https://www.newsics.com/2026/03/19/happy-ugadi-may-the-year-of-ugadi-be-prosperous/
newsics.com
ಯುಗಾದಿ ಹಿಂದೂಗಳ ಹೊಸ ವರ್ಷದ ಆರಂಭವನ್ನು ಸೂಚಿಸುವ ಪ್ರಮುಖ ಹಬ್ಬವಾಗಿದ್ದು, 2026ರಲ್ಲಿ ಮಾರ್ಚ್ 19ರಂದು ಆಚರಿಸಲಾಗುತ್ತದೆ. ಈ ದಿನವನ್ನು ಸಂಪ್ರದಾಯಬದ್ಧವಾಗಿ ಎಣ್ಣೆ ಸ್ನಾನ, ಪೂಜೆ, ಬೇವು-ಬೆಲ್ಲ ಸೇವನೆ ಮತ್ತು ಪಚಡಿ ತಯಾರಿಸುವ ಮೂಲಕ ನೆರವೇರಿಸಲಾಗುತ್ತದೆ. ಇದು ವಸಂತ ಋತುವಿನ ಆರಂಭ, ಹೊಸ ಭರವಸೆಗಳು ಮತ್ತು ಹೊಸ ಜೀವನದ ಸಂಕೇತ.
19ರಿಂದ ಮುಂದಿನ ವರ್ಷದ ಯುಗಾದಿಯವರೆಗೂ ಪರಾಭವ ಸಂವತ್ಸರ ಎಂದು ಹೆಸರು. ಪರಾಭವ ಎನ್ನುವುದು ಸೋಲಿನ ಅರ್ಥ. ಹಾಗಿದ್ದರೆ ಈ ವರ್ಷ ಎಲ್ಲರಿಗೂ ಸೋಲಾ? ಏಕೆ ಪರಾಭವ ಎನ್ನುವ ಹೆಸರು ಇದೆ? ಏನಿದು ಸಂವತ್ಸರ ಎಂದೆಲ್ಲಾ ಕೆಲವರಿಗೆ ಸಂದೇಹ ಕಾಡುವುದು ಇದೆ. ಅದರ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ.
ಅಷ್ಟಕ್ಕೂ ಪರಾಭವ ಎಂದರೆ ಸೋಲು ಎನ್ನುವುದು ನಿಜವೇ. ಆದರೆ ಯಾವುದರ ವಿರುದ್ಧ ಸೋಲು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಅಂದಹಾಗೆ ಹಿಂದೂ ಶಾಸ್ತ್ರದ ಪ್ರಕಾರ ಒಟ್ಟೂ 60 ಸಂವತ್ಸರಗಳಿವೆ. ಪರಾಭವ ಸಂವತ್ಸರ ಅದರಲ್ಲಿ 40ನೆಯದ್ದು. 60 ವರ್ಷಗಳ ಬಳಿಕ ಮತ್ತೆ ಆರಂಭದ ಸಂವತ್ಸರದಿಂದ ಶುರುವಾಗುತ್ತದೆ. ಹೀಗೆ 60 ವರ್ಷಗಳ ಚಕ್ರ ಇದಾಗಿದ್ದು, ಇದರಲ್ಲಿ 40ನೇಯದ್ದೇ ಪರಾಭವ ಸಂವತ್ಸರ. ನಮ್ಮ ಹಿರಿಯರು ಶಾಸ್ತ್ರ, ಪುರಾಣ ಮಾಡುವಾಗ ಸುಖಾಸುಮ್ಮನೇ ಏನನ್ನೋ ಮಾಡಿಲ್ಲ. ಪ್ರತಿಯೊಂದರಲ್ಲಿಯೂ ಅದರದ್ದೇ ಆದ ಅರ್ಥವಿದೆ. ಅದೇ ರೀತಿ ಪರಾಭವಕ್ಕೂ ಒಂದು ಅರ್ಥವಿದೆ. ಇಲ್ಲಿ ನಮ್ಮಲ್ಲಿರುವ ಅಹಂಕಾರ, ದುರ್ವ್ಯಸನ ಮತ್ತು ಕೆಟ್ಟ ಆಲೋಚನೆಗಳನ್ನು ನಾಶ ಮಾಡಿ ಅರ್ಥಾತ್ ಅದನ್ನು ಪರಾಭವಗೊಳಿಸಿ ಆತ್ಮಶುದ್ಧಿ ಮಾಡುವುದು ಎಂದು ಇದರ ಅರ್ಥ.
ಇದು ಕೇವಲ ಲೌಕಿಕ ಸೋಲಲ್ಲ, ಬದಲಿಗೆ ಕೆಟ್ಟದ್ದರ ಮೇಲೆ ಒಳ್ಳೆಯದಿನ ವಿಜಯ ಸಾಧಿಸುವ ಸಂಕೇತ ಎಂದು ಹೇಳಲಾಗಿದೆ. ಜ್ಯೋತಿಷ ಶಾಸ್ತ್ರದ ಪ್ರಕಾರ, ಗುರುವು ಈ ಸಂವತ್ಸರದ ಅಧಿಪತಿ ಗುರು. ಜ್ಞಾನ, ಶಿಕ್ಷಣ ಮತ್ತು ನೈತಿಕ ನಾಯಕತ್ವದ ಪ್ರಾಮುಖ್ಯತೆಗೆ ಈ ವರ್ಷ ಹೆಚ್ಚಿನ ಒತ್ತು ನೀಡುತ್ತದೆ.
ಹಾಗೆಯೇ ಕಪಟ ಗುರುಗಳನ್ನು ಪರೀಕ್ಷೆಗೆ ಒಡ್ಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ವರ್ಷದ ಪ್ರಮುಖ ಬದಲಾವಣೆಗಳಲ್ಲಿ ಜೂನ್ 2 ರಂದು ಗುರುವು ಕರ್ಕಾಟಕ ರಾಶಿಯನ್ನು ಪ್ರವೇಶಿಸುವುದು ಮತ್ತು ನಂತರ ಸಿಂಹ ರಾಶಿಗೆ ಚಲಿಸುವುದು ಸೇರಿದೆ. ಇದರೊಂದಿಗೆ ಡಿಸೆಂಬರ್ 6 ರಂದು ರಾಹು-ಕೇತುಗಳು ಮಕರ-ಕರ್ಕಾಟಕ ರಾಶಿಗಳಿಗೆ ಸ್ಥಳಾಂತರಗೊಳ್ಳಲಿದ್ದು, ಇವು ಜಾಗತಿಕ ವಿದ್ಯಮಾನಗಳನ್ನು ಗಣನೀಯವಾಗಿ ಬದಲಾಯಿಸಲಿವೆ.