ದೇಶದ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಲಕ್ಷಣ ಡಿಜಿಟಲ್ ಕ್ರಾಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭುಗಿಲೆದ್ದಿದೆ. ಇನ್ಸ್ಟಾಗ್ರಾಮ್ನಲ್ಲಿ ದೇಶದ ಆಡಳಿತಾರೂಢ ಬಿಜೆಪಿಯ ಅಧಿಕೃತ ಖಾತೆಯನ್ನೇ ಫಾಲೋವರ್ಸ್ ಸಂಖ್ಯೆಯಲ್ಲಿ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಯ ಅಧಿಕೃತ ಎಕ್ಸ್ ಖಾತೆಯನ್ನು ಭಾರತದಲ್ಲಿ ಗುರುವಾರ ಹಠಾತ್ತನೆ ಬ್ಲಾಕ್ ಮಾಡಲಾಗಿತ್ತು.
ಆದರೆ, ಈ ನಿರ್ಬಂಧಕ್ಕೆ ಜಗ್ಗದ ಜಿರಳೆ ಸೈನ್ಯ, ಕೇವಲ ಕೆಲವೇ ಗಂಟೆಗಳಲ್ಲಿ ಹೊಸ ಖಾತೆ ತೆರೆಯುವ ಮೂಲಕ ತನ್ನ ವಿರೋಧಿಗಳಿಗೆ ನಡುಕ ಹುಟ್ಟಿಸಿದೆ.
ಹೊಸ ಖಾತೆ ಆರಂಭವಾದ ಕೇವಲ ಒಂದು ಗಂಟೆಯೊಳಗೆ ತನ್ನ ವಿಮರ್ಶಕರು ಮತ್ತು ಆಡಳಿತ ವ್ಯವಸ್ಥೆಯನ್ನು ಅಣಕಿಸಿ ಎರಡು ಪೋಸ್ಟ್ಗಳನ್ನು ಹಂಚಿಕೊಂಡಿದೆ. ನಮ್ಮನ್ನು ಮುಗಿಸಬಹುದು ಎಂದು ಅಂದುಕೊಂಡಿದ್ದೀರಾ, ಲೋಲ್ ಎಂದು ಬರೆಯುವ ಮೂಲಕ ತಮಾಷೆ ಮಾಡಿದೆ. ಮತ್ತೊಂದು ಪೋಸ್ಟ್ನಲ್ಲಿ ಬಿಜೆಪಿ ಇನ್ಸ್ಟಾಗ್ರಾಮ್ ಖಾತೆ ಹಾಗೂ ತನ್ನ ಹಳೆಯ ಖಾತೆಯ ಫಾಲೋವರ್ಸ್ ಸಂಖ್ಯೆಯ ಸ್ಕ್ರೀನ್ಶಾಟ್ ಹಾಕಿ ಅವರು ನಮ್ಮನ್ನು ಬ್ಲಾಕ್ ಮಾಡಲು ಅಸಲಿ ಕಾರಣ ಇಲ್ಲಿದೆ ಎಂದು ಬರೆದುಕೊಂಡು ಸವಾಲು ಹಾಕಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆ ಒಂದು ಹೇಳಿಕೆ!
ಕೇವಲ ನಾಲ್ಕೈದು ದಿನಗಳ ಹಿಂದೆ ಹುಟ್ಟಿಕೊಂಡ ಈ ‘ಕಾಕ್ರೋಚ್ ಜನತಾ ಪಾರ್ಟಿ ಕೇವಲ ಒಂದು ಮೀಮ್ ಟ್ರೆಂಡ್ ಅಲ್ಲ, ಇದು ಭಾರತೀಯ ಯುವಕರ ಆಕ್ರೋಶದ ಜ್ವಾಲಾಮುಖಿಯಾಗಿದೆ. ಕಳೆದ ವಾರ ಸುಪ್ರೀಂ ಕೋರ್ಟ್ ವಿಚಾರಣೆಯೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೇಶದ ನಿರುದ್ಯೋಗಿ ಯುವಕರು ಮತ್ತು ಆನ್ಲೈನ್ ಕಾರ್ಯಕರ್ತರನ್ನು ಪರೋಕ್ಷವಾಗಿ ಜಿರಳೆಗಳು ಮತ್ತು ಪರಾವಲಂಬಿಗಳು ಎಂದು ಕರೆದಿದ್ದರು ಎನ್ನಲಾದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಮುಖ್ಯ ನ್ಯಾಯಮೂರ್ತಿಗಳು ನಂತರ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ನಾನು ನಕಲಿ ಪದವಿ ಬಳಸಿ ವೃತ್ತಿ ರಂಗಕ್ಕೆ ಬರುವವರನ್ನು ಮಾತ್ರ ಹಾಗೆ ಕರೆದಿದ್ದೆ ಎಂದು ಸ್ಪಷ್ಟನೆ ನೀಡಿದರೂ ಯುವಕರ ಆಕ್ರೋಶ ತಣ್ಣಗಾಗಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಹಾಗೂ ಆಮ್ ಆದ್ಮಿ ಮಾಜಿ ಸೋಷಿಯಲ್ ಮೀಡಿಯಾ ಕಾರ್ಯಕರ್ತ, 30 ವರ್ಷದ ಅಭಿಜೀತ್ ದಿಪ್ಕೆ, ಜಿರಾಫೆ ಅಥವಾ ಸಿಂಹದ ಲೋಗೋ ಇಡುವ ಪಕ್ಷಗಳ ನಡುವೆ ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿಡಂಬನಾತ್ಮಕ ಆಂದೋಲನ ಆರಂಭಿಸಿದರು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಸಂವಿಧಾನದ ರಕ್ಷಕರಿಂದಲೇ ಇಂತಹ ಮಾತುಗಳು ಬಂದಾಗ ಅದು ನಮ್ಮ ಮನಸ್ಸಿಗೆ ತೀವ್ರ ಆಘಾತ ನೀಡಿತು. ಅದಕ್ಕೇ ನಾವು ಈ ಹೆಸರನ್ನೇ ಅಸ್ತ್ರವಾಗಿಸಿಕೊಂಡೆವು ಎಂದು ಅಭಿಜೀತ್ ದಿಪ್ಕೆ ಹೇಳಿದ್ದಾರೆ.
