newsics.com
ಬೆಂಗಳೂರು: ಇತ್ತೀಚೆಗೆ ರಾಜಧಾನಿಯಲ್ಲಿ ನಡುಗುವಷ್ಟು ಭಾರೀ ಚಳಿಯಾಗುತ್ತಿದೆ. ಇಡೀ ದಿನ ಮೋಡ ಕವಿದ ವಾತಾವರಣ, ಶೀತಗಾಳಿ, ಆಗಾಗ ಬರುವ ಜಿಟಿಜಿಟಿ ಮಳೆಯಿಂದ ಬೆಂಗಳೂರಿಗರು ಹೈರಾಣಾಗಿದ್ದಾರೆ.
ಗಟ್ಟಿ ಬಿಸಿಲು ಬರ್ತಿಲ್ಲ. ಬಟ್ಟೆಗಳು ಸರಿಯಾಗಿ ಒಣಗುತ್ತಿಲ್ಲ. ಬೆಳಗ್ಗೆ ಎದ್ದು ಬೇಗ ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ಹೋಗುವವರ ಪಾಡಂತೂ ಹೇಳತೀರದಾಗಿದೆ.
ನಗರದಲ್ಲಿ ಇತ್ತೀಚೆಗೆ ಹವಾಮಾನ ವೈಪರೀತ್ಯ ಪರಿಣಾಮ ಹೆಚ್ಚಾಗಿದೆ. ಆಗಾಗ ಮಳೆ ಬರುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇರ್ತಿದೆ. ಸಂಜೆ ಮೇಲೆ ಎಲ್ಲರೂ ಆಫೀಸ್ನಿಂದ ಹೊರಡುವ ಹೊತ್ತಿಗೆ ಸರಿಯಾಗಿ ಮಳೆ ಸುರಿಯುತ್ತಿದೆ.
ಈಗಂತೂ ಬಂಗಾಳ ಕೊಲ್ಲಿ ವಾಯುಭಾರ ಕುಸಿತವಾಗಿ, ವಾತಾವರಣ ಮತ್ತಷ್ಟು ಹದಗೆಟ್ಟಿದೆ.
ಮಳೆ ಜತೆ ಶೀತಗಾಳಿಯೂ ಬೀಸುತ್ತಿದ್ದು ನಡುಗುವಷ್ಟು ಚಳಿಯಾಗುತ್ತಿದೆ. ಇಂತಹ ವಿಚಿತ್ರ ವಾತಾವರಣದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಆಸ್ಪತ್ರೆಗೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ.
ಮಳೆ, ಶೀತಗಾಳಿಯಿಂದ ವ್ಯಾಪಾರಸ್ಥರಿಗೂ ನಷ್ಟವಾಗುತ್ತಿದೆ. ಸಾಲು ಸಾಲು ಹಬ್ಬಗಳು ಬರುತ್ತಿವೆ. ಆದರೆ ಮಳೆಯ ಕಾರಣಕ್ಕೆ ಸರಿಯಾಗಿ ಮಾರಾಟ ಮಾಡಲು ಆಗುತ್ತಿಲ್ಲ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಸುರಿದ ಮಳೆ, ಗಣೇಶ ಹಬ್ಬದ ಸಮಯದಲ್ಲಿ ಇನ್ನಷ್ಟು ಸುರಿಯುವ ಆತಂಕವನ್ನು ಉಂಟುಮಾಡುತ್ತಿದೆ.
ಬೆಂಗಳೂರು ನಗರಕ್ಕೆ 20-30 ನಿಮಿಷಗಳ ಮಳೆಯನ್ನೂ ತಡೆಯುವ ಸಾಮರ್ಥ್ಯವಿಲ್ಲ. ಮೂಲ ಸೌಕರ್ಯದ ಕೊರತೆಯ ಕಾರಣದಿಂದ, ನಗರದಲ್ಲಿ ಓಡಾಡುವುದೇ ಕಷ್ಟವಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಭಾನುವಾರದವರೆಗೂ (ಆಗಸ್ಟ್ 24) ಸಣ್ಣ ಮಳೆ ಮತ್ತು ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
School Holidays: ರಾಜ್ಯದಲ್ಲಿ ಮಳೆ ಅಬ್ಬರ – ನಾಳೆ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