newsics.com
ಅಂಕೋಲಾ: ಕಾರವಾರ ನೌಕಾನೆಲೆ ಮಾಹಿತಿ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹಳವಳ್ಳಿಯ ಅಕ್ಷಯ್ ನಾಯ್ಕ್ ಹಾಗೂ ವೇತನ್ ತಾಂಡೇಲ್ ಎಂಬುವವರನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.
ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಇವರು ಹಣಕ್ಕಾಗಿ ಸೀಬರ್ಡ್ ನೌಕಾನೆಲೆಯ ಫೋಟೋ ಹಾಗೂ ಇತರ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂಬ ಆರೋಪವಿದೆ.
ಸೀಬರ್ಡ್ ನೌಕಾನೆಲೆ ಸಿಬ್ಬಂದಿಗಳಿಗೆ ಹನಿಟ್ರ್ಯಾಪ್ ಮಾಡಿದ ಯುವತಿಯೊಬ್ಬಳು ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡಿದ್ದಾಳೆ ಎನ್ನಲಾಗಿದ್ದು, ಈ ಸಂಬಂಧ ಎನ್ ಐ ಎ ಇತ್ತೀಚೆಗೆ ತನಿಖೆ ನಡೆಸುತ್ತಿತ್ತು. ಕಾರವಾರದ ಸೀಬರ್ಡ್ ನೌಕಾನೆಲೆ ಸಿಬ್ಬಂದಿಗಳಿಗೆ ಫೇಸ್ ಬುಕ್ ಮೂಲಕ ರಿಕ್ವೆಸ್ಟ್ ಕಳುಹಿಸಿ ನಂತರ ಅವರ ಸ್ನೇಹ ಸಂಪಾದಿಸಿ ನೌಕಾನೆಲೆಯ ಬಗ್ಗೆ ಗೌಪ್ಯ ಮಾಹಿತಿಯನ್ನು ಕಲೆ ಹಾಕಿ ಅದನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದಳು. ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದ್ಗಾ ಗ್ರಾಮದ ವೇತನ್ ತಾಂಡೇಲ್ ಮತ್ತು ಹಳವಳ್ಳಿ ಗ್ರಾಮದ ಅಕ್ಷಯ್ ರವಿ ನಾಯ್ಕ್ ಎಂಬುವವರನ್ನು ಎನ್ ಐ ಎ ವಿಚಾರಣೆ ಪಡಿಸಿ ಕಳುಹಿಸಿದ್ದರು.
ಆರು ಜನರನ್ನು ಒಳಗೊಂಡ ಎನ್.ಐ.ಎ ಅಧಿಕಾರಿಗಳ ತಂಡ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮುದಗಾದ ವೇತನ್ ತಾಂಡೇಲ್ ಮತ್ತು ಅಂಕೋಲಾ ತಾಲೂಕಿನ ಹಳವಳ್ಳಿಯ ಅಕ್ಷಯ ನಾಯ್ಕ ಅವರನ್ನು ವಶಕ್ಕೆ ಪಡೆದು ಕಾರವಾರ ಮತ್ತು ಅಂಕೋಲಾಗಳಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದು ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎನ್ನಲಾಗಿದೆ.