ಡಿಜಿಟಲ್ ಜಗತ್ತಿನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಜಿರಳೆಗಳು!
ಇನ್ಸ್ಟಾಗ್ರಾಮ್ನಲ್ಲಿ ಕೇವಲ 50 ಕ್ಕೂ ಹೆಚ್ಚು ಪೋಸ್ಟ್ಗಳ ಮೂಲಕ ಈ ಪಾರ್ಟಿ ಬರೋಬ್ಬರಿ 1 ಕೋಟಿಗೂ ಹೆಚ್ಚು ಫಾಲೋವರ್ಸ್ ದಾಟುವ ಮೂಲಕ ಬಿಜೆಪಿಯ ಇನ್ಸ್ಟಾಗ್ರಾಮ್ ಖಾತೆಯನ್ನು (8.7 ಮಿಲಿಯನ್) ಧೂಳೀಪಟ ಮಾಡಿದೆ. ಕಾಂಗ್ರೆಸ್ (13 ಮಿಲಿಯನ್) ನಂತರದ ಸ್ಥಾನದಲ್ಲಿದ್ದರೂ, CJP ಬೆಳೆಯುತ್ತಿರುವ ವೇಗ ನೋಡಿದರೆ ರಾಜಕೀಯ ಪಂಡಿತರಿಗೇ ಬೆವರಿಳಿಯುವಂತಾಗಿದೆ.
ಇವರ ಅಧಿಕೃತ ಸ್ಲೋಗನ್ ಕೂಡ ವಿಶಿಷ್ಟವಾಗಿದೆ: ಯುವಕರಿಗಾಗಿ, ಯುವಕರಿಂದ, ಯುವಕರದೇ ರಾಜಕೀಯ ರಂಗ, ಸೆಕ್ಯುಲರ್, ಸೋಷಿಯಲಿಸ್ಟ್, ಡೆಮಾಕ್ರಟಿಕ್ ಮತ್ತು ಲೇಜಿ ಎಂದಿದೆ.
ಬೆಂಬಲಕ್ಕೆ ನಿಂತ ರಾಷ್ಟ್ರ ನಾಯಕರು
ಈ ವಿಡಂಬನಾತ್ಮಕ ಚಳವಳಿಗೆ ಕೇವಲ ಸಾಮಾನ್ಯ ಯುವಕರಲ್ಲದೆ ದೇಶದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಸಾಮಾಜಿಕ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್, ತೃಣಮೂಲ ಕಾಂಗ್ರೆಸ್ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಬಹಿರಂಗವಾಗಿಯೇ ನಾವು ಈ ಜಿರಳೆ ಪಾರ್ಟಿ ಸೇರಲು ಸಿದ್ಧ ಎಂದು ಹಾಸ್ಯದ ರೂಪದಲ್ಲಿ ಬೆಂಬಲ ಸೂಚಿಸಿದ್ದಾರೆ. ಅಖಿಲೇಶ್ ಯಾದವ್ ಕೂಡ ಈ ಆಂದೋಲನದ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಖಾತೆಗಳನ್ನು ಬ್ಲಾಕ್ ಮಾಡಿದಷ್ಟೂ ಇವರ ನೋಂದಣಿ ಸಂಖ್ಯೆ 6 ಲಕ್ಷ ದಾಟುತ್ತಾ ಸಾಗಿದೆ. ಇದು ಕೇವಲ ಒಂದು ಇಂಟರ್ನೆಟ್ ಜೋಕ್ ಆಗಿ ಉಳಿದಿಲ್ಲ, ಬದಲಿಗೆ ದೇಶದ ನಿರುದ್ಯೋಗ ಮತ್ತು ವ್ಯವಸ್ಥೆಯ ವಿರುದ್ಧದ ಅತಿ ದೊಡ್ಡ ಆನ್ಲೈನ್ ಅಸ್ತ್ರವಾಗಿ ಮಾರ್ಪಟ್ಟಿದೆ.