newsics.com
ಸುರ್ಗುಜಾ(ಛತ್ತೀಸ್ಗಢ): ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ ಎರಡನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕಿ ಥಳಿಸಿ, 100 ಬಸ್ಕಿ ಹೊಡೆಸಿರುವ ಘಟನೆ ಸೀತಾಪುರದ ಪ್ರತಾಪ್ಗಢ ಪ್ರದೇಶದಲ್ಲಿ ನಡೆದಿದೆ.
ಸೀತಾಪುರದ ಡಿಎವಿ ಮುಖ್ಯಮಂತ್ರಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ.
100 ಬಸ್ಕಿ ಹೊಡೆದ ಕಾರಣ ವಿದ್ಯಾರ್ಥಿನಿಗೆ ನಿಂತುಕೊಳ್ಳಲೂ ಸಾಧ್ಯವಾಗಿಲ್ಲ. ಈ ಸಂಬಂಧ ಶುಕ್ರವಾರ ವಿದ್ಯಾರ್ಥಿನಿಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಟುಂಬಸ್ಥರು ಮೊದಲು ಶಾಲೆ ಪ್ರಾಂಶುಪಾಲರನ್ನು ಸಂಪರ್ಕಿಸಿ ಶಿಕ್ಷಕಿ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿದ್ದಾರೆ.
ತರಗತಿಯಲ್ಲಿದ್ದ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದಾಗ, ಶಿಕ್ಷಕಿ ನಮ್ರತಾ ಸಿಂಗ್ ಬಾಲಕಿಯ ಕಾಲುಗಳಿಗೆ ಕೋಲಿನಿಂದ ಥಳಿಸಿ ನಂತರ ತರಗತಿಯಲ್ಲಿ 100 ಬಸ್ಕಿ ಹೊಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ
ಬಸ್ಕಿ ಹೊಡೆಯುವ ವೇಳೆಯೂ ಥಳಿಸಿದ್ದರಿಂದ ವಿದ್ಯಾರ್ಥಿನಿಯ ಕಾಲುಗಳ ಸ್ನಾಯುಗಳಿಗೆ ಗಾಯವಾಗಿದೆ. ಇದರಿಂದಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ.
ಈ ಘಟನೆ ಸಂಬಂಧ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ಆರೋಪ ನಿರಾಕರಿಸಿದರು ಎಂದು ಕುಟುಂಬಸ್ಥರು ದೂರಿದ್ದಾರೆ.
ದೂರಿನ ನಂತರ, ಶಾಲಾ ಶಿಕ್ಷಣ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು.
ದೂರಿನ ಆಧಾರದ ಮೇಲೆ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಝಾ ಅವರು ಭಿಲಾಯಿಯಲ್ಲಿರುವ ಡಿಎವಿ ಮುಖ್ಯಮಂತ್ರಿ ಪಬ್ಲಿಕ್ ಶಾಲೆಗಳ ಪ್ರಾದೇಶಿಕ ನಿರ್ದೇಶಕರಿಗೆ ಪತ್ರ ಬರೆದು ಶಿಕ್ಷಕಿ ಮೇಲೆ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿದರು.
ಡಿಇಒ ಅವರ ಪತ್ರದ ನಂತರ, ಪ್ರಾದೇಶಿಕ ನಿರ್ದೇಶಕರು ಶನಿವಾರ ಶಿಕ್ಷಕಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಿದರು.
ಈ ವಿಷಯದಲ್ಲಿ ನಿರ್ಲಕ್ಷ್ಯ ಮತ್ತು ದೂರಿನ ನಂತರವೂ ಕ್ರಮ ಕೈಗೊಳ್ಳದಿದ್ದಕ್ಕಾಗಿ ಶಾಲೆಯ ಉಸ್ತುವಾರಿ ಪ್ರಾಂಶುಪಾಲರನ್ನು ರಜೆಯ ಮೇಲೆ ಕಳುಹಿಸಲಾಗಿದೆ.
ರೈಲಿನಲ್ಲೇ ಫುಲ್ ರೊಮ್ಯಾನ್ಸ್, ಸುತ್ತ ಪ್ರಯಾಣಿಕರಿದ್ದರೂ ಮೈಮರೆತ ಯುವ ಜೋಡಿ, ವೈರಲ್ ವಿಡಿಯೋ ನೋಡಿ
ನನ್ನದು 40 ಎಕರೆ ಬೆಳೆ ಹಾಳಾಯ್ತು, ನಾನ್ಯಾರ ಹತ್ರ ಹೇಳಲಿ… ಯುವ ರೈತನ ಮೇಲೆ ರೇಗಾಡಿದ ಮಲ್ಲಿಕಾರ್ಜುನ ಖರ್ಗೆ