Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪಾಟ್ನಾ: 1962ರ ಭಾರತ – ಚೀನಾ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಬರೋಬ್ಬರಿ 600 ಕೆಜಿ ಚಿನ್ನವನ್ನು ದಾನವಾಗಿ ನೀಡಿದ್ದ, ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ‘ಕಾಮಸುಂದರಿ ದೇವಿ’ (93) ಅವರು ನಿಧನರಾದರು.
ಈ ಮೂಲಕ ಅಪ್ರತಿಮ ದೇಶಭಕ್ತಿಗೆ ಹೆಸರಾಗಿದ್ದ ದರ್ಭಾಂಗ ರಾಜಮನೆತನದ ಕೊಂಡಿಯೊಂದು ಕಳಚಿದೆ.
ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಿಹಾರದ ದರ್ಭಾಂಗದಲ್ಲಿರುವ ತಮ್ಮ ಐತಿಹಾಸಿಕ ನಿವಾಸವಾದ ‘ಕಲ್ಯಾಣಿ ನಿವಾಸ’ದಲ್ಲಿ ಸೋಮವಾರ (ಜ.12) ಕೊನೆಯುಸಿರೆಳೆದರು. ಅವರ ನಿಧನದೊಂದಿಗೆ ಮಿಥಿಲಾಂಚಲ ಭಾಗದ ಗೌರವಾನ್ವಿತ ರಾಜಮನೆತನದ ಯುಗ ಅಂತ್ಯಗೊಂಡಂತಾಗಿದೆ.
ಮಹಾರಾಜ ಕಾಮೇಶ್ವರ್ ಸಿಂಗ್ ಅವರ ಮೂರನೇ ಪತ್ನಿಯಾಗಿದ್ದ ಮಹಾರಾಣಿ ಕಾಮಸುಂದರಿ ದೇವಿ ಅವರು 1932ರ ಅಕ್ಟೋಬರ್ 22 ರಂದು ಜನಿಸಿದರು. ಕೇವಲ 8ನೇ ವಯಸ್ಸಿನಲ್ಲಿ ವಿವಾಹವಾಗಿದ್ದ ಅವರು, 1962ರಲ್ಲಿ ಪತಿ ಮಹಾರಾಜ ಕಾಮೇಶ್ವರ್ ಸಿಂಗ್ ನಿಧನರಾದ ನಂತರ ಸುಮಾರು 64 ವರ್ಷ ಕಾಲ ಒಂಟಿಯಾಗಿಯೇ (ವಿಧವೆಯಾಗಿ) ಜೀವನ ನಡೆಸಿದರು. ಮಹಾರಾಜರಿಗೆ ಮೂವರು ಪತ್ನಿಯರಿದ್ದರೂ ಮಕ್ಕಳಿರಲಿಲ್ಲ.
ಸವಲತ್ತುಗಳಿಗಿಂತ ಕರ್ತವ್ಯಕ್ಕೆ ಹೆಚ್ಚು ಒತ್ತು ನೀಡಿದ್ದ ಮಹಾರಾಣಿ, ತಮ್ಮ ಸರಳತೆ ಮತ್ತು ಸೇವಾ ಮನೋಭಾವದಿಂದ ಜನಮಾನಸದಲ್ಲಿ ನೆಲೆಸಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ದರ್ಭಾಂಗ ಮತ್ತು ಮಿಥಿಲಾಂಚಲ ಭಾಗದಲ್ಲಿ ಶೋಕ ಮಡುಗಟ್ಟಿತ್ತು.
ಸಂಪ್ರದಾಯದಂತೆ ದರ್ಭಾಂಗ ರಾಜ್ನ ಖಾಸಗಿ ಸ್ಮಶಾನವಾದ ಮಧಮೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾರಾಣಿಯವರ ಅಂತ್ಯಕ್ರಿಯೆ ನೆರವೇರಿತು. ಅವರಿಗೆ ಸಂಬಂಧದಲ್ಲಿ ಮರಿಮೊಮ್ಮಗನಾದ ರತ್ನೇಶ್ವರ ಸಿಂಗ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ದರ್ಭಾಂಗ ರಾಜಮನೆತನವು ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಅದಕ್ಕೆ ಪ್ರಮುಖ ಕಾರಣ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಅವರು ತೋರಿದ ದೇಶಪ್ರೇಮ. ಅಂದು ಭಾರತ ಸರ್ಕಾರ ಯುದ್ಧದ ವೆಚ್ಚಕ್ಕಾಗಿ ನೆರವು ನೀಡುವಂತೆ ಮನವಿ ಮಾಡಿದಾಗ, ಅದಕ್ಕೆ ಮೊದಲು ಸ್ಪಂದಿಸಿದ್ದು ಇದೇ ರಾಜಮನೆತನ.
