Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವಿದೇಶದಿಂದ ರಹಸ್ಯವಾಗಿ ಆಗಮಿಸಿ ಸ್ನೇಹಿತನ ಜೊತೆ ಸೇರಿ ತಾಯಿಯನ್ನೇ ಮಗ ಕೊಂದಿರುವ ಘಟನೆ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.
ಡಿಸೆಂಬರ್ 24ರಂದು ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಕೊಲೆ ಮಾಡಿದ್ದು, ಮಹಿಳೆಯ ಸ್ವಂತ ಮಗನೇ. ಹೌದು, ಡಿಸೆಂಬರ್ 18 ರಂದು ತನ್ನ ಕುಟುಂಬದವರಿಗೂ ಮಾಹಿತಿ ನೀಡದೇ ಬಲ್ಜಿಂದರ್ ಕೌರ್ ಮಗ ಗೋಮಿತ್ ರಥಿ ಇಂಗ್ಲೆಂಡ್ನಿಂದ ಭಾರತಕ್ಕೆ ರಹಸ್ಯವಾಗಿ ಮರಳಿದ್ದ. ಆತನ ಬರುವಿಕೆಯ ಬಗ್ಗೆ ಆತನ ಸ್ನೇಹಿತನಿಗೆ ಮಾತ್ರ ತಿಳಿದಿತ್ತು. ಆತನ ಸ್ನೇಹಿತ ಪಂಕಜ್ ಕೂಡ ಇದನ್ನು ಗ್ರಾಮಸ್ಥರು ಹಾಗೂ ಸಂಬಂಧಿಕರಿಂದ ಮರೆ ಮಾಚಿದ್ದರು. ಪೊಲೀಸರ ತನಿಖೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿ ರಾಕೇಶ್ ಕುಮಾರ್ ಅವರ ಪ್ರಕಾರ, ಗೋಮಿತ್ ರಥಿ ತನ್ನ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಮಗನ ವರ್ತನೆಯ ಬಗ್ಗೆ ಆಕೆ ಆಗಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಳು. ಈ ಮಧ್ಯೆ ಗೋಮಿತ್ ಬೇರೆ ಜಾತಿಯ ಮಹಿಳೆಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ತಿಳಿದ ನಂತರ ತಾಯಿ ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದಳು ಇದು ಇಬ್ಬರ ನಡುವಣ ಸಂಬಂಧ ಹದಗೆಡುವುದಕ್ಕೆ ಇನ್ನಷ್ಟು ಕಾರಣವಾಗಿತ್ತು.
ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ಕುಟುಂಬ ಸದಸ್ಯರು, ನಂತರ ಗೋಮಿತ್ನನ್ನು ಸ್ಟಡಿ ವೀಸಾದಲ್ಲಿ ಇಂಗ್ಲೆಂಡ್ಗೆ ಕಳುಹಿಸಿದರು. ವಿದೇಶದಲ್ಲಿದ್ದ ಗೋಮಿತ್ ರಥಿ ಅಲ್ಲಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಓದುತ್ತಿದ್ದ. ಆದರೆ ತಾಯಿ ಮೇಲಿನ ದ್ವೇಷ ಮಾತ್ರ ಹೆಚ್ಚಾಗ್ತಲೇ ಇತ್ತು.
ಹೀಗಾಗಿ ಡಿಸೆಂಬರ್ 24 ರಂದು ಯಾರಿಗೂ ಹೇಳದೇ ಭಾರತಕ್ಕೆ ಬಂದ ಗೋಮಿತ್ ತನ್ನ ಗ್ರಾಮಕ್ಕೆ ಹಿಂತಿರುಗಿ ದನದ ಕೊಟ್ಟಿಗೆಯಲ್ಲಿ ಅಡಗಿ ಕುಳಿತು ತಾಯಿ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದಾನೆ. ಈ ಸಾವನ್ನು ಆಕಸ್ಮಿಕ ಎಂದು ಬಿಂಬಿಸಲು ಶವವನ್ನು ನೀರಿನ ಟ್ಯಾಂಕಿಗೆ ಎಸೆದಿದ್ದಾನೆ. ಇತ್ತ ಗೋಮಿತ್ನ ಸ್ನೇಹಿತ ಪಂಕಜ್, ಗೋಮಿತ್ ಭಾರತಕ್ಕೆ ಮರಳಿರುವುದನ್ನು ಮರೆಮಾಚಿದ್ದಲ್ಲದೆ, ಕೊಲೆಯ ಮೊದಲು ಮತ್ತು ನಂತರ ಅವನಿಗೆ ಸಹಾಯ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.