newsics.com
ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದ ತನಿಖಾ ಸಮಿತಿ ನಟಿ ರನ್ಯಾ ರಾವ್ ಮಲತಂದೆ ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ಸೋಮವಾರ ವಿಚಾರಣೆಗೊಳಪಡಿಸಿತು.
ರಾಮಚಂದ್ರರಾವ್ ಅವರು ಶಿಷ್ಟಾಚಾರ (ಪ್ರೋಟೊಕಾಲ್) ದುರ್ಬಳಕೆ ಮಾಡಿಕೊಂಡು ಚಿನ್ನ ಕಳ್ಳ ಸಾಗಣೆಗೆ ತಮ್ಮ ಮಲ ಮಗಳು ರನ್ಯಾ ರಾವ್ಗೆ ನೆರವಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು.
ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಸದ್ಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಹಿನ್ನೆಲೆಯಲ್ಲಿ ರೇಸ್ಕೋರ್ಸ್ ರಸ್ತೆಯ ಕೆಪಿಸಿಎಲ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಮಚಂದ್ರರಾವ್ ಅವರಿಗೆ ಸೂಚಿಸಲಾಗಿತ್ತು.
ಈ ನೋಟಿಸ್ನ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 5.30ಕ್ಕೆ ಕೆಪಿಸಿಎಲ್ ಕಚೇರಿಗೆ ಬಂದ ರಾಮಚಂದ್ರರಾವ್ ಅವರನ್ನು ಸಮಿತಿ ಅಧಿಕಾರಿಗಳು ಸತತ 3 ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್) ರಾಮಚಂದ್ರ ರಾವ್ ಅವರು ಪ್ರೋಟೊಕಾಲ್ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಗೌರವ್ ಗುಪ್ತ ಅವರು, ಪ್ರೋಟೊಕಾಲ್ ಸಿಬ್ಬಂದಿಯಾದ ಹೆಡ್ ಕಾನ್ಸ್ಟೆಬಲ್ ಬಸವರಾಜು ಮತ್ತು ವಿಮಾನ ನಿಲ್ದಾಣ ಗುಪ್ತಚರ ದಳ ವಿಭಾಗದ ಕಾನ್ಸ್ಟೆಬಲ್ ಧನುಷ್ ಕುಮಾರ್ ಅವರನ್ನು ಶುಕ್ರವಾರವೇ ವಿಚಾರಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ರನ್ಯಾ ರಾವ್ ಅವರು ನನಗೆ ದುಬೈನಿಂದ ಕರೆ ಮಾಡಿ ಪ್ರೋಟೊಕಾಲ್ ಪ್ರಕಾರ ಕೆಐಎಎಲ್ನಿಂದ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಅಲ್ಲದೆ, ತಮ್ಮ ಕುಟುಂಬದವರು ಯಾರೇ ಬಂದರೂ ಪ್ರೋಟೊಕಾಲ್ ನೀಡುವಂತೆ ಡಿಜಿಪಿ ರಾಮಚಂದ್ರ ರಾವ್ ಅವರ ಸೂಚನೆಯಿತ್ತು. ಹೀಗಾಗಿ, ರನ್ಯಾ ರಾವ್ ಅವರನ್ನು ಶಿಷ್ಟಾಚಾರದ ಪ್ರಕಾರ ಕರೆದುಕೊಂಡು ಬರಲು ಕೆಐಎಎಲ್ಗೆ ಹೋಗಿದ್ದೆ. ರಾಮಚಂದ್ರ ರಾವ್ರ ಸೂಚನೆಯಂತೆ ರನ್ಯಾ ರಾವ್ಗೆ ಎರಡು ಮೂರು ಬಾರಿ ಪ್ರೋಟೊಕಾಲ್ ಸೇವೆ ನೀಡಿದ್ದೆ. ಚಿನ್ನ ಕಳ್ಳ ಸಾಗಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಬಸವರಾಜು ಅವರು ಗೌರವ್ ಗುಪ್ತ ಎದುರು ಹೇಳಿಕೆ ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಮಚಂದ್ರ ರಾವ್ ಅವರಿಗಿದ್ದ ಪ್ರೋಟೊಕಾಲ್ ವ್ಯವಸ್ಥೆಯನ್ನು ಯಾರ್ಯಾರು ಬಳಸಿದ್ದಾರೆ? ಎಷ್ಟೆಷ್ಟು ಬಾರಿ ಪ್ರೋಟೊಕಾಲ್ ಬಳಕೆಯಾಗಿದೆ? ರಾಮಚಂದ್ರ ರಾವ್ ಹೆಸರಿನಲ್ಲಿ ರನ್ಯಾ ರಾವ್ ಎಷ್ಟು ಬಾರಿ ಪ್ರೋಟೊಕಾಲ್ ಸೌಲಭ್ಯ ಪಡೆದಿದ್ದಾರೆ ಎಂಬ ಮಾಹಿತಿಯನ್ನು ತನಿಖಾ ಸಮಿತಿ ಸಂಗ್ರಹಿಸಿದೆ.
