newsics.com
ನವದೆಹಲಿ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಶೇಖ್ ಹಸೀನಾ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿನ ಗಲಭೆಕೋರರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿರುವ ಮಾಜಿ ಪ್ರಧಾನಿ, ಬಾಂಗ್ಲಾದೇಶದ ಸ್ಥಾಪಕ, ತನ್ನ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಅವರು ನ್ಯಾಯವನ್ನು ಕೋರಿದ್ದಾರೆ. ಶೇಖ್ ಹಸೀನಾ ಅವರ ಮೂರು ಪುಟಗಳ ಭಾವನಾತ್ಮಕ ಹೇಳಿಕೆಯನ್ನು ಅವರ ಪುತ್ರ ಸಜೀಬ್ ವಾಝೆದ್ ಪೇಜ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆಗಸ್ಟ್ 15 ರಂದು ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲು ಬಾಂಗ್ಲಾದೇಶೀಯರಿಗೆ ಹಸೀನಾ ಕರೆ ನೀಡಿದ್ದಾರೆ. ಆದರೆ ಬಾಂಗ್ಲಾದ ಮಧ್ಯಂತರ ಸರ್ಕಾರವು ಈಗಾಗಲೇ ಆ.15ರಂದು ಸಾರ್ವಜನಿಕ ರಜಾದಿನವನ್ನು ರದ್ದುಗೊಳಿಸಿದೆ. ಪತ್ರದಲ್ಲಿ ಶೇಖ್ ಹಸೀನಾ ತನ್ನ ತಂದೆಯನ್ನು 1975ರ ಆಗಸ್ಟ್ 15ರಂದು ಹತ್ಯೆ ಮಾಡಿದಾಗ ಕಳೆದುಕೊಂಡ ಕುಟುಂಬ ಸದಸ್ಯರ ಬಗ್ಗೆ ನೆನಪಿಸಿಕೊಂಡಿದ್ದಾರೆ. ಮುಜಿಬುರ್ ರೆಹಮಾನ್ ಅವರ ಪುತ್ರರು ಮತ್ತು ಅವರ ಪತ್ನಿಯರು, ಅವರ ಸಹೋದರನ ಕುಟುಂಬ, ನಿಕಟ ಸಹೋದ್ಯೋಗಿಗಳು ಮತ್ತು ಸಹಚರರು ದಂಗೆಯ ಭಾಗವಾಗಿ ಅದೇ ರಾತ್ರಿ ಸೈನ್ಯದಿಂದ ನಾಶವಾದರು.

ಇನ್ನು ಬಾಂಗ್ಲಾದಲ್ಲಿ ನಡೆದ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ ಹಸೀನಾ, ಪ್ರತಿಭಟನೆಯ ಹೆಸರಿನಲ್ಲಿ ದೇಶಾದ್ಯಂತ ವಿನಾಶದ ನೃತ್ಯ ನಡೆಯುತ್ತಿದೆ, ಅದು ಅನೇಕ ಸಾವುಗಳಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು, ಪೊಲೀಸರು, ಪತ್ರಕರ್ತರು, ಸಮಾಜ ಸೇವಕರು, ಸಾಮಾನ್ಯ ಜನರು, ಅವಾಮಿ ಲೀಗ್ನ ನಾಯಕರು ಮತ್ತು ಕೆಲಸಗಾರರು, ಪಾದಚಾರಿಗಳು ಮತ್ತು ಕಚೇರಿ ಕೆಲಸಗಾರರು ಬಲಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.