newsics.com/ನ್ಯೂಸಿಕ್ಸ್
ಕೊಡಗು ದುಬಾರಿ ಆನೆ ಶಿಬಿರದಲ್ಲಿ ಆನೆ ವೀಕ್ಷಣೆ ಮಾಡಲು ಬಂದಿದ್ದ ಮಹಿಳೆ ಭೀಕರವಾಗಿ ಸಾವಿಗೀಡಾಗಿದ್ದಾರೆ. ಅಲ್ಲದೇ ಆನೆಗಳ ಜಗಳದಲ್ಲಿ ಒಂದು ಆನೆ ಸಹ ಸಾವನ್ನಪ್ಪಿದ್ದು, ಸದ್ಯ ಕರ್ನಾಟಕ ಸರ್ಕಾರ ದುಬಾರಿ ಶಿಬಿರದಲ್ಲಿ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಗೈಡ್ಲೈನ್ಸ್ ಸಹ ಬಿಡುಗಡೆ ಮಾಡಿದೆ.
ಎರಡು ಆನೆಗಳಾದ ಕಂಜನ್ ಮತ್ತು ಮಾರ್ತಾಂಡ ಆನೆ ಬೆಳಗಿನಿಂದ ಚೆನ್ನಾಗಿಯೇ ಇದ್ದರು. ಆದರೆ, ಕಂಜನ್ ಆನೆ ಹಾಗೂ ಮಾರ್ತಾಂಡ ಆನೆಗಳೆರೆಡೂ ಅಕ್ಕಪಕ್ಕದಲ್ಲೇ ಇದ್ದವು. ಹೀಗಾಗಿ ಎರಡು ಆನೆಗಳಿಗೂ ನೀರು ಹಾಕ್ತಿದ್ದರು. ಈ ವೇಳೆ ಕಂಜನ್ ಆನೆಗೆ ಏಕಾಏಕಿ ಸಿಟ್ಟಿನಿಂದ ಒಮ್ಮೆಲೆ ಮಾರ್ತಾಂಡ ಆನೆ ಮೇಲೆ ಮುಗಿ ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ಚೆನ್ನೈ ಮೂಲದ ಜಿನ್ಶು (33) ಎಂಬ ಮಹಿಳೆ ಆನೆಗಳ ಕಾದಾಟಕ್ಕೆ ಬಲಿಯಾಗಿದ್ದಾರೆ. ಆನೆಗಳಿಗೆ ಸ್ನಾನ ಮಾಡಿಸುವಾಗ ಈ ದುರ್ಘಟನೆ ನಡೆದಿದೆ. ಇವರು ಆನೆಗಳನ್ನು ವೀಕ್ಷಣೆ ಮಾಡಲು ಚೆನ್ನೈನಿಂದ ಇಲ್ಲಿಗೆ ಬಂದಿದ್ದರು.
ಕೊಡಗಿನ ಪ್ರವಾಸಿ ತಾಣ ದುಬಾರಿ ಆನೆ ಶಿಬಿರದಲ್ಲಿ ಆನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆ ಸಿಲುಕಿ ಸಾವನ್ನಪ್ಪಿದ ಘಟನೆ ರಾಜ್ಯದ ಪ್ರವಾಸಿಗರಲ್ಲಿ ಆತಂಕ ಮನೆಮಾಡಿದೆ. ಈ ಆಘಾತಕಾರಿ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ, ಇನ್ಮುಂದೆ ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಗೈಡ್ಲೈನ್ಸ್ ಹೊರಡಿಸಿದೆ. ಈ ಮಾರ್ಗಸೂಚಿ ಕರ್ನಾಟಕದ ಎಲ್ಲಾ ಶಿಬಿರಗಳಿಗೂ ಅನ್ವಯವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶಿಸಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ದುಬಾರೆ, ಸಾಕಾನೆ ಶಿಬಿರದಲ್ಲಿ ಆನೆಗಳ ಮೈತೊಳೆಯುವಾಗ ಎರಡು ಆನೆಗಳ ನಡುವೆ ನಡೆದ ಕಾದಾಟದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದ ಆನೆಯ ಕೆಳಗೆ ಸಿಲುಕಿ ಚೆನ್ನೈನಿಂದ ಆಗಮಿಸಿದ್ದ ಪ್ರವಾಸಿಗರೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಪರಿಸರ ಪ್ರವಾಸೋದ್ಯಮದ ಚಾರಣಪಥಗಳಲ್ಲಿ, ಚಾರಣಿಗರ/ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸಲಾಗಿದ್ದು, ಈ SOP ಜಾರಿ ಖಚಿತಪಡಿಸಿಕೊಳ್ಳುವವರೆಗೆ ಚಾರಣಪಥಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಈಗಾಗಲೇ ಸೂಚಿಸಲಾಗಿದೆ.
ಸಾಕಾನೆಗಳಾದ ಕಂಜನ್ ಹಾಗೂ ಮಾರ್ತಾಂಡ ಆನೆಗಳ ನಡುವೆ ಈ ಕಾದಾಟ ಏರ್ಪಟ್ಟಿತ್ತು. ಮಾವುತರು ಎಷ್ಟೇ ಪ್ರಯತ್ನ ಪಟ್ಟರೂ ಸಹ ಅವುಗಳ ಕಾದಾಟ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಕಂಜನ್ ಆನೆ, ಮಾರ್ತಾಂಡ ಆನೆಗೆ ತೀವ್ರವಾಗಿ ಹಾನಿ ಉಂಟು ಮಾಡಿತ್ತು. ನಂತರ ಮಾರ್ತಾಂಡ ಕೆಳಗೆ ಬಿದ್ದಿದ್ದಾನೆ. ಅಲ್ಲದೇ ಈ ದುರಂತದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಈ ಕುರಿತು ಮಾತನಡಿರುವ ದುಬಾರಿ ಆನೆ ಶಿಬಿರದ ಸಿಬ್ಬಂದಿ, ಕಳೆದ 16 ವರ್ಷಗಳಲ್ಲಿ ಇಂತಹ ಘಟನೆ ದುಬಾರೆಯಲ್ಲಿ ನಡೆದಿಲ್ಲ. ಎರಡು ಆನೆಗಳು ಬಹಳ ಸೌಮ್ಯವಾಗಿದ್ದವು. ಆದರೆ ನಿನ್ನೆ ಏಕಾಏಕಿ ಏನಾಯ್ತು ಅನ್ನೋದು ತಿಳಿಯಲಿಲ್ಲ. ಮಾರ್ತಾಂಡ ಆನೆ ಸುಮಾರು ಸಮಯ ಕೆಳಗೆ ಬಿದ್ದ ಕಾರಣ ಭಾರೀ ಹೊಡೆತ ಬಿದ್ದಿದೆ. ಇಂಟ್ರನಲ್ ಬ್ಲೀಡಿಂಗ್ ಆಗಿರುವ ಸಾಧ್ಯತೆ ಇದೆ. ಚಿಕಿತ್ಸೆ ನೀಡುವ ಪ್ರಯತ್ನ ನಡೆದಿತ್ತು ಆದರೆ ಫಲಕಾರಿ ಆಗಿಲ್ಲ. ಸುಮಾರು 15 ನಿಮಿಷ ಮಾರ್ತಾಂಡ ಆನೆ ಅಟ್ಯಾಕ್ಗೆ ಒಳಗಾಗಿತ್ತು. ಇದರಿಂದ ಒಂದೇ ದಿನದಲ್ಲಿ ಆನೆ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.
ಇಲ್ಲಿರುವ ಎಲ್ಲಾ ಆನೆಗಳು ಸಹ ಪಳಗಿರುವ ಆನೆಗಳೇ ಆಗಿದ್ದು, ಈ ರೀತಿಯ ಘಟನೆ ಯಾಕೆ ಸಂಭವಿಸಿದೆ ಅನ್ನೋದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುತ್ತಿದೆ. ಅಲ್ಲದೆ ಅಲ್ಲಿನ ಅಧಿಕಾರಿಗಳು ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ದೂರುತ್ತಿದ್ದಾರೆ. ಆದರೆ ಆರಂಭದಲ್ಲಿ ಸೌಮ್ಯವಾಗಿದ್ದ ಕಂಜನ್ ಆನೆ ಮತ್ತು ಮಾರ್ಕಂಡ ಆನೆಗಳ ಬಳಿಕ ಏಕಾಏಕಿ ಸಿಟ್ಟಾಗಿ ಜಗಳವಾಡಲು ಆರಂಭಿಸಿದ್ದವು. ಹಾಗಿದ್ರೆ ಆನೆಗಳು ಏಕೆ ಇದ್ದಕ್ಕಿದ್ದ ಹಾಗೆ ಕಾದಾಟಕ್ಕಿಳಿಯುತ್ತವೆ ಎಂಬ ಬಗ್ಗೆ ತಜ್ಞರು ಅಭಿಪ್ರಾಯ ಏನಿದೆ ನೋಡೋಣ.
ಆನೆಗಳು ಕಾಡು ಜೀವಿಗಳು. ಅವುಗಳನ್ನು ಹಿಡಿದು ತಂದು ಸಾಕಿ, ತರಬೇತಿ ನೀಡಿದರೂ ಸಹ ಅವು ಕಾಡು ಪ್ರಾಣಿಗಳೇ ಆಗಿರುತ್ತದೆ. ಆದರೆ ನಾವು ಹೇಳಿದನ್ನೆಲ್ಲಾ ಅದು ಕೇಳಬೇಕು ಎಂದರೆ ಅದು ಕಷ್ಟ ಸಾಧ್ಯವಾಗಿದೆ. ಏಕೆಂದರೆ ಅದು ಕಾಡು ಪ್ರಾಣಿಗಳಾಗಿದ್ದು ಏನೇ ತರಬೇತಿ ನೀಡದರು ಸಹ ಅವರಲ್ಲಿನ ಸಿಟ್ಟು, ಹುಚ್ಚುತನ ಇದ್ದೇ ಇರುತ್ತದೆ. ಪ್ರಾಣಿಗಳಾದ ಕಾರಣ ಅವರ ಮನಸ್ಸು ಮನುಷ್ಯನಂತೆ ಎಲ್ಲಾ ಸಮಯದಲ್ಲಿ ಒಂದೇ ರೀತಿಯಲ್ಲಿ ಇರಲು ಅಥವಾ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಜೊತೆಗೆ ಆನೆಗಳಲ್ಲಿ ಸಹ ಹಾರ್ಮೋನುಗಳ ವ್ಯತ್ಯಾಸವಾದಗ ಸಹ ಈ ರೀತಿ ಆಗುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಮುಖ್ಯವಾಗಿ ಒಂದೇ ಜಾಗದಲ್ಲಿ ಹಲವಾರು ಜನರು ಸೇರಿ ಚಪ್ಪಾಳೆ ತಟ್ಟುವುದು, ಅವುಗಳನ್ನು ಮುಟ್ಟುವುದು ಮಾಡುವುದರಿಂದ ಆನೆಗಳಂತಹ ಸೂಕ್ಷ್ಮ ಪ್ರಾಣಿಗಳಿಗೆ ಕೆಲವೊಮ್ಮೆ ಕಿರಿಕಿರಿ ಆಗುತ್ತದೆ. ಇದರಿಂದಾಗಿ ಆಗ್ಗಾಗ್ಗೆ ಅವುಗಳು ಏಕಾಏಕಿ ಸಿಟ್ಟಾಗುವುದು, ಮಾವುತನ ನಿಯಂತ್ರಣಕ್ಕೂ ಸಿಗದಂತೆ ವರ್ತಿಸುವುದನ್ನು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.