ದರ್ಭಾಂಗದ ಇಂದ್ರಭವನ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ, ಮಹಾರಾಣಿಯ ಕುಟುಂಬವು ದೇಶದ ರಕ್ಷಣಾ ನಿಧಿಗೆ ಸುಮಾರು 15 ಮಣ (ಅಂದಾಜು 600 ಕೆಜಿ) ಚಿನ್ನವನ್ನು ದಾನವಾಗಿ ನೀಡಿತ್ತು. ಇದು ಸ್ವತಂತ್ರ ಭಾರತಕ್ಕೆ ರಾಜಮನೆತನವೊಂದು ನೀಡಿದ ಅತಿದೊಡ್ಡ ಕೊಡುಗೆಗಳಲ್ಲಿ ಒಂದು. ಇತಿಹಾಸದಲ್ಲಿ ಇದು ಅಚ್ಚಳಿಯದ ದಾಖಲೆಯಾಗಿ ಇಂದಿಗೂ ಉಳಿದಿದೆ.
ಅಷ್ಟೇ ಅಲ್ಲ, ತಮ್ಮಲ್ಲಿದ್ದ ಮೂರು ಖಾಸಗಿ ವಿಮಾನಗಳನ್ನು ಮತ್ತು 90 ಎಕರೆ ವಿಸ್ತೀರ್ಣದ ಏರ್ಸ್ಟ್ರಿಪ್ (ವಿಮಾನ ನಿಲ್ದಾಣದ ಜಾಗ) ನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಅಂದು ಅವರು ನೀಡಿದ ಆ ಜಾಗವೇ ಇಂದು ‘ದರ್ಭಾಂಗ ವಿಮಾನ ನಿಲ್ದಾಣ’ವಾಗಿ ಅಭಿವೃದ್ಧಿಗೊಂಡಿದೆ ಎಂಬುದು ಗಮನಾರ್ಹ.
ಕೇವಲ ಯುದ್ಧದ ಸಮಯದಲ್ಲಷ್ಟೇ ಅಲ್ಲ, ಶಿಕ್ಷಣ ಮತ್ತು ಅಭಿವೃದ್ಧಿಯ ವಿಷಯದಲ್ಲೂ ಈ ರಾಜಮನೆತನ ಸದಾ ಮುಂದಿತ್ತು. ಪ್ರಸಿದ್ಧ ‘ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯ’ವು ರಾಜಮನೆತನದ ಆವರಣದಲ್ಲೇ ಕಾರ್ಯನಿರ್ವಹಿಸುತ್ತಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು), ಕಲ್ಕತ್ತಾ ವಿವಿ, ಅಲಿಘರ್ ಮುಸ್ಲಿಂ ವಿವಿ ಮತ್ತು ಪಾಟ್ನಾ ವಿಶ್ವವಿದ್ಯಾಲಯಗಳಿಗೆ ಈ ಕುಟುಂಬ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಿದೆ. ದರ್ಭಾಂಗ ಮೆಡಿಕಲ್ ಕಾಲೇಜು ಕೂಡ ಇವರ ಕೊಡುಗೆಯಾಗಿದೆ.
ಸಕ್ರಿ, ಲೋಹತ್, ರೈಯಮ್ ಮತ್ತು ಹಸನ್ಪುರದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲು ಈ ಮನೆತನ ಬೆಂಬಲ ನೀಡಿತ್ತು. ಪಾಂಡೌಲ್ನಲ್ಲಿ ಸ್ಪಿನ್ನಿಂಗ್ ಮಿಲ್, ಹಯಾಘಾಟ್ನಲ್ಲಿ ಅಶೋಕ್ ಪೇಪರ್ ಮಿಲ್ ಮತ್ತು ಸಮಸ್ಟಿಪುರದಲ್ಲಿ ರಾಮೇಶ್ವರ್ ಸೆಣಬಿನ ಕಾರ್ಖಾನೆ ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಭಾರತದಲ್ಲಿ ವಿಮಾನಯಾನ ಸೇವೆಗಳ ಆರಂಭಕ್ಕೂ ದರ್ಭಾಂಗ ಎಸ್ಟೇಟ್ ನಿಕಟ ಸಂಬಂಧ ಹೊಂದಿತ್ತು.
ಕಾರಿನ ಸೈಲೆನ್ಸರ್ ಮಾರ್ಪಾಡು ಮಾಡಿದ್ದ ವಿದ್ಯಾರ್ಥಿಗೆ 1.11ಲಕ್ಷ ದಂಡ! ಕಾರಿನ ಬೆಲೆ 70 ಸಾವಿರ ರೂ.!