಮ್ಮ ವಾಹವನ್ನು ನಿಲ್ಲಿಸಿ, ವಿಕ್ರಮ್ ಸಾವ್ ಎನ್ನುವ ವ್ಯಾಪಾರಿಯ ಬಳಿ ಹತ್ತು ರೂಪಾಯಿ ನೀಡಿ, ಜಾಲ್ಮುರಿ ಸವಿದಿದ್ದರು. ಇದರ ವಿಡಿಯೋ, ಬರೀ ಬಂಗಾಳದಲ್ಲಿ ಮಾತ್ರವಲ್ಲ, ನೆರೆ ದೇಶಗಳಲ್ಲೂ ವೈರಲ್ ಆಗಿದ್ದವು. ರಾತ್ರೋರಾತ್ರಿ ವಿಕ್ರಮ್ ಸಾವ್, ಫುಲ್ ಫೇಮಸ್ ಆಗಿ ಬಿಟ್ಟಿದ್ದರು. ಈಗ ಅದುವೇ, ಅವರ ಜೀವ ಬೆದರಿಕೆಗೆ ಕಾರಣವಾಗಿದೆ ಎಂದು ಇವರು ಅಳಲು ತೋಡಿಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿಗಳು ಪದೇಪದೇ ನನಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಮತ್ತು ನಿಂದಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ನಂಬರ್’ಗಳಿಂದ ಪದೇಪದೇ ನನಗೆ ಫೋನ್’ಗಳು ಬರುತ್ತಿವೆ. ವಿಡಿಯೋ ಕಾಲ್ ಮೂಲಕವೂ ಬೆದರಿಕೆ ಹಾಕುತ್ತಿದ್ದಾರೆ. ನಿನ್ನನ್ನು ಮತ್ತು ನಿನ್ನ ಅಂಗಡಿಯನ್ನು ಬಾಂಬ್ ಹಾಕಿ ಉಡಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ” ಎಂದು ವಿಕ್ರಮ್ ಸಾವ್ ನೋವು ತೋಡಿಕೊಂಡಿದ್ದಾರೆ. ವಿಡಿಯೋ ಮೂಲಕ ಮಾತನಾಡುವಾಗ ಮಾರಕಾಸ್ತ್ರಗಳನ್ನು ತೋರಿಸುತ್ತಾರೆ ಎಂದು ಸುದ್ದಿಸಂಸ್ಥೆ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.
ಅವರ ಬೆದರಿಕೆ ಮಾತುಗಳಿಗೆ ನಾನು ಏನನ್ನೂ ಮಾತನಾಡದೇ ಕಾಲ್ ಕಟ್ ಮಾಡುತ್ತಿದ್ದೇನೆ. ಅಷ್ಟೊತ್ತಿಗೆ ಬಾಂಗ್ಲಾದ ನಂಬರ್’ನಿಂದ ಮತ್ತೊಂದು ಫೋನ್ ಬರುತ್ತದೆ. ನೀನು ಇನ್ನೂ ಬದುಕಿದ್ದೀಯಾ ಎಂದು ಪ್ರಶ್ನಿಸುತ್ತಾರೆ, ಮಾತನಾಡುವಾಗ ಏನೇನೋ ಸನ್ನೆಯನ್ನು ಮಾಡುತ್ತಾರೆ. ಬೇರೆ ಬೇರೆ ನಂಬರ್’ನಿಂದ ದೂರವಾಣಿ/ವಿಡಿಯೋ ಕರೆಗಳು ಬರುತ್ತಿದೆ. ನಿನ್ನ ಅಂತ್ಯ ಸದ್ಯದಲ್ಲೇ ಆಗುತ್ತದೆ ಎಂದು ಬೆದರಿಸುತ್ತಿದ್ದಾರೆ, ನನಗೆ ರಕ್ಷಣೆ ಬೇಕು ಎಂದು ಇವರು ಪೊಲೀಸರಿಗೆ ಮನವಿಯನ್ನು ಮಾಡಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಿರುವ ಬಂಗಾಳದ ಪೊಲೀಸರು, ಕೆಲವರನ್ನು ಭದ್ರತೆಗೆ ನಿಯೋಜಿಸಿದ್ದಾರೆ.