newsics.com
ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ ಕೀರ್ತಿ ಭೈರಪ್ಪ ಅವರದ್ದಾಗಿದೆ. ಇನ್ನು ವಯೋಸಹಜ ಕಾಯಿಲೆಯಿಂದ ಬಳಲುತಿದ್ದ ಅವರು ಇಂದು ನಾಡಿನ ಅಪಾರ ಸಾಹಿತ್ಯ ಪ್ರೇಮಿಗಳ ಕಣ್ಣಂಚಲ್ಲಿ ನೀರೂರುವಂತೆ ಮಾಡಿದ್ದಾರೆ.
ಮೂಲತಃ ಮೈಸೂರಿನಲ್ಲಿ ಇದ್ದ ಭೈರಪ್ಪ, ಹೇಳಿಕೊಳ್ಳಲಾರದ ಕಾರಣಕ್ಕೆ ಕಳೆದ ಮೂರು ತಿಂಗಳಿಂದ ಬೆಂಗಳೂರಲ್ಲಿ ವಾಸ ಮಾಡುತ್ತಿದ್ದರು. 94 ವರ್ಷದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಕೇವಲ ಸಾಹಿತ್ಯಕ್ಕೆ ಮಾತ್ರ ಕೊಡುಗೆ ನೀಡಲಿಲ್ಲ. ಬದಲಾಗಿ ನಾಡಿನಲ್ಲಿ ಆಗುತ್ತಿದ್ದ ರಾಜಕೀಯ, ಸಾಮಾಜಿಕ ವಿಷಯಗಳಲ್ಲೂ ಸಹ ಭಾಗಿ ಆಗುತ್ತಿದ್ದರು. ಅವರ ಅಗಲಿಕೆ ನಾಡಿನ ಸಾಕಷ್ಟು ಜನರಿಗೆ ನೋವುಂಟುಮಾಡಿದೆ.
ಎಸ್ ಎಲ್ ಬೈರಪ್ಪ ಅವರ ಪೂರ್ಣ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂದು. ಇವರು ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಅಪಾರ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅಲ್ಲದೆ ಕೆಲವು ಪತ್ರಿಕೆಗಳಲ್ಲಿ ಪ್ರಕಟ ಆಗುತ್ತಿದ್ದ ಇವರ ಲೇಖನಗಳು ನಾಡಿನ ಜನರ ಅಂತಃಕರಣವನ್ನು ಮುಟ್ಟಿವೆ. ಇವರ ಈ ಎಲ್ಲಾ ಸಾಧನೆಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ 26-07-1934 ರಂದು ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದ ಅವರು ಭಾರೀ ಬಡತನದ ನಡುವೆ ಅವರ ತಾಯಿಯಿಂದ ಸಾಕಷ್ಟು ವಿಷಯಗಳನ್ನು ಕಲಿತರು. ತಂದೆ ಬೇಜವಾಬ್ದಾರಿ ಆಗಿದ್ದು, ಎಲ್ಲವನ್ನೂ ತಾಯಿಯೇ ನೋಡಿಕೊಳ್ಳುತ್ತಿದ್ದರು.
ಅವರ ಐದನೇ ವಯಸ್ಸಿನಲ್ಲಿ ಅವರ ತಾಯಿ ಸಹ ಪ್ಲೇಗ್ ಗೆ ಬಲಿಯಾದರು. ಇದಾದ ನಂತರ ಬೈರಪ್ಪ ಅವರಿಗೆ ಜೀವನದ ದಿಕ್ಕೇ ಕಾಣದಂತೆ ಆಯ್ತು. ಇದಾದ ನಂತರ ತಮ್ಮ ಜೀವನವನ್ನು ತಾವೇ ಕಟ್ಟಿಕೊಳ್ಳಲು ಮುಂದಾದರು. ಗಾಂಧೀಜಿಯವರಿಂದ ಪ್ರಭಾವಿತರಾದ ಇವರು ಸ್ವಾತಂತ್ರ್ಯ ಚಳುವಳಿಯಲ್ಲೂ ಸಹ ಭಾಗಿಯಾಗಿದ್ದರು.
ಕಷ್ಟಪಟ್ಟು ಉನ್ನತ ವ್ಯಾಸಂಗ ಮಾಡಿದ ಅವರು ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡರು. ಇದಾದ ನಂತರ ಅವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದರು.
