newsics.com
ಗುರುವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ನ ಸೆಮಿಫೈನಲ್ ನಲ್ಲಿ ಭಾರತ ವಿರುದ್ಧದ ಸೋಲಿನಲ್ಲಿ ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಕೈಬಿಟ್ಟಿದ್ದು ಸೇರಿದಂತೆ ದುಬಾರಿ ಫೀಲ್ಡಿಂಗ್ ವೈಫಲ್ಯಗಳು ನಿರ್ಣಾಯಕ ಪಾತ್ರ ವಹಿಸಿತು ಎಂದು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಬ್ರೂಕ್, ತಂಡ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥಮಾಡಿಕೊಂಡಿತು ಮತ್ತು ವಿಶೇಷವಾಗಿ ಮೈದಾನದಲ್ಲಿ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಫಲವಾಯಿತು ಎಂದು ಒಪ್ಪಿಕೊಂಡರು, ಇದರಿಂದಾಗಿ ಭಾರತವು ಬೃಹತ್ ಮೊತ್ತವನ್ನು ದಾಖಲಿಸಲು ಸಾಧ್ಯವಾಯಿತು ಎಂದರು.
“ಕ್ಯಾಚ್ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ ಎನ್ನುವ ಮಾತು ಇಲ್ಲಿ ನಿಜವಾಗಿದೆ. ದುರದೃಷ್ಟವಶಾತ್, ಚೆಂಡು ನನ್ನ ಕೈಯಲ್ಲಿ ಉಳಿಯಲಿಲ್ಲ. ನಾನು ಸಂಜು ಸ್ಯಾಮ್ಸನ್ ಕ್ಯಾಚ್ ಕೈಚೆಲ್ಲಿ ದೊಡ್ಡ ತಪ್ಪು ಮಾಡಿದೆ. ಅದುವರೆಗೂ ನಮ್ಮ ಹಿಡಿತದಲ್ಲಿದ್ದ ಪಂದ್ಯ ಆ ಬಳಿಕ ಕೈ ಜಾರಿತು” ಎಂದು ಬ್ರೂಕ್ ಹೇಳಿದರು. ಕೇವಲ 15 ರನ್ಗಳಲ್ಲಿದ್ದಾಗ ಬ್ರೂಕ್ ಸ್ಯಾಮ್ಸನ್ ಅವರ ಕ್ಯಾಚ್ ಬಿಟ್ಟರು. ಸಿಕ್ಕ ಅವಕಾಶದಲ್ಲಿ ಸ್ಯಾಮ್ಸನ್ 42 ಎಸೆತಗಳಲ್ಲಿ 89 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 253 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 246 ರನ್ ಗಳಿಸಿತು. ಹಾಲಿ ಚಾಂಪಿಯನ್ ಭಾರತವು ಇದೇ 8ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಭಾರತ ಪರ ಸಂಜು ಸ್ಯಾಮ್ಸನ್ (89) ಅಮೋಘ ಬ್ಯಾಟಿಂಗ್, ಅಕ್ಷರ್ ಪಟೇಲ್ ಅಮೋಘ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ಇನ್ನೊಂದೆಡೆ ದಿಟ್ಟ ಹೋರಾಟ ಮಾಡಿದ ಇಂಗ್ಲೆಂಡ್ ತಂಡದ ಯುವ ಬ್ಯಾಟರ್ ಜೇಕಬ್ ಬೆಥೆಲ್ (105) ಶತಕ ಬಹುಕಾಲ ನೆನಪಿನಲ್ಲಿ ಉಳಿಯಲಿದೆ.
17ನೇ ಓವರ್ವರೆಗೂ ಇಂಗ್ಲೆಂಡ್ ಪಂದ್ಯವನ್ನು ತನ್ನ ನಿಯಂತ್ರಣದಲ್ಲಿ ಇರಿಸಿತ್ತು. ಭಾರತಕ್ಕಿಂತಲೂ ವೇಗವಾಗಿ ರನ್ ಕಲೆಹಾಕುತ್ತಾ ಸಾಗಿದ ತಂಡ, ಗೆಲ್ಲುವ ಎಲ್ಲಾ ಸಾಧ್ಯತೆಯಿತ್ತು. ಬಟ್ಲರ್(25), ವಿಲ್ ಜ್ಯಾಕ್ಸ್(35) ಔಟಾದರೂ ಜೇಕಬ್ ಬೆಥೆಲ್ ಕ್ರೀಸ್ನಲ್ಲಿ ಇರುವವರೆಗೂ ತಂಡ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಕೊನೆ 3 ಓವರಲ್ಲಿ ತಂಡಕ್ಕೆ 34 ರನ್ ಬೇಕಿತ್ತು. 18ನೇ ಓವರ್ನಲ್ಲಿ ಬೂಮ್ರಾ 6, 19ನೇ ಓವರ್ನಲ್ಲಿ ಹಾರ್ದಿಕ್ 9 ರನ್ ನೀಡಿ ಇಂಗ್ಲೆಂಡ್ ಗೆಲವು ಕಸಿದರು. ಒಂದೊಮ್ಮೆ ಉಭಯ ಆಟಗಾರರ ಓವರ್ನಲ್ಲಿ 10 ಪ್ಲಸ್ ಮೊತ್ತ ದಾಖಲಾಗಿದ್ದರೆ ಭಾರತ ಸೋಲು ಕಾಣುತ್ತಿತ್ತು.