newsics.com
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆಲುವನ್ನು ಕಂಡಿದೆ. ಈ ಮೂಲಕ ಫೈನಲ್ ತಲುಪಿದೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 14 ವರ್ಷಗಳ ನಂತರ ಐಸಿಸಿ ಟೂರ್ನಮೆಂಟ್ನ ನಾಕೌಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಈ ಹಿಂದೆ 2011 ರ ಏಕದಿನ ವಿಶ್ವಕಪ್ನ ಕ್ವಾರ್ಟರ್ ಫೈನಲ್ನಲ್ಲಿ, ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿ ಸೆಮಿಫೈನಲ್ ಎಂಟ್ರಿಕೊಟ್ಟಿದಲ್ಲದೆ, ಆ ನಂತರ ನಡೆದ ಫೈನಲ್ನಲ್ಲಿ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಸೆಮಿಫೈನಲ್ನಲ್ಲಿ ಸೋಲಿಸಿ ಟೂರ್ನಿಯಿಂದ ಹೊರದಬ್ಬಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 264 ರನ್ ಕಲೆಹಾಕಿ ಆಲ್ಔಟ್ ಆಗಿ ಭಾರತಕ್ಕೆ 265 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 48.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿದೆ.
ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳು ಉತ್ತಮ ಪ್ರದರ್ಶನ ನೀಡಿದ್ದೇ ಗೆಲುವಿಗೆ ಕಾರಣವಾಗಿದ್ದು, ಸಮತೋಲನದ ಆಟದಿಂದ ಭಾರತ ಗೆದ್ದು ಬೀಗಿದೆ.
ಆಸ್ಟ್ರೇಲಿಯಾ ಇನ್ನಿಂಗ್ಸ್: ಕೇವಲ 4 ರನ್ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಪಡೆದುಕೊಂಡ ತಂಡದ ಪರ ನಾಯಕ ಸ್ಟೀವನ್ ಸ್ಮಿತ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ ಉತ್ತಮ ಪ್ರದರ್ಶನ ನೀಡಿದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕಾನ್ನಲ್ಲಿ ಡಕ್ಔಟ್ ಆದರೆ ಟ್ರಾವಿಸ್ ಹೆಡ್ 39, ಸ್ಟೀವನ್ ಸ್ಮಿತ್ 73, ಮಾರ್ನಸ್ ಲಬುಶೇನ್ 29, ಜೋಸ್ ಇಂಗ್ಲಿಸ್ 11, ಅಲೆಕ್ಸ್ ಕ್ಯಾರಿ 61, ಗ್ಲೆನ್ ಮ್ಯಾಕ್ಸ್ವೆಲ್ 7, ಬೆನ್ ಡ್ವಾರ್ಶಿಯಸ್ 19, ಆಡಂ ಜಂಪಾ 7, ನಾಥನ್ ಎಲ್ಲಿಸ್ 10 ಹಾಗೂ ತನ್ವೀಸ್ ಸಂಘ ಅಜೇಯ 1 ರನ್ ಗಳಿಸಿದರು.
ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್, ವರುಣ್ ಚಕ್ರವರ್ತಿ ಹಾಗೂ ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್ ಮತ್ತು ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ನಾಕ್ಔಟ್ ಪಂದ್ಯದಲ್ಲಿ ಮತ್ತೊಮ್ಮೆ ಎಡವಿದರು. ಎರಡು ಬಾರಿ ಜೀವದಾನ ಪಡೆದ ರೋಹಿತ್ ಶರ್ಮಾ 28 ರನ್ ಗಳಿಸಿದರಾದರೂ ಜವಾಬ್ದಾರಿಯುತ ಆಟವನ್ನಾಡಲಿಲ್ಲ. ಇನ್ನುಳಿದಂತೆ ಗಿಲ್ ಕೇವಲ 8 ರನ್ ಕಲೆಹಾಕಿದರು. ಹೀಗೆ ಆರಂಭಿಕರ ವಿಕೆಟ್ಗಳನ್ನು ವೇಗವಾಗಿ ಕಳೆದುಕೊಂಡ ಭಾರತಕ್ಕೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಸುಧಾರಣೆ ತಂದರು. ಶ್ರೇಯಸ್ ಐಯ್ಯರ್ 45 ರನ್ ಬಾರಿಸಿದರೆ, ಮತ್ತೊಂದೆಡೆ ವಿಕೆಟ್ ಬೀಳುತ್ತಿದ್ದರೂ ಕೊಹ್ಲಿ 42 ಓವರ್ಗಳವರೆಗೂ ಹೋರಾಟ ನಡೆಸಿ 84 ರನ್ ಬಾರಿಸಿದರು. ಇನ್ನುಳಿದಂತೆ ಶ್ರೇಯಸ್ ಐಯ್ಯರ್ ಬಳಿಕ ಅಕ್ಷರ್ ಪಟೇಲ್, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಸಹ ತಮ್ಮ ಪಾಲಿನ ಕರ್ತವ್ಯವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಕ್ಷರ್ ಪಟೇಲ್ 27, ಹಾರ್ದಿಕ್ ಪಾಂಡ್ಯ 28, ರವೀಂದ್ರ ಜಡೇಜಾ ಅಜೇಯ 2 ಹಾಗೂ ಕೆಎಲ್ ರಾಹುಲ್ ಅಜೇಯ 2 ರನ್ ಬಾರಿಸಿದರು.
ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ ಹಾಗೂ ಆಡಂ ಜಂಪಾ ತಲಾ ಎರಡೆರಡು ವಿಕೆಟ್ ಪಡೆದರೆ, ಕೂಪರ್ ಕಾನೊಲ್ಲಿ ಹಾಗೂ ಬೆನ್ ಡ್ವಾರ್ಷಿಯಸ್ ತಲಾ ಒಂದೊಂದು ವಿಕೆಟ್ ಪಡೆದರು.