1961 ರಲ್ಲಿ ಧರ್ಮಶ್ರೀ ಎಂಬ ಕಾದಂಬರಿ ಪ್ರಕಟಿಸಿದರು. ಇದಾದ ನಂತರ ಒಟ್ಟು ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ.
ಈ ನಡುವೆ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಪಡೆದಿವೆ. ಇದರೊಂದಿಗೆ ವಂಶವೃಕ್ಷಕ್ಕೆ 1966 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975 ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಬರಹದಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದ ಭೈರಪ್ಪನವರು ಎಳೆ ವಯಸ್ಸಿನಲ್ಲೇ ಸಾಕಷ್ಟು ಸವಾಲುಗಳನ್ನು ಎದುರಿಸುವಂತಾಯ್ತು. ಕೊನೆಗಾಲದಲ್ಲೂ ಹೇಳಿಕೊಳ್ಳಲಾರದ ನೋವು ಅವರನ್ನು ಕಾಡುತ್ತಿತ್ತು. ಹೇಳಿಕೊಳ್ಳಲಾರದ ಕೆಲ ಕಾರಣಗಳಿಂದ ಅವರು ಬಹುಕಾಲ ಬದುಕಿದ್ದ ಮೈಸೂರಿನ ಮನೆ ಕಳೆದ ಕೆಲ ಕಾಲದಿಂದ ಬೀಗಮುದ್ರೆ ಕಂಡಿತ್ತು. ಹೇಳಿಕೊಳ್ಳಲಾರದ ಕಾರಣಗಳಿಂದ ಭೈರಪ್ಪ ಅವರು ಬಹುವಾಗಿ ಪ್ರೀತಿಸುತ್ತಿದ್ದ ಮೈಸೂರನ್ನೂ, ಅಲ್ಲಿನ ತಮ್ಮ ಮನೆಯನ್ನೂ ತೊರೆದು ಬೆಂಗಳೂರಿನಲ್ಲಿ ಪತ್ರಕರ್ತರೊಬ್ಬರ ಜತೆಗಿದ್ದರು.
ಕಾದಂಬರಿಗಳು
- ಭೀಮಕಾಯ
- ಬೆಳಕು ಮೂಡಿತು
- ಧರ್ಮಶ್ರೀ
- ದೂರ ಸರಿದರು
- ನಿರಾಕರಣ
- ಗ್ರಹಣ
- ದಾಟು
- ಅನ್ವೇಷಣ
- ಪರ್ವ
- ನೆಲೆ
- ಸಾಕ್ಷಿ
- ಅಂಚು
- ತಂತು
- ಸಾರ್ಥ
- ಮಂದ್ರ
- ಆವರಣ
- ಕವಲು
- ಯಾನ
- ಉತ್ತರಕಾಂಡ
- ಮತದಾನ
- ವಂಶವೃಕ್ಷ
- ಜಲಪಾತ (ಕಾದಂಬರಿ)
- ನಾಯಿ ನೆರಳು
- ತಬ್ಬಲಿಯು ನೀನಾದೆ ಮಗನೆ
- ಗೃಹಭಂಗ
ಆತ್ಮ ಚರಿತ್ರೆ
* ಭಿತ್ತಿ
ತತ್ತ್ವಶಾಸ್ತ್ರ
- ಸತ್ಯ ಮತ್ತು ಸೌಂದರ್ಯ
- ಸಂದರ್ಭ:ಸಂವಾದ
- ಸಾಹಿತ್ಯ ಮತ್ತು ಪ್ರತೀಕ
- ಕಥೆ ಮತ್ತು ಕಥಾವಸ್ತು
ಚಲನಚಿತ್ರವಾಗಿರುವ ಕಾದಂಬರಿಗಳು
- ವಂಶವೃಕ್ಷ
- ಮತದಾನ
- ನಾಯಿ ನೆರಳು
- ತಬ್ಬಲಿಯು ನೀನಾದೆ ಮಗನೆ
ಇವರಿಗೆ ಲಭಿಸಿದ ಪ್ರಮುಖ ಪ್ರಶಸ್ತಿಗಳು
- 2023 ರಲ್ಲಿ ಪದ್ಮಭೂಷಣ ಪ್ರಶಸ್ತಿ
- ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ – 2014
- ನಾಡೋಜ ಪ್ರಶಸ್ತಿ – 2011
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)- 1975
- ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ) -1966
- ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)- 2010
- ಪಂಪ ಪ್ರಶಸ್ತಿ – 2005
- ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ- 2007