newsics.com
ಹೈದರಾಬಾದ್: ನಟಿ ಕಸ್ತೂರಿ ಶಂಕರ್ ಅವರನ್ನು ಚೆನ್ನೈ ಪೊಲೀಸರು ಹೈದರಾಬಾದ್ ನ ಗಚ್ಚಿಬೋಲಿಯಲ್ಲಿ ಬಂಧಿಸಿದ್ದಾರೆ.
ಹೌದು, ನಟಿ ಕಸ್ತೂರಿ ಶಂಕರ್ ವಿರುದ್ಧ ಕೆಲ ದಿನಗಳ ಹಿಂದೆ ಚೆನ್ನೈ ಸೇರಿದಂತೆ ತಮಿಳುನಾಡಿನ ಇನ್ನೂ ಕೆಲವು ಕಡೆ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೆ ನಟಿ ಕಸ್ತೂರಿ ಶಂಕರ್ ರಾಜ್ಯ ಬಿಟ್ಟು ಪರಾರಿಯಾಗಿದ್ದರು. ಅದರ ಜೊತೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರಾದರೂ ಸಹ ನ್ಯಾಯಾಲಯವು ಅರ್ಜಿ ನಿರಾಕರಿಸಿದ ಬೆನ್ನಲ್ಲೆ ಇದೀಗ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 4ರಂದು ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಆ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನಟಿ ಕಸ್ತೂರಿ ಶಂಕರ್ ಸಹ ಭಾಗವಹಿಸಿ, ನೆರೆದಿದ್ದ ಸಭಿಕರ ಎದುರಿಗೆ ತೆಲುಗು ಭಾಷೆ ಮತ್ತು ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಾಗೆ ಆಡಿದ ಆ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಆಂಧ್ರ ಮತ್ತು ತೆಲಂಗಾಣದಲ್ಲಿ ನಟಿಯ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆರಂಭದಲ್ಲಿ ತಾವಾಡಿದ ಮಾತುಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಟೀಕೆಗಳ ಸುರಿಮಳೆ ಹರಿದುಬಂದಿತು. ತೆಲುಗು ಭಾಷಿಕ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ನಟಿಯನ್ನು ಬಂಧಿಸಲಾಗಿದೆ.