newsics.com
ಮೈಸೂರು: ವಿವಾದದ ಜಮೀನಿನ ಬದಲಿಗೆ ವಿಜಯನಗರದಲ್ಲಿ ಕೋಟ್ಯಂತರ ರೂ ಬೆಲೆಬಾಳುವ 14 ನಿವೇಶನ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮೈಸೂರಿನ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಪ್ರಕರಣದ ಎರಡನೇ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿ, ಮಾಹಿತಿ ಸಂಗ್ರಹಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಬಹಿರಂಗವಾಗಿ ನೋಟಿಸ್ ನೀಡಿ ಪ್ರಕರಣದ ಎರಡನೇ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಬೇಕಾಗಿತ್ತು. ಆದರೆ ಸಿಎಂ ಪತ್ನಿ ಎಂಬ ಕಾರಣಕ್ಕಾಗಿ ಪಾರ್ವತಿ ಅವರನ್ನು ಅಜ್ಞಾತ ಸ್ಥಳದಲ್ಲಿ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಸಿಎಂ ಪತ್ನಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ.
ಮೈಸೂರಿನ ದೇವನೂರು ಮೂರನೇ ಹಂತದ ಜಮೀನಿಗೆ ಬದಲಾಗಿ ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಮಂಜೂರು ಮಾಡಲಾಗಿತ್ತು. ಬದಲಿ ನಿವೇಶನಗಳ ಹಂಚಿಕೆಯಲ್ಲಿ ಕಾನೂನುಬಾಹಿರವಾಗಿ ನಡೆದುಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ಅಲ್ಲದೇ ನ್ಯಾಯಾಲಯ ಕೂಡ ಪ್ರಕರಣದ ಆರೋಪಿಗಳ ವಿರುದ್ಧ ಮೂರು ತಿಂಗಳೊಳಗೆ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣದ ಎ1 ಆರೋಪಿ ಸಿಎಂ ಸಿದ್ದರಾಮಯ್ಯ, ಎ2 ಆರೋಪಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ , ಎ3 ಆರೋಪಿ ಪಾರ್ವತಿ ಸಹೋದರ ಮಲ್ಲಿಕಾರ್ಜುನಸ್ವಾಮಿ, ಎ4 ಆರೋಪಿ ಜಮೀನು ಮಾರಿದ ದೇವರಾಜ್ ಹಾಗೂ ಇತರರ ವಿರುದ್ಧ ಎ್ಐಆರ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ಪ್ರಕರಣದ ಮೂರನೇ ಆರೋಪಿ ಸಿಎಂ ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ನಾಲ್ಕನೇ ಆರೋಪಿ ಜಮೀನಿನ ಮಾಲೀಕ ದೇವರಾಜ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಎರಡನೇ ಆರೋಪಿಯಾಗಿರುವ ಪಾರ್ವತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ನೋಟಿಸ್ ಜಾರಿಗೊಳಿಸಲಾಗಿತ್ತು. ವಿಚಾರಣೆಯ ಜಾಗ ಬಹಿರಂಗಗೊಳ್ಳದಂತೆ ಗೌಪ್ಯಸ್ಥಳದಲ್ಲಿ ನಡೆಯುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದ್ದರಿಂದ ಶುಕ್ರವಾರ ತನಿಖಾಧಿಕಾರಿಯ ಎದುರು ಹಾಜರಾದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸತತವಾಗಿ ಮೂರು ಗಂಟೆ ಕಾಲ ವಿಚಾರಣೆ ಎದುರಿಸಿದ್ದಾರೆ.
ಈಗಾಗಲೇ ನಿವೇಶನ ಹಂಚಿಕೆ ಪ್ರಕರಣದ ಸಂಬಂಧವಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಜಿ.ಕುಮಾರನಾಯ್ಕ್, ಅಂದಿನ ಮುಡಾ ಆಯುಕ್ತ ಎಸ್.ಪಾಲಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗಿದೆ.
ಗೌಪ್ಯ ವಿಚಾರಣೆ ಚರ್ಚೆಗೆ ಗ್ರಾಸ:
ಲೋಕಾಯುಕ್ತ ಎಸ್ಪಿ ಆಗಿರುವ ತನಿಖಾಕಾರಿ ಉದೇಶ್ ಅವರನ್ನು ಬಿಟ್ಟು ಕಚೇರಿಯ ಯಾವ ಹಂತದ ಅಧಿಕಾರಿಗಳಿಗೂ ಪಾರ್ವತಿ ಅವರು ಬರುವ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.
ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಕೆಲವು ದಾಖಲೆಗಳನ್ನು ಪಡೆದಿದ್ದಾರೆ. ಲೋಕಾಯುಕ್ತ ಕಚೇರಿಗೆ ಕರೆಸಿಕೊಳ್ಳದೆ ಗೌಪ್ಯ ಸ್ಥಳದಲ್ಲಿ ವಿಚಾರಣೆ ಮಾಡಿರುವುದು ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಸಿಎಂ ವಿಚಾರಣೆ ಸಾಧ್ಯತೆ:
ಈಗಾಗಲೇ ಪ್ರಕರಣದ ಮೂವರು ಆರೋಪಿಗಳ ವಿಚಾರಣೆ ನಡೆಸಿರುವ ಮೈಸೂರಿನ ಲೋಕಾಯುಕ್ತ ಪೊಲೀಸ್ ಅಕಾರಿಗಳು ಪ್ರಕರಣದ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಥಿಯೇಟರ್ನಲ್ಲೇ ಕನ್ನಡದ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ! ವಿಡಿಯೋ ನೋಡಿ