newsics.com
ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ನಡುವಣ ಜಟಾಪಟಿ ವಿಕೋಪಕ್ಕೆ ತಿರುಗಿದೆ. ಸಚಿವೆ ಮಾಡಿರುವ ಗಂಭೀರ ಆರೋಪ ಒಂದೆಡೆಯಾದರೆ, ಇದೀಗ ತಮ್ಮ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಕೊಲೆಗೆ ಸಂಚು ಹೂಡಲಾಗಿದೆ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಜತೆಗೆ, ಪ್ರತಿ ದೂರು ಕೂಡ ನೀಡಿದ್ದಾರೆ.
ಇನ್ನು ಖಾನಾಪುರ ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಕಾನೂನು ಸುವ್ಯವಸ್ಥೆ ಕಾರಣ ಪೊಲೀಸರು ಸಿಟಿ ರವಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಮುಂದಾದರು. ಈ ವೇಳೆಯೂ ಭಾರಿ ಹೈಡ್ರಾಮವೇ ನಡೆಯಿತು. ಬಿಜೆಪಿ ನಾಯಕರು ಏಕಾಏಕಿ ಮುಗಿಬಿದ್ದರು. ಇದರಿಂದ ಭಾರಿ ತಳ್ಳಾಟ, ನೂಕಾಟವೇ ನಡೆಯಿತು.
ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ಹೊರಹಾಕಿದ ಸಿಟಿ ರವಿ ನನ್ನ ಕೊಲೆಗೆ ಸಂಚು ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ರಾತ್ರಿ ಬಿಗಿಭದ್ರತೆಯಲ್ಲಿ ಸಿಟಿ ರವಿಯನ್ನು ಖಾನಾಪುರ ಠಾಣೆಯಿಂದ ಬೆಂಗಳೂರಿಗೆ ಬಿಗಿಭದ್ರತೆಯಲ್ಲಿ ಕರೆತರಲಾಗುತ್ತಿದೆ. ಇಂದು ಸಂಜೆಯೊಳಗೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್ಗೆ ಸಿಟಿ ರವಿಯನ್ನು ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.