newsics.com
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವನ ಪಾತ್ರದಲ್ಲಿ ಪುಷ್ಪರಾಜ್ ಬೋಳಾರ್ ಮಿಂಚಿದ್ದಾರೆ. ಅವರು ತುಳು ನಾಟಕ, ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲೂ ಅವರು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕನ್ನಡದ ‘ಕಾಂತಾರ’ ಸಿನಿಮಾ. ಇದೀಗ ನಟ ಪುಷ್ಪರಾಜ್ ಬೋಳಾರ್ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಗಂಡ ತೀರಿಕೊಂಡ ಮಹಿಮೆಯನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ್ದಾರೆ.
The Power House ಎನ್ನುವ ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪುಷ್ಪರಾಜ್ ಅವರು ಮದುವೆ ಜೀವನದ ಬಗ್ಗೆ ಮಾತನಾಡಿದ್ದಾರೆ.
ನನಗೆ ಮದುವೆ ಆಗಲು ಇಷ್ಟವೇ ಇರಲಿಲ್ಲ, ಮದುವೆ ಆಗಿಲ್ಲ ಎಂದರೆ ಬ್ರಹ್ಮರಾಕ್ಷಸ ಆಗ್ತೀಯಾ ಎಂದರು. ಸಂಬಂಧಿಕರಂತೂ ಯಾವಾಗ ಮದುವೆ ಎಂದು ಕೇಳುತ್ತಲೇ ಇದ್ದರು. ನಾನು ಮದುವೆ ಆಗ್ತೀನಿ, ಹುಡುಗಿ ಹುಡುಕು ಎಂದು ಹೇಳಿದೆನು, ಅನಾಥಾಶ್ರಮದಲ್ಲಿ ಹುಡುಗಿ ಇದ್ದರೆ ಹೇಳಿ ಎಂದೆನು ಎಂದು ಪುಷ್ಪರಾಜ್ ಹೇಳಿದ್ದಾರೆ.
ನಾವು ಜೀವನದಲ್ಲಿ ಯಾರಿಗೂ ಏನೂ ಸಹಾಯ ಮಾಡಿರೋದಿಲ್ಲ. ಯಾರಿಗೆ ಬದುಕು ಇರೋದಿಲ್ಲವೋ ಅವರಿಗೆ ಬದುಕು ಕೊಡೋಣ ಎಂಬುದು ಮನಸ್ಸಿನಲ್ಲಿತ್ತು. ಮೂರು ಅನಾಥಾಶ್ರಮ ಹುಡುಕಿದರೂ ಕೂಡ ಹುಡುಗಿ ಸಿಗಲಿಲ್ಲ ಎಂದು ಪುಷ್ಪರಾಜ್ ಹೇಳಿದ್ದಾರೆ.
ಗಂಡ ಸತ್ತು ಹೋಗಿರೋ ಹುಡುಗಿ ಇದ್ದಾಳಾ ಎಂದು ಕೇಳಿದೆ. ಆಗ ಅವರು ನೀನು ಕಲಾವಿದ, ಜನರು ಏನಾದರೂ ಹೇಳ್ತಾರೆ, ನಿನಗೆ ತಲೆ ಕೆಟ್ಟಿದ್ಯಾ ಎಂದು ಹೇಳಿದರು. ಗಂಡ ತೀರಿಕೊಂಡ ಮಹಿಳೆಗೆ ಜೀವನ ಕೊಡಬಾರದಾ ಎಂದು ಕೇಳಿದೆ ಎಂದು ಪುಷ್ಪರಾಜ್ ಹೇಳಿದ್ದಾರೆ.
ಒಂದು ಮಹಿಳೆಗೆ ನಾಲ್ಕು ವರ್ಷದ ಮಗ ಇದ್ದಾನೆ, ಅವಳಿಗೆ ಪಾಲಕರು ಇರಲಿಲ್ಲ. ನಾವೀಗ ಖುಷಿಯಿಂದ ಇದ್ದೇವೆ. ಸಮಾಜ ಏನು ಹೇಳುತ್ತೆ ಎಂದು ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಇದು ನನ್ನ ಜೀವನ. ಈಗ ಮಗ ಪಿಯುಸಿಯಲ್ಲಿ ಓದುತ್ತಿದ್ದಾನೆ, ಮಗಳು ಎಲ್ಕೆಜಿ ಓದುತ್ತಿದ್ದಾಳೆ ಎಂದು ಪುಷ್ಪರಾಜ್ ಹೇಳಿದ್ದಾರೆ.