newsics.com
ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ನಟ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ.
‘ಕಾಂತಾರ’ ಸಿನಿಮಾದಲ್ಲಿ ಕೊನೆಯ 20 ನಿಮಿಷದಲ್ಲಿ ರಿಷಬ್ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದರು. ಅಷ್ಟೇ ಅಲ್ಲದೆ ಅವರು ಈ ಚಿತ್ರಕ್ಕೆ ನಿರ್ದೇಶನ ಕೂಡ ಮಾಡಿದ್ದರು. ಈ ಸಿನಿಮಾಕ್ಕೆ ‘ಅತ್ಯುತ್ತಮ ಮನರಂಜನಾ ಚಿತ್ರ’ ಅವಾರ್ಡ್ ಕೂಡ ಸಿಕ್ಕಿದೆ.
ಈ ಸಿಹಿ ಸುದ್ದಿ ಘೋಷಣೆ ಬೆನ್ನಲ್ಲೇ ರಿಷಬ್ ಪ್ರೆಸ್ಮೀಟ್ ಕರೆದಿದ್ದರು. ಈ ವೇಳೆ ಅವರ ಪ್ರಾಮಾಣಿಕ ಮಾತು ಎಲ್ಲರಿಗೂ ಇಷ್ಟವಾಗಿದೆ. ‘ನಾನು ನಟನಾಗಿರಬಹುದು, ನಿರ್ದೇಶಕನಾಗಿರಬಹುದು. ಆದರೆ ಈ ಯಶಸ್ಸು ನನ್ನ ತಂಡಕ್ಕೆ ಸೇರುತ್ತದೆ. ಶಿವ ಪಾತ್ರ ಈ ರೇಂಜ್ಗೆ ಜನರಿಗೆ ತಲುಪತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಎಲ್ಲರಿಂದ ಒಂದು ಸಿನಿಮಾ ಆಗತ್ತೆ. ಮೊದಲು ನನಗೆ ಶುಭಾಶಯ ತಿಳಿಸಿದ್ದೇ ನನ್ನ ಹೆಂಡ್ತಿ. ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು, ಎಲ್ಲವೂ ಅವರಿಗೆ ಸಲ್ಲಬೇಕು’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.