ಈ ಎಲ್ಲಾ ಮಾಹಿತಿ, ಪ್ರೋಟೊಕಾಲ್ ಸಿಬ್ಬಂದಿ ಬಸವರಾಜು ಮತ್ತು ವಿಮಾನ ನಿಲ್ದಾಣ ಗುಪ್ತಚರ ದಳ ವಿಭಾಗದ ಕಾನ್ಸ್ಟೆಬಲ್ ಧನುಷ್ ಹೇಳಿಕೆ, ಅವರಿಂದ ವಶಪಡಿಸಿಕೊಂಡಿರುವ ದಾಖಲೆಗಳು ಹಾಗೂ ರಾಮಚಂದ್ರರಾವ್ ಅವರ ಹೇಳಿಕೆ ಆಧರಿಸಿ ಗೌರವ್ ಗುಪ್ತ ಸಮಿತಿಯು ವರದಿ ಸಿದ್ಧಪಡಿಸಿ ಎರಡು ದಿನದೊಳಗೆ ಸರಕಾರಕ್ಕೆ ಸಲ್ಲಿಸಲಿದೆ ಎಂದು ಗೊತ್ತಾಗಿದೆ.
ಒಂದು ವಾರದೊಳಗೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸರಕಾರ ಗೌರವ್ ಗುಪ್ತಾ ಸಮಿತಿಗೆ ಆದೇಶಿಸಿತ್ತು. ಈ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ತನಿಖಾ ವರದಿಯು ಬುಧವಾರ(ಮಾ.19) ಸರಕಾರದ ಕೈಸೇರುವ ಸಾಧ್ಯತೆಯಿದೆ.
ಡಿಆರ್ಐ ಕೋರ್ಟ್ಗೆ ಸಲ್ಲಿಸಿದ್ದ ಅರೆಸ್ಟ್ ಮೆಮೊದಲ್ಲೂ ಶಿಷ್ಟಾಚಾರದ ಮೂಲಕ ಆರೋಪಿತೆ ರನ್ಯಾ ರಾವ್ ಅವರನ್ನು ರಾಜ್ಯದ ಪ್ರೋಟೊಕಾಲ್ ಸಿಬ್ಬಂದಿ ಕೆಐಎಎಲ್ನಿಂದ ಹೊರಗೆ ಕರೆದೊಯ್ಯಲು ಯತ್ನಿಸುತ್ತಿದ್ದರು ಎಂದು ಉಲ್ಲೇಖಿಸಿತ್ತು.
ಚಿನ್ನದ ಕಳ್ಳ ಸಾಗಣೆಗೆ ‘ವ್ಯವಸ್ಥಿತ ಅತ್ಯಾಧುನಿಕ ವಿಧಾನ’ ಬಳಸಲಾಗಿದೆ. ರಾಜ್ಯದ ಪ್ರೋಟೊಕಾಲ್ ಸಿಬ್ಬಂದಿಯನ್ನು ಬಳಸಿಕೊಂಡು ವಿಮಾನ ನಿಲ್ದಾಣದಿಂದ ಚಿನ್ನದ ಕಳ್ಳ ಸಾಗಣೆ ಮಾಡಲಾಗುತ್ತಿತ್ತು ಎಂದು ಡಿಆರ್ಐ ಹೇಳಿತ್ತು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರಕಾರ ಗೌರವ್ ಗುಪ್ತಾ ನೇತೃತ್ವದ ತನಿಖಾ ಸಮಿತಿ ರಚಿಸಿತ್ತು.
ಬೋಳು ತಲೆಯಲ್ಲಿ ಕೂದಲು ಬೆಳೆಸಲು ಕೊಟ್ಟ ಎಣ್ಣೆಯಿಂದ 20 ಮಂದಿಗೆ ಕಣ್ಣಿನ ಸೋಂಕು, ಆಸ್ಪತ್ರೆಗೆ ದಾಖಲು