newsics.com
ಮುಂಬೈ: ಜೀವ ತೆಗೆಯುವ ಶಪಥ ತೊಟ್ಟು ಬಾಲಿವುಡ್ ನಟ ಸಲ್ಮಾನ್ ಖಾನ್ ಬೆನ್ನುಬಿದ್ದಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಎನ್ಕೌಂಟರ್ಗೆ ಪಂಥಾಹ್ವಾನ ನೀಡಲಾಗಿದೆ.
ಆದರೆ, ಲಾರೆನ್ಸ್ ಬಿಷ್ಣೋಯಿ ತಲೆಗೆ ಬಹುಮಾನ ಕಟ್ಟಿರುವುದು ಸರ್ಕಾರವೂ ಅಲ್ಲ, ಪೊಲೀಸರೂ ಅಲ್ಲ. ಬದಲಿಗೆ ಒಂದು ಸಂಘಟನೆ.
ಲಾರೆನ್ಸ್ ಬಿಷ್ಣೋಯಿಯನ್ನು ಜೈಲಲ್ಲೇ ಮುಗಿಸುವವರಿಗೆ ಭರ್ಜರಿ ಹಣ ಅಂದರೆ 1,11,11,111 ರೂ. ಕೊಡುವುದಾಗಿ ಘೋಷಿಸಲಾಗಿದೆ. ಈ ಬಹುಮಾನ ಸೂಪರ್ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸಲ್ಮಾನ್ ಖಾನ್ ಪಾಲಿಗೆ ಬೆಂಬಿಡದಂತೆ ಕಾಡುತ್ತಿರುವ ಲಾರೆನ್ಸ್ ಬಿಷ್ಣೋಯಿ, ಬಾಲಿವುಡ್ ನಟನ ಹತ್ಯೆಯೇ ಜೀವನದ ಪರಮೋದ್ದೇಶ ಎಂದಿದ್ದಾನೆ. ಬಿಷ್ಣೋಯಿ ದ್ವೇಷದಿಂದ ಮುಕ್ತರಾಗಬೇಕು ಎಂದರೆ 5 ಕೋಟಿ ರೂಪಾಯಿ ಕೊಡಬೇಕು ಎಂದು ಆತನ ಗ್ಯಾಂಗ್ನವರು ಆಫರ್ ನೀಡಿದ್ದಾರೆ. ಅದರ ಬೆನ್ನಲ್ಲೇ ಸಲ್ಮಾನ್ ಖಾನ್ ಅವರು ಬರೋಬ್ಬರಿ 2 ಕೋಟಿ ರೂಪಾಯಿಗೆ ಒಂದು ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದು, ದುಬೈನಿಂದ ಬರಲಿದೆ.
ಈ ಮಧ್ಯೆ ಈಗ ಕ್ಷತ್ರಿಯ ಕರ್ಣಿ ಸೇನಾ ಎಂಬ ಸಂಘಟನೆಯೊಂದು ಲಾರೆನ್ಸ್ ಬಿಷ್ಣೋಯಿ ಹತ್ಯೆ ಮಾಡಿದ ಪೊಲೀಸ್ ಅಧಿಕಾರಿಗೆ ಒಂದು ಕೋಟಿ, ಹನ್ನೊಂದು ಲಕ್ಷ, ಹನ್ನೊಂದು ಸಾವಿರದ ನೂರಾ ಹನ್ನೊಂದು ರೂಪಾಯಿ ನೀಡುವುದಾಗಿ ಘೋಷಿಸಿದೆ.
ಈ ಬಗ್ಗೆ ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಅವರು ಒಂದು ವಿಡಿಯೊ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಸದ್ಯ ಗುಜರಾತ್ನ ಸಬರಮತಿ ಜೈಲಲ್ಲಿದ್ದಾನೆ. ಆದರೆ ಅಲ್ಲಿದ್ದುಕೊಂಡೇ ಆತ ರಾಷ್ಟ್ರದೊಳಗಿನ, ಭಾರತದ ಹೊರಗಿನ ತನ್ನ ಗ್ಯಾಂಗ್ನ ಜನರನ್ನು ಸಂಭಾಳಿಸುತ್ತಿದ್ದಾನೆ. ಈತ ಜೈಲು ಸೇರಿದ್ದು ಡ್ರಗ್ಸ್ ಸ್ಮಗ್ಲಿಂಗ್ ಕೇಸ್ನಲ್ಲಿ. ಏಪ್ರಿಲ್ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಹೊರಗೆ ಫೈರಿಂಗ್ ಆಗಿತ್ತು. ಆದೂ ಕೂಡ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಕೃತ್ಯವೇ ಆಗಿತ್ತು. ಅವನೇ ಮಾಸ್ಟರ್ ಮೈಂಡ್ ಎಂದು ಗೊತ್ತಿದ್ದರೂ, ಬಿಷ್ಣೋಯಿಯನ್ನ ಮುಂಬೈ ಪೊಲೀಸರು ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಲಿಲ್ಲ.ಇದೀಗ ಕರ್ಣಿ ಸೇನಾದಿಂದ ಪೊಲೀಸರಿಗೇ ಆಫರ್ ನೀಡಲಾಗಿದೆ.
ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಅವರು ಲಾರೆನ್ಸ್ ಬಿಷ್ಣೋಯಿ ವಿರುದ್ಧ ಕಿಡಿಕಾರಿದ್ದಾರೆ. ಆತ ನಮ್ಮ ಸೇನೆಯ ಮುಖ್ಯಸ್ಥ, ನಮ್ಮೆಲ್ಲರ ಪಾಲಿಗೆ ಗುರುವಾಗಿದ್ದ ಅಮರ್ ಶಹೀದ್ ಸುಖ್ದೇವ್ ಸಿಂಗ್ ಜೀ ಅವರನ್ನು ಹತ್ಯೆ ಮಾಡಿದವನು ಎಂದು ಹೇಳಿದ್ದಾರೆ.
ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು 2023ರ ಡಿಸೆಂಬರ್ 5ರಂದು ಅಪರಿಚಿತರು ಹತ್ಯೆಗೈದಿದ್ದರು. ಅದಾದ ಬಳಿಕ ಈ ಕೊಲೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು.
ಕಾಮನ್ವೆಲ್ತ್ ಕ್ರೀಡಾಕೂಟ: 9 ಆಟಗಳಿಗೆ ಗೇಟ್ಪಾಸ್, ಭಾರತಕ್ಕೆ ಗ್ರೇಟ್ ಲಾಸ್
ಮೈಸೂರಲ್ಲಿ ಸೋನಿಯಾ, ಪ್ರಿಯಾಂಕಾ ವಾಸ್ತವ್ಯ, ಇಂದು ವಯನಾಡಿನಲ್ಲಿ ನಾಮಪತ್ರ ಸಲ್ಲಿಕೆ
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್ ಮೂಲಕ ದರ್ಶನ್ ಶಿಫ್ಟ್