newsics.com
ಚಂಡೀಗಢ: ಡಾಭಾದಲ್ಲಿ ಚಿಕನ್ ನೀಡಿಲ್ಲ ಎಂದು ಹೋಟೆಲ್ನ ಸಪ್ಲೈಯರ್ನನ್ನು ಯುವಕರ ಗುಂಪೊಂದು ಹತ್ಯೆಗೈದ ಘಟನೆ ಚಂಡೀಗಢದಲ್ಲಿ ನಡೆದಿದೆ.
ಜಸ್ಪ್ರೀತ್ ಸಿಂಗ್ (37) ಮೃತ ಸಪ್ಲೈಯರ್ ಹಾಗೂ ಆಕಾಶ್ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ಸಾಗರ್, ಜೋಗಿಂದರ್, ಗುರ್ಮೀತ್, ವೀರು ಮತ್ತು ರಾಜಿ ಎಂದು ಗುರುತಿಸಲಾಗಿದೆ.
ಹೌದು, ನಾಲ್ವರು ಯುವಕರ ಗುಂಪೊಂದು ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್ಗೆ ಬಂದಿದ್ದರು. ಈ ವೇಳೆ ಚಿಕನ್ ಬೇಕು ಎಂದು ಕೇಳಿದ್ದು, ಹೋಟೆಲ್ ಮುಚ್ಚುವ ಸಮಯವಾಯ್ತು ಎಂದು ಅವರಿಗೆ ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಗಲಾಟೆ ನಡೆಸಿ ಗುಂಪು ಅಲ್ಲಿಂದ ತೆರಳಿದೆ. ಸುಮಾರು 45 ನಿಮಿಷಗಳ ನಂತರ ಕ್ರಿಕೆಟ್ ವಿಕೆಟ್ ಮತ್ತು ಹರಿತವಾದ ಆಯುಧಗಳನ್ನು ತಂದು ಹೋಟೆಲ್ನಲ್ಲಿದ್ದ ಜಸ್ಪ್ರೀತ್ ಮತ್ತು ಆಕಾಶ್ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಜಸ್ಪ್ರೀತ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.