newsics.com
ಬೆಂಗಳೂರು: ಟಿಕೆಟ್ ಸಿಗುವುದಿಲ್ಲವೆಂಬ ಕಾರಣಕ್ಕೆ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಸೇರಿ ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಪಡೆದಿರುವ ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಅಪ್ಪನ ವಿರುದ್ಧ ಸೋಶಿಯಲ್ ಮೀಡಿಯಾದ ಮೂಲಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲವನ್ನೂ ಬಯಲು ಮಾಡಿ ಮರ್ಯಾದೆ ಕಳೆಯುವೆ ಎಂದು ಗುಡುಗಿದ್ದಾರೆ. ವಿಡಿಯೊ ಪೋಸ್ಟ್ ಮಾಡಿರುವ ಅವರು ಅಪ್ಪ ಯೋಗೇಶ್ವರ್ ಹೆಸರು ಹೇಳದೆಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನನಗೆ ರಾಜಕೀಯಕ್ಕೆ ಬರಲು ಮನಸ್ಸು ಇತ್ತು. ಅದಕ್ಕೂ ಅಡ್ಡಗಾಲು ಹಾಕಿದರು. ಸಮಾಜ ಸೇವೆಗೆ ಇಳಿಯದಂತೆ ತಡೆದರು. ವಿದ್ಯಾಭ್ಯಾಸ ಮುಂದುವರಿಸದಂತೆ ತಡೆದರು. ಯಾವ ಕ್ಷೇತ್ರದಲ್ಲೂ ಮುಂದೆ ಬರಲು ಅವರು ಬಿಡುತ್ತಿಲ್ಲ. ಜೀವನದಲ್ಲಿ ನೆಮ್ಮದಿಯಾಗಿರುವುದಕ್ಕೂ ಬಿಡುತ್ತಿಲ್ಲ. ನನ್ನ ಜೀವನದ ಕಹಿ ಸತ್ಯವನ್ನು ಹೊರತರುತ್ತೇನೆ’ ಎಂದು ನಿಶಾ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಯೋಗೇಶ್ವರ್ ಹಾಗೂ ಪುತ್ರಿ ನಿಶಾ ಮಧ್ಯೆ ಕಳೆದ 4-5 ತಿಂಗಳಿಂದ ವೈಮನಸ್ಸು ಮೂಡಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಶಾ ಅವರು ತಂದೆ ಪರ ಪ್ರಚಾರ ನಡೆಸಿದ್ದರು. ಬಳಿಕ ಅವರ ನಡುವೆ ಮುನಿಸು ಉಂಟಾಗಿತ್ತು. ಬಳಿಕ